ಪರಿಶಿಷ್ಟ ಜಾತಿ ಒಳ ಮೀಸಲಾತಿ: ಆರ್ಟಿಕಲ್ 341ಗೆ ತಿದ್ದುಪಡಿ ತರಲು ಕೇಂದ್ರಕ್ಕೆ ಶಿಫಾರಸ್ಸು- ಸಚಿವ ಹೆಚ್.ಸಿ ಮಹದೇವಪ್ಪ.

ಬೆಂಗಳೂರು,ಜನವರಿ,18,2024(www.justkannada.in): ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಸಂಬಂಧ ಆರ್ಟಿಕಲ್ 341ಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ,  2 ದಶಕಗಳಿಂದ ದಲಿತರ ಒಳ‌ಪಂಗಡಗಳಿಗೆ ಅನ್ಯಾಯ ಆಗಿದೆ.  ಒಳ ಮೀಸಲಾತಿ ಬೇಕು ಎಂದು ಕೇಳುತ್ತಿದ್ದರು.  ಹೀಗಾಗಿ ನ್ಯಾ. ಸದಾಶಿವ ಆಯೋಗದ ವರದಿ ನೀಡಲು ಸರ್ಕಾರ ಕೇಳಲಾಗಿತ್ತು. ಸದಾಶಿವ ಆಯೋಗದ ವರದಿ ಅಸೆಂಬ್ಲಿಯಲ್ಲಿ ಪ್ಲೇಸ್ ಆಗಲೇ ಇಲ್ಲ. ಸದಾಶಿವ ಆಯೋಗದ ವರದಿಯನ್ನು ನಾವು ಅಧಿಕಾರಕ್ಕೆ ಬಂದಾಗ ಮಂಡನೆ ಮಾಡ್ತೀವಿ ಅಂತ ಪ್ರಣಾಳಿಕೆಯಲ್ಲಿ ಹಾಕಿದ್ದೆವು. ಬಿಜೆಪಿಯ ಸರ್ಕಾರ ತರಾತುರಿಯಲ್ಲಿ ಕಾನೂನು ಸಚಿವರ ನೇತೃತ್ವದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿ ಮಾಡಿದರು. ನ್ಯಾ.ಸದಾಶಿವ ಆಯೋಗದ ವರದಿ ಕಮಿಟಿ ಅಪ್ರಸ್ತುತ  ಹಾಗೂ ಮುಕ್ತಾಯ ಆಗಿದೆ ಅಂತ ಕ್ಯಾಬಿನೆಟ್ ನಿರ್ಣಯ ಮಾಡಿದರು ಎಂದರು.

ದಲಿತ ಸಮುದಾಯದಲ್ಲಿ ಹಾಲಿ 101 ಒಳ ಜಾತಿಗಳಿವೆ. 2011 ಜನಸಂಖ್ಯೆ ಆಧಾರದ ಮೇಲೆ ನ್ಯಾ.ನಾಗ ಮೋಹನ್ ದಾಸ್ ವರದಿ ನೀಡಲಾಗಿತ್ತು. ಸಂವಿಧಾನದ ಆರ್ಟಿಕಲ್ 341 ಕ್ಕೆ ಖಂಡ (3) ನ್ನು ಸೇರಿಸದೇ ಹೋದರೆ ಒಳ ಮೀಸಲಾತಿ ನೀಡಲು ಸಾಧ್ಯವಿಲ್ಲ. ಪಾರ್ಲಿಮೆಂಟ್ ಮೂಲಕವೇ ಇದು ಆಗಬೇಕು. ರಾಜ್ಯ ಸರ್ಕಾರ ಇದನ್ನು ಮಾಡಲು ಸಾಧ್ಯವೇ ಇಲ್ಲ. ರಿಜೆಕ್ಟ್ ಆಗಿರುವ ವರದಿಯನ್ನು ನಾವು ಕ್ಯಾಬಿನೆಟ್ ಗೆ ತರಲು ಸಾಧ್ಯವಿಲ್ಲ. 101ಜಾತಿಗಳ ಹಿತ ಕಾಪಾಡಲು ಆರ್ಟಿಕಲ್ 341 ಗೆ ತಿದ್ದುಪಡಿ ತನ್ನಿ ಎಂದು ಕೇಂದ್ರಕ್ಕೆ ಶಿಫಾರಸು ಮಾಡಿದ್ದೇವೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಇದು ಕಾನೂನು ಉಲ್ಲಂಘನೆ ಆಗುವುದಿಲ್ಲ. ಬೇರೆಯವರು ಇದರಲ್ಲಿ ರಾಜಕೀಯ ಕಾಣಬಹುದು. ನಾವಂತೂ ರಾಜಕೀಯ ಮಾಡುವುದಿಲ್ಲ. ವರದಿಯನ್ನು ಹಿಂದಿನ ಬಿಜೆಪಿ ಸರ್ಕಾರವೇ ಅಪ್ರಸ್ತುತ  ಮತ್ತು ಕ್ಲೋಸ್ ಮಾಡಿದೆ ನಾವು ಯಾರನ್ನೂ ದಾರಿ ತಪ್ಪಿಸುವುದಿಲ್ಲ ಎಂದರು.

ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಮಾತನಾಡಿ, ನಮ್ಮ ಹೋರಾಟ ನಿರಂತರ. ಎಲ್ಲಿವರೆಗೆ ಕೇಂದ್ರದಿಂದ ತಿದ್ದುಪಡಿ ಆಗುವುದಿಲ್ಲವೋ ಅಲ್ಲಿ ತನಕ ಹೋರಾಟ ಮಾಡ್ತೇವೆ. ಕೇಂದ್ರ ತಿದ್ದುಪಡಿ ಮಾಡಲೇಬೇಕು. ಇದಕ್ಕೆ ದೆಹಲಿ ಮಟ್ಟದಲ್ಲೇ ಹೋರಾಟ ಮಾಡುತ್ತೇವೆ ಎಂದರು.

Key words: Scheduled Caste -Internal Reservation- Recommendation – Center-Minister-HC Mahadevappa.