ರಾಜ್ಯ ಕಾನೂನು ಕಾರ್ಯದರ್ಶಿಯಾಗಿ ಎಸ್.ಸಂಗ್ರೇಶಿ ನೇಮಕ

ಮೈಸೂರು, ನವೆಂಬರ್ 10, 2023 (www.justkannada.in):  ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದ ಎಸ್.ಸಂಗ್ರೇಶಿ ಅವರು ರಾಜ್ಯ ಕಾನೂನು  ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಜಿ ಎಸ್ ಸಂಗ್ರೇಶಿಯವರು ಮಾನವೀಯ ಕಳಕಳಿಯುಳ್ಳ ನ್ಯಾಯಾಧೀಶರ ಅಂತಲೇ ಜನಜನಿತರಾಗಿದ್ದರು. ಇದರ ಜೊತೆಗೆ  ಶಿಸ್ತಿನ ಸಿಪಾಯಿಯಾಗಿದ್ದರು. 9 ತಿಂಗಳ ಹಿಂದೆ ಮೈಸೂರು ಜಿಲ್ಲಾ ಸತ್ರ ನ್ಯಾಯಾಧೀಶರಾಗಿ ನಿಯೋಜನೆಗೊಂಡಿದ್ದರು. ಇವರ ಕಾರ್ಯಾವಧಿಯಲ್ಲಿ ಜನರಿಗೆ ತ್ವರಿತಗತಿಯಲ್ಲಿ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಹಲವು ಸುಧಾರಣೆಗಳನ್ನು ತಂದರು. ಅದರಲ್ಲೂ ಇವರ ಕಾರ್ಯಾವಧಿಯಲ್ಲಿ ತಮ್ಮ ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರ ನಡುವೆ ಸಮನ್ವಯತೆ ಸೌಹಾರ್ದತೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು.

ಇವರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಶಿಸ್ತಿನ ಸಿಪಾಯಿಯಾಗಿದ್ದ ಶ್ರೀ ಜಿ ಎಸ್ ಸಂಗ್ರೇಶಿಯವರು ಸಮಯ ಪರಿಪಾಲನೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದರು. ತಾವು ಮಾತ್ರವಲ್ಲದೆ ನ್ಯಾಯಾಂಗ ಸಿಬ್ಬಂದಿಯಲ್ಲೂ ಶಿಸ್ತು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು.

ಕಳೆದ 9 ತಿಂಗಳಲ್ಲಿ ಲೋಕ ಅದಾಲತ್ ಮೂಲಕ ನೂರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ಸಣ್ಣ ಪುಟ್ಟ ಮನಸ್ತಾಪದಿಂದ ದೂರಾಗುತ್ತಿದ್ದ ದಂಪತಿ ಜೊತೆ ಖುದ್ದು ಮಾತನಾಡಿ ಅವರ ಮನವೊಲಿಸಿ ಅವರನ್ನು ಒಂದು ಮಾಡಿ ಹೊಸ ಬಾಳಿಗೆ ಮುನ್ನುಡಿ ಬರೆದಿದ್ದು ವಿಶೇಷವಾಗಿತ್ತು. ನ್ಯಾಯಾಲಯ ಸದಾ ಜನರ ಸೇವೆಗಿರುವ ದೇವಾಲಯ ಎಂದು ನಂಬಿದ್ದ ಅವರು ನ್ಯಾಯಾಲಯದಲ್ಲಿ ಜನಸ್ನೇಹಿ ವಾತಾವರಣವನ್ನು ಮೂಡಿಸಿದ್ದರು.

ಹಿಂದೆ 2008ರಲ್ಲಿ ಎಸ್ ಸಂಗ್ರೇಶಿಯವರು ಮೈಸೂರು ಜಿಲ್ಲೆಯ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದರು. ಇದಾದ ನಂತರ ತುಮಕೂರು, ಗದಗ್, ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಇವರದ್ದು. ಇವರ ಜನಪರ ಕಾಳಜಿ, ಸಮಯ ಪರಿಪಾಲನೆ, ಶಿಸ್ತು ಅವರ ಬದ್ದತೆಗೆ ಮಾನ್ಯತೆ ನೀಡಿ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ.