ಬೆಂಗಳೂರು,ಜೂನ್,7,2025 (www.justkannada.in): ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಗೆ ಧಮ್, ತಾಕತ್ತಿದ್ದರೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ರಾಜೀನಾಮೆ ಪಡೆಯಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಹಿರಂಗ ಸವಾಲು ಹಾಕಿದರು.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬೆಂಗಳೂರಿನಲ್ಲಿ ಇಷ್ಟೊಂದು ದೊಡ್ಡ ಘಟನೆ ನಡೆದಿದ್ದರೂ ಕಾಂಗ್ರೆಸ್ ಹೈಕಮಾಂಡ್ ಒಂದೇ ಒಂದು ಸಾಂತ್ವಾನವನ್ನೂ ಹೇಳಿಲ್ಲ. ಬದಲಾಗಿ ಸರ್ಕಾರವನ್ನು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಮರ್ಥಿಸಿಕೊಳ್ಳುತ್ತಿದೆ. ಅವರ ರಾಜೀನಾಮೆ ಪಡೆಯಲು ನಿಮಗೆ ಧಮ್ ತಾಕತ್ತಿಲ್ಲವೇ..? ಎಂದು ವಾಗ್ದಾಳಿ ನಡೆಸಿದರು.
ಕಾಲ್ತುಳಿತ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ನೇರ ಕಾರಣ. ಹೀಗಾಗಿ ಇಬ್ಬರೂ ಗೌರವಯುತವಾಗಿ ರಾಜೀನಾಮೆ ನೀಡಬೇಕು. ನಂತರ ಇಬ್ಬರನ್ನು ತನಿಖಾಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ಎಂದು ಆಗ್ರಹಿಸಿದರು.
ಆರ್ಸಿಬಿ, ಡಿಎನ್ಎ ಮತ್ತಿತರರನ್ನು ತನಿಖಾಧಿಕಾರಿಗಳು ಬಂಧಿಸುವುದಾದರೆ ಸಿಎಂ ಮತ್ತು ಡಿಸಿಎಂ ಅವರುಗಳನ್ನು ಏಕೆ ಬಂಧಿಸಬಾರದು? ಈ ಪ್ರಕರಣದಲ್ಲಿ ಈ ಇಬ್ಬರೂ ಪ್ರಮುಖ ಆರೋಪಿಗಳಾಗಿದ್ದಾರೆ. ಎಲ್ಲದಕ್ಕೂ ಮೂಗು ತೂರಿಸುವ ಹೈಕಮಾಂಡ್ ನವರು ಈಗ ಯಾಕೆ ಮೌನಕ್ಕೆ ಜಾರಿದ್ದಾರೆ? ಕಾಂಗ್ರೆಸ್ ಹೈಕಮಾಂಡ್ ನಾಯಕರು ಎಲ್ಲಿದ್ದೀರಿ ಎಂದು ಹರಿಹಾಯ್ದರು.
Key words: stampede case, Union Minister, Shobha Karandlaje, Congress, high command