4 ವರ್ಷಗಳಿಂದ ಬಗೆಹರಿಯದ ಚರಂಡಿ ಸಮಸ್ಯೆ: ನಿವಾಸಿಗಳಿಂದ ಆಕ್ರೋಶ

ಬೆಂಗಳೂರು,ಜೂನ್,19,2026 (www.justkannada.in): ಬೆಂಗಳೂರು ಪೂರ್ವ ವಲಯದ ಭಟ್ಟರಹಳ್ಳಿ ಸಮೀಪದ ಬನಶಂಕರಿ ಲೇಔಟ್ 6ನೇ ಕ್ರಾಸ್‌ ನಲ್ಲಿ 2022ರಿಂದ ಮುಂದುವರಿದಿರುವ ಚರಂಡಿ ತಡೆ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಮಳೆಗಾಲದ ವೇಳೆ ರಸ್ತೆಗಳಲ್ಲಿ ನೀರು ನಿಂತು ಹಲವು ದಿನಗಳವರೆಗೆ ತೆರವಾಗದೇ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ನಿಂತ ನೀರು ಮನೆಗಳ ಭೂಗತ ನೀರಿನ ಸಂಪ್‌ ಗಳಿಗೆ ನುಗ್ಗಿ ಕುಡಿಯುವ ನೀರು ಕಲುಷಿತಗೊಳ್ಳುವ ಅಪಾಯವೂ ಎದುರಾಗಿದೆ ಎಂದು ನಿವಾಸಿ ವಿವೇಕಾರ್ಜುನ್ ಕೆ.ಎಂ. ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಹಿಂದಿನ ಬಿಬಿಎಂಪಿ ಹಾಗೂ ಬಳಿಕ ಜಿಬಿಎ ಅಧಿಕಾರಿಗಳಿಗೆ ಹಲವು ಬಾರಿ ದೂರು ಸಲ್ಲಿಸಿದರೂ ಶಾಶ್ವತ ಪರಿಹಾರ ದೊರಕಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಮುಚ್ಚಿರುವ ಚರಂಡಿಗಳನ್ನು ಸ್ವಚ್ಛಗೊಳಿಸುವುದು, ತಡೆಗೆ ಕಾರಣವಾದ ಮೂಲ ಸಮಸ್ಯೆಯನ್ನು ಪತ್ತೆಹಚ್ಚಿ ಶಾಶ್ವತ ಪರಿಹಾರ ಕಲ್ಪಿಸುವಂತೆ ನಿವಾಸಿಗಳು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಸಾರ್ವಜನಿಕ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ತುರ್ತು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

Key words: Sewerage problem, unresolved, 4 years, Residents, outraged