ಬೆಂಗಳೂರು, ಸೆಪ್ಟಂಬರ್,1,2026 (www.justkannada.in): ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ರಂಗಕರ್ಮಿ ಹಾಗೂ ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ನಗರದ ಕಂದಾಯ ಭವನದಲ್ಲಿರುವ ಡಿವಿಜಿ ಸಭಾಂಗಣದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಶಿವಾನಂದ ತಗಡೂರು ಅವರಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ, ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ಕರ್ನಾಟಕ ನಾಟಕ ಅಕಾಡೆಮಿಗೂ ಅಭಿನಂದನೆ ಸೂಚಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ನಂತರ ಮಾತನಾಡಿದ ಹಿರಿಯ ಪತ್ರಕರ್ತ ಎನ್. ರವಿಕುಮಾರ್ (ಟೆಲೆಕ್ಸ್), “ಶಿವಾನಂದ ತಗಡೂರು ಅವರನ್ನು ಬಹುತೇಕರು ಪತ್ರಕರ್ತರಾಗಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ ಮಾತ್ರ ಗುರುತಿಸುತ್ತಾರೆ. ಆದರೆ ಅವರೊಳಗೆ ಬದುಕಿರುವ ಸಮರ್ಪಿತ ರಂಗಕಲಾವಿದನನ್ನು ಅಷ್ಟಾಗಿ ಅರಿತಿಲ್ಲ. ಈ ಪ್ರಶಸ್ತಿ ವೈಯಕ್ತಿಕವಾಗಿ ಶಿವಾನಂದ ತಗಡೂರು ಅವರಿಗೆ ಸಂದ ಗೌರವ ಮಾತ್ರವಲ್ಲ, ರಾಜ್ಯದ ಎಲ್ಲ ಕಾರ್ಯನಿರತ ಪತ್ರಕರ್ತರಿಗೆ ಸಂದಿರುವ ಗೌರವವೂ ಹೌದು. ಇದರಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಘನತೆ ಮತ್ತಷ್ಟು ಹೆಚ್ಚಿದೆ ಎಂದರು.
ಈ ವೇಳೆ ಕೆಯುಡಬ್ಲ್ಯುಜೆ ಹಿರಿಯ ಉಪಾಧ್ಯಕ್ಷ ಹೆಚ್. ಬಿ. ಮದನಗೌಡ, ರಾಜ್ಯ ಉಪಾಧ್ಯಕ್ಷ ಮತ್ತಿಕೆರೆ ಜಯರಾಮ್ , ರಮೇಶ್ ಅಜ್ಜಮಾಡ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಜಿ. ಸಿ. ಲೋಕೇಶ, ಕಾರ್ಯದರ್ಶಿಗಳಾದ ಸೋಮಶೇಖರ ಕೆರಗೋಡು, ನಿಂಗಪ್ಪ ಚಾವಡಿ, ಪುಂಡಲೀಕ ಬಾಳೋಜಿ, ಖಜಾಂಚಿ ವಾಸುದೇವ ಹೊಳ್ಳ ಸೇರಿದಂತೆ ರಾಜ್ಯ ಕಾರ್ಯಕಾರಿಣಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Key words: KUWJ, Shivananda Tagadur, Nataka Academy Award







