ಸೆ.9 ರಿಂದ ಸೆ.17ರವರೆಗೆ “ಕೀಟಗಳ ಪ್ರಣಯ ಪ್ರಪಂಚ”ಛಾಯಾಚಿತ್ರ ಪ್ರದರ್ಶನ.

ಮೈಸೂರು,ಸೆಪ್ಟಂಬರ್,7,2023(www.justkannada.in):  ನೆರಳು ಬೆಳಕು ಗ್ಯಾಲರಿ, ಕಾಫಿ ಸಿಟಿಯಲ್ಲಿ ಸೆಪ್ಟಂಬರ್ 9 ರಿಂದ ಸೆಪ್ಟಂಬರ್ 17ರವರೆಗೆ “ಕೀಟಗಳ ಪ್ರಣಯ ಪ್ರಪಂಚ’’ -ಮ್ಯಾಕ್ರೋ ಛಾಯಾಚಿತ್ರ ಪ್ರದರ್ಶನ  ನಡೆಯಲಿದೆ.

09-09-2023ರ ಶನಿವಾರ ಸಂಜೆ 04 ಗಂಟೆಗೆ ವಿಜಯನಗರ 2ನೇ ಹಂತದ ಅಂಬರೀಷ್ ರಸ್ತೆಯಲ್ಲಿರುವ  ನೆರಳು ಬೆಳಕು ಗ್ಯಾಲರಿ – ಕಾಫಿ ಸಿಟಿಯಲ್ಲಿ“ಕೀಟಗಳ ಪ್ರಣಯ ಪ್ರಪಂಚ’’ ಛಾಯಾಚಿತ್ರ ಪ್ರದರ್ಶನ  ಉದ್ಘಾಟನಾ ಸಮಾರಂಭ  ನಡೆಯಲಿದೆ. ಮಂಡ್ಯ ನಿವೃತ್ತ ಪ್ರಾಂಶುಪಾಲರು ಹಾಗೂ ಛಾಯಾಗ್ರಾಹಕರಾದ ಲೀಲಾ ಅಪ್ಪಾಜಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮ್ಯಾಕ್ರೋ ಫೋಟೋಗ್ರಾಫರ್ ಗಿರೀಶ್‌ ಗೌಡ ಆಗಮಿಸಲಿದ್ದಾರೆ ಎಂದು ವಿನೋದ್ ಕುಮಾರ್ ವಿ ಕೆ ತಿಳಿಸಿದ್ದಾರೆ.

ಮನುಷ್ಯನು ಚಂದ್ರ ಮತ್ತು ಮಂಗಳಗ್ರಹ ತಲುಪಿದರೂ ಇಲ್ಲಿನ ಕೀಟಲೋಕ ಮಾತ್ರ ಇನ್ನೂ ಪೂರ್ತಿ ದಕ್ಕಿಲ್ಲ. ಭೂಮಿಯಲ್ಲಿರುವ ಎಲ್ಲ ಕೀಟಗಳ ಪಟ್ಟಿಮಾಡಲು ಸಾದ್ಯವಾಗಿಲ್ಲ. ನಮಗೆ ಗೊತ್ತಿರುವುದು ಕೇವಲ ಶೇಕಡ ಹತ್ತೊ ಇಪ್ಪತ್ತೊ ಅಷ್ಟೆ. ಮನುಷ್ಯನ ಕಡೆಗಣನೆ ಸಹಜವೇ ಆದರೂ ಅಲ್ಲಿನ ಕೌತುಕಗಳು ಬೆರಗು ಮೂಡಿಸುತ್ತವೆ. ಕೀಟಗಳ ಬದುಕಿನ ಹತ್ತಾರು ವಿಷಯಗಳಲ್ಲಿ ಅವುಗಳ ಪ್ರಣಯ ಲೋಕವು ವಿಶೇಷವಾದದ್ದು. “ಕೀಟಗಳ ಪ್ರಣಯ ಪ್ರಪಂಚ” ವನ್ನು ಈ ಪ್ರದರ್ಶನದಲ್ಲಿ ಪ್ರಮುಖವಾಗಿ ತೆರೆದಿಡಲು ಪ್ರಯತ್ನಿಸಿದ್ದು, ಅವುಗಳ ರಸ ಕ್ಷಣಗಳ ಮೂಲಕ ಕೀಟಗಳ ಬಗ್ಗೆ ಕುತೂಹಲ ಬೆಳೆಸಲು ಒಂದು ಸಣ್ಣ ಪ್ರಯತ್ನ ಎಂದು ವಿನೋದ್ ಕುಮಾರ್ ವಿ ಕೆ ತಿಳಿಸಿದ್ದಾರೆ.

ವಿನೋದ್ ಕುಮಾರ್ ವಿ ಕೆ ಅವರ, ಹುಟ್ಟೂರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶಿವಕೇರಿ ಎಂಬ ಗ್ರಾಮ. ಸದ್ಯ ಕುಶಾಲನಗರ ತಾಲೂಕಿನಲ್ಲಿ ಅರಣ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ವೃತ್ತಿ. ಕುಶಾಲನಗರದಲ್ಲಿ ವಾಸ. ಫೋಟೋಗ್ರಫಿಯಲ್ಲಿ 13 ವರ್ಷಗಳಿಂದ ತೊಡಗಿಕೊಂಡಿದ್ದಾರೆ. Federation of Indian Photography ರವರಿಂದ AFIP ಮತ್ತು International Federation of Photographic Art ರವರಿಂದ AFIAP Distinction ಪಡೆದುಕೊಂಡಿದ್ದಾರೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿ ಪದಕಗಳನ್ನು ಪಡೆದಿದ್ದಾರೆ.

Key words: September 9th -September 17th– Romantic World of Insects- Photo Exhibition.