ಸರ್ಕಾರದ ನೂರು ದಿನದ ಬಗ್ಗೆ ಸಿದ್ದರಾಮಯ್ಯ ಟೀಕೆಗೆ ತಿರುಗೇಟು: ಬಿಎಸ್ ವೈ ವಿಡಿಯೋ ವೈರಲ್ ಗೆ ಬೇಸರ ವ್ಯಕ್ತಪಡಿಸಿದ ಸಚಿವ ವಿ.ಸೋಮಣ್ಣ…

ಮೈಸೂರು,ನ,2,2019(www.justkannada.in): ಸರ್ಕಾರದ  ನೂರು ದಿನದ ಸಾಧನೆ ಬಗ್ಗೆ ಟೀಕೆ ಮಾಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ತಿರುಗೇಟು ನೀಡಿರುವ ವಸತಿ ಸಚಿವ ವಿ.ಸೋಮಣ್ಣ, ಕೈಲಾದವರು ಮೈ ಪರಚಿಕೊಂಡರು ಎಂಬಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ವಿ ಸೋಮಣ್ಣ. ಸಿದ್ದರಾಮಯ್ಯ ನೂರು ದಿನದಲ್ಲಿ ಏನು ಮಾಡಿದ್ದರು ? ಸಿದ್ದರಾಮಯ್ಯ ಅನುಭವದ ಕೊರತೆಯಿಂದ ಮಾತನಾಡುತ್ತಿದ್ದಾರಾ ? ಉದ್ದೇಶಪೂರ್ವಕವಾಗಿ ಮಾತನಾಡುತ್ತಿದ್ದಾರಾ ಗೊತ್ತಿಲ್ಲ. ಅವರ ಅವಧಿಯಲ್ಲಿ ಏನಾಗಿತ್ತು ಅನ್ನೋದನ್ನ ಚರ್ಚೆ ಮಾಡಲಿ. ಅವರ ಕಾಲದಲ್ಲಿ ಬರಗಾಲ ಅವರಿಸಿತ್ತು. ನಮ್ಮ ಕಾಲದಲ್ಲಿ ರಾಜ್ಯ  ಸುಭೀಕ್ಷದಿಂದ ಕೂಡಿದೆ. ವರ್ಗಾವಣೆ ದಂಧೆ ಆರೋಪ ಬಗ್ಗೆ ಚರ್ಚೆಯಾಗಲಿ ಎಂದು ಸವಾಲು ಹಾಕಿದರು. ನಾನು ಇದುವರೆಗೂ ಒಂದು ವರ್ಗಾವಣೆ ಪತ್ರಕ್ಕೆ ಸಹಿ ಹಾಕಿಲ್ಲ ಎಂದು  ತಿಳಿಸಿದರು.

ಅನರ್ಹ ಶಾಸಕರ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ವಿಡಿಯೋ ವೈರಲ್ ಆದ ವಿಚಾರ ಕುರಿತು  ಬೇಸರ ವ್ಯಕ್ತಪಡಿಸಿದ ಸಚಿವ ವಿ.ಸೋಮಣ್ಣ, ಯಡಿಯೂರಪ್ಪ ವಾಸ್ತವ ವಿಚಾರ ತಿಳಿಸಿದ್ದಾರೆ. ವಿಡಿಯೋ ವೈರಲ್ ಆಗಬಾರದಿತ್ತು. ಅನರ್ಹರಿಂದಲೇ ಯಡಿಯೂರಪ್ಪ ಸಿಎಂ ಆಗಿದ್ದು. ಅವರು ಬಿಜೆಪಿ ಸೇರಿದ್ದಾರೆ ಸೇರುತ್ತಾರೆ ಎಂದು ಹೇಳಿಲ್ಲ. ಅವರ ಪಕ್ಷದ ಅವ್ಯವಸ್ಥೆಯಿಂದ ರಾಜೀನಾಮೆ ನೀಡಿದ್ದಾರೆ ಅದರಿಂದ ಸಹಜವಾಗಿ ನಮ್ಮ ಸರ್ಕಾರ ಬಂದಿದೆ. ಅದನ್ನೇ ಯಡಿಯೂರಪ್ಪ ಹೇಳಿದ್ದಾರೆ ಅಷ್ಟೇ. ಅದನ್ನು ರೆಕಾರ್ಡ್ ಮಾಡಿ ವೈರಲ್ ಮಾಡಿರುವುದು ನೋವು ತಂದಿದೆ. ಈ ಪ್ರಕರಣವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸುತ್ತದೆ. ಶಿಸ್ತಿನ ಪಕ್ಷದಲ್ಲಿ ಈ ರೀತಿ ಆಗಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: Siddaramaiah-criticism – government- hundred days-Minister -V Somanna -mysore