ನಟ ಉಪೇಂದ್ರಗೆ ರಿಲೀಫ್: ಎಫ್ ಐಆರ್ ಗೆ ತಡೆ ನೀಡಿದ ಹೈಕೋರ್ಟ್.

ಬೆಂಗಳೂರು,ಆಗಸ್ಟ್,14,2023(www.justkannada.in):  ಆಕ್ಷೇಪಾರ್ಹ ಪದ ಬಳಕೆ ಆರೋಪದ ಮೇಲೆ ನಟ ರಿಯಲ್ ಸ್ಟಾರ್ ಉಪೇಂದ್ರ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ಗೆ ತಡೆ ನೀಡಿ ಹೈಕೋರ್ಟ್​ ಆದೇಶಿಸಿದೆ.

ನಟ ಉಪೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್​ ಠಾಣೆಯಲ್ಲಿ ಎಫ್ ಐಆರ್  ದಾಖಲಾಗಿತ್ತು. ತಮ್ಮ ವಿರುದ್ಧ  ದಾಖಲಾಗಿರುವ ಎಫ್​ಐಆರ್​ಗೆ ತಡೆ ನೀಡಬೇಕು ಎಂದು ಕೋರಿ ಉಪೇಂದ್ರ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದರು.

ಇದೀಗ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನಟ ಉಪೇಂದ್ರ ವಿರುದ್ಧದ ಎಫ್ ಐಆರ್ ಗೆ ತಡೆ ನೀಡಿದೆ.   ‘ಗಾದೆ ಮಾತು ಉಲ್ಲೇಖಿಸಿ ಉಪೇಂದ್ರ ಹೇಳಿಕೆ ನೀಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಇದಕ್ಕೆ ಅನ್ವಯವಾಗುವುದಿಲ್ಲ’ ಎಂದು ಉಪೇಂದ್ರ ಪರವಾಗಿ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡನೆ ಮಾಡಿದರು. ಗಾದೆ ಮಾತು ಬಳಸಿದ್ದಕ್ಕೇಕೆ ಅಷ್ಟೊಂದು ಎಫ್ ಐಆರ್ ಎಂದು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಪ್ರಶ್ನಿಸಿದರು.

ಇತ್ತೀಚೆಗೆ ಪ್ರಜಾಕೀಯದ ಬಗ್ಗೆ ಮಾತನಾಡಲು ಸೋಶಿಯಲ್​ ಮೀಡಿಯಾದಲ್ಲಿ ಉಪೇಂದ್ರ ಅವರು ಲೈವ್​ ಬಂದಿದ್ದರು. ಈ ವೇಳೆ ಅವರು ಬಳಸಿದ್ದ ಗಾದೆ ಮಾತಿನಿಂದ ಜಾತಿ ನಿಂದನೆ ಆಗಿದೆ ಎಂಬ ಆರೋಪ ಕೇಳಿಬಂದಿತ್ತು.

Key words: Relief – actor –Upendra- High Court- stay- FIR.