ಮೈಸೂರು,ಫೆಬ್ರವರಿ,27,2026 (www.justkannada.in): ಬೇಡಿಕೆಯೂ ಇದೆ, ಸಂಸ್ಥೆಯೂ ಇದೆ, ಲಾಭವೂ ಇದೆ. ಅಂತಹುದರಲ್ಲಿ ಸಂಸ್ಥೆ ಮುಚ್ಚುವ ಪ್ರಯತ್ನ ಏಕೆ? ನಾವು ‘ಸೇವ್ ಮೈಸೂರು ಸಿಲ್ಕ್’ ಅಭಿಯಾನ ಆರಂಭ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಆರ್.ಅಶೋಕ್, ಸಿಲ್ಕ್ & ಮಿಲ್ಕ್ ಎರಡೂ ರಾಜ್ಯದ ಬ್ರ್ಯಾಂಡ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಠಿಯ ಕನಸು. ವಿದೇಶದಿಂದ ಯಂತ್ರೋಪಕರಣ ತಂದು 112 ವರ್ಷದ ಹಿಂದೆ ಸ್ಥಾಪಿಸಿದ್ದರು. ರೈತರಿಗೆ ಅನುಕೂಲ, ಉದ್ಯೋಗ ಸೃಷ್ಠಿ ದೃಷ್ಠಿಯಿಂದ ಸ್ಥಾಪಿಸಿದ್ದರು. ಚನ್ನಪಟ್ಟಣದಲ್ಲೂ ನಾಲ್ಕು ನೂರು ಜನ ಕೆಲಸ ಮಾಡಿದ್ದಾರೆ. ತಿ.ನರಸೀಪುರದಲ್ಲಿ 13 ಎಕರೆ ಭೂಮಿ ಇದೆ. 6 ಎಕರೆ ಭೂಮಿಯನ್ನ ಕ್ರೀಡಾಂಗಣಕ್ಕೆ ಪರಭಾರೆ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ 1200-1400 ಸೀರೆ ತಯಾರಿ ಮಾಡುತ್ತಾರೆ. ಅಷ್ಟೂ ಸೀರೆಗಳು ಒಂದೇ ದಿನಕ್ಕೆ ,ಒಂದೇ ಗಂಟೆಗೆ ಬಿಕರಿ ಆಗುತ್ತದೆ. ಚಾಮುಂಡಿ ತಾಯಿಗೆ ಇದೇ ಸೀರೆಯನ್ನ ಉಡುಗೆಯಾಗಿ ತೊಡುವ ಪ್ರತೀತಿ ಇದೆ. ಮದುವೆ, ಆರತಕ್ಷತೆಗೆ ಪವಿತ್ರತೆಯಿಂದ ಸೀರೆ ಬಳಸುತ್ತಾರೆ. 96 ಕೋಟಿ ರೂ ಲಾಭ ರೇಷ್ಮೆ ಸೀರೆಯಿಂದ ಬಂದಿದೆ ಎಂದರು.
ಫಾರಿನ್ ಗೆ ಹೋಗಿ 1.40 ಕೋಟಿ ರೂ. ಖರ್ಚು ಮಾಡಿದರು. ಸೀರೆಯ ಮೌಲ್ಯವನ್ನ ಹೆಚ್ಚಿಸಲು ಅಧ್ಯಯನಕ್ಕೆ ಹೋಗಿದ್ದರು. ರೇಷ್ಮೆ ಸೀರೆಗೆ ಬೇಡಿಕೆಯೂ ಇದೆ, ಸಂಸ್ಥೆಯೂ ಇದೆ, ಲಾಭವೂ ಇದೆ. ಅಂತಹುದರಲ್ಲಿ ಸಂಸ್ಥೆ ಮುಚ್ಚುವ ಪ್ರಯತ್ನ ಏಕೆ?. 2000 ಜನಕ್ಕೆ ಉದ್ಯೋಗ ನೀಡುವ ಬೇಡಿಕೆ ಸಂಸ್ಥೆ ಇದಾಗಿದೆ. ಆದರೆ ಕ್ರೀಡಾಂಗಣವನ್ನ ಇದೇ ಸ್ಥಳದಲ್ಲಿ ಮಾಡಬೇಕು ಅಂತ ಪ್ರಯತ್ನ ಏಕೆ? ದೇವರು ಇಲ್ಲೇ ಮಾಡಬೇಕು ಅಂತ ಹೇಳಿದೆಯಾ? ತೆಂಗಿನಕಾಯಿ ಹಿಡಿದು ಭೂಮಿ ಹುಡುಕುವಂತೆ ಇದೇ ಜಾಗ ಗುರುತಿಸಿದ್ದಾರಾ? ಆ ಕಾರ್ಖಾನೆಯಿಂದ ವಾಸನೆ ಹೆಚ್ಚಾಗಿ ಬರುತ್ತದೆ. ಅದರ ನಿವಾರಣೆಗೆ ಸಾವಿರಾರು ಮರಗಳನ್ನ ನೆಟ್ಟಿದ್ದಾರೆ. ಒಂದೆಡೆ ಮರ ಕಡಿಯುತ್ತಾರೆ, ಮತ್ತೊಂದೆಡೆ ಕಾರ್ಖಾನೆ ಮುಚ್ಚುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ಆರ್.ಅಶೋಕ್ ಕಿಡಿಕಾರಿದರು.
ಕಾಂಗ್ರೆಸ್ ಗುತ್ತಿಗೆದಾರನಿಗೆ 12 ಕೋಟಿ ರೋ. ಸ್ಯಾಂಕ್ಷನ್ ಆಗಿದೆ. ಅವನ ಒತ್ತಡದಿಂದ ಇದು ಕೆಲಸ ಆಗುತ್ತಿದೆ. ಅದರಿಂದ ಶೇ.60 ರಷ್ಟು ಕಮೀಷನ್ ಬರುತ್ತೆ. ಆ ಕಾರಣಕ್ಕೆ ಕಾಂಗ್ರೆಸ್ ನವರು ಒತ್ತಡ ಮಾಡುತ್ತಿದ್ದಾರೆ. ಒಂದು ಕ್ರೀಡಾಂಗಣ ಮಾಡಲು 10 ರಿಂದ 12 ಎಕರೆ ಭೂಮಿಬೇಕು. ಪಾರ್ಕಿಂಗ್ ಗೂ ಕೂಡ ಹೆಚ್ಚು ಜಾಗಬೇಕು. ಕಾಂಗ್ರೆಸ್ ಪಕ್ಷದ ದೊಡ್ಡ ಲೀಡರ್ ದು ಮಿಲ್ ಇದೆಯಂತೆ. ಆ ಕಾರಣಕ್ಕೆ ಇದನ್ನ ಮುಳುಗಿಸಿ ಅಲ್ಲಿಗೆ ಸಪ್ಲೈ ಮಾಡಲು ಪ್ಲಾನ್ ರೂಪಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕ್ರೀಡಾಂಗಣ ಉಳಿಸಿ, ಫ್ಯಾಕ್ಟರಿ ಮುಚ್ಚಿಸಿ. ಆ ಉದ್ದೇಶದಿಂದ ಲಾಬಿ ಮಾಡಲು ಯತ್ನ ಮಾಡುತ್ತಿದ್ದಾರೆ. ಎಲ್ಲಾ ಕಡೆ ಸೀರೆ ತೆಗೆದುಕೊಳ್ಳಲು ಜನರಿದ್ದಾರೆ. ಸೀರೆ ಕೊಡಲು ಇವರಿಗೆ ಯೋಗ್ಯತೆ ಇಲ್ಲ. ಮತಾಂದರು ಕೆಚ್ವಲುಗಳನ್ನ ಕುಯ್ಯುತ್ತಿದ್ದರು. ಅದೇ ರೀತಿ ಇವರು ಹುನ್ನಾರ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೈಸೂರು ಸ್ಯಾಂಡಲ್ ಸೋಪ್ ಗೆ ನಟಿ ತಮನ್ನಾ ಭಾಟಿಯಾ ಪ್ರಚಾರದ ರಾಯಭಾರಿಯಾಗಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ್, ನಟಿ ತಮನ್ನಾಗೆ ಎರಡು ಕೋಟಿ ಕೊಟ್ಟಿದ್ದಾರೆ. ಯಾಕೆ ಕನ್ನಡದವರು ಯಾರೂ ಸಿಗಲಿಲ್ವಾ? ರಶ್ಮಿಕಾ ಮಂದಣ್ಣ ಇದಕ್ಕಿಂತ ಫೇಮಸ್ ಇದ್ದಾರೆ. ಯಶ್ ಅವರ ಪತ್ನಿ ಮಕ್ಕಳಿಗೆ ಐದು ಕೋಟಿ ಕೊಟ್ಟಿದ್ದರೆ ಅವರೇ ನಮ್ಮ ಹೆಮ್ಮೆ ಅಂತ ಬಂದು ಮಾಡುತ್ತಿದ್ದರು. ನಮ್ಮ ಹಣವನ್ನ ದುಂದು ವೆಚ್ಚ ಮಾಡಬೇಡಿ ಎಂದು ಹರಿಹಾಯ್ದರು.
ಮೈಸೂರಲ್ಲಿ ಮಹಾರಾಜರು ಎಂದರೆ ತಿರುಗಿ ಬೀಳುತ್ತಾರೆ. ಮಹದೇವಪ್ಪ ಆಗ್ಗಾಗ್ಗೆ ಮಹಾರಾಜರಿಗಿಂತ ಸಿದ್ದರಾಮಯ್ಯ ಹೆಚ್ಚು ಕೆಲಸ ಮಾಡಿದ್ದಾರೆ ಅಂತಾರೆ. ಕೆಆರ್ ಎಸ್ ಡ್ಯಾಂ ಕಟ್ಟಿದ್ದು ಮೈಸೂರು ಮಹಾರಾಜರು/ ಆದರೆ ಟಿಪ್ಪುಸುಲ್ತಾನ್ ಅಂತ ಮಹದೇವಪ್ಪ ಬೊಂಬಡ ಹೊಡೆಯುತ್ತಿದ್ದರು. ಎಲ್ಲದರಲ್ಲೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಆರನೇ ತಾರೀಖು ಸದನ ನಡೆಯುತ್ತಿದೆ. ಧಾರವಾಡದ ರೀತಿ ಇದಕ್ಕೂ ತೀರ್ಮಾನ ತೆಗೆದುಕೊಳ್ಳಿ. ಇಲ್ಲವಾದರೆ ಒಳಗೆ, ಹೊರಗೆ ಚರ್ಚೆ ಮಾಡುತ್ತೇವೆ ಎಂದರು.
ನಮ್ಮ ಹೋರಾಟ 50 ಸಾವಿರ ಉದ್ಯೋಗಕ್ಕಲ್ಲ. 2.84 ಲಕ್ಷ ಉದ್ಯೋಗಕ್ಕೆ ಗೆಜೆಟ್ ಹೊರಡಿಸಿ. ಬರೀ ಬಾಯಿ ಮಾತಿಗೆ ಹೇಳಬೇಡಿ. ಯಾವಾಗ ಆದೇಶಗಳನ್ನ ಬಿಡುಗಡೆ ಮಾಡುತ್ತೀರಿ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ತೀರ್ಮಾನವಾಗಿತ್ತು. ಇವರು 50 ಸಾವಿರ ಹುದ್ದೆಗಳ ಭರ್ತಿಗೆ ಘೋಷಣೆ ಮಾಡಿದ್ದಕ್ಕೆ ತಾತ್ಕಾಲಿಕ ಕೈ ಬಿಟ್ಟೀದ್ದೇವೆ ಎಂದು ಅಶೋಕ್ ತಿಳಿಸಿದರು.
Key words: , Save Mysore Silk, Campaign, R.Ashok







