‘ಅರ್ಜುನ’ 2ನೇ ವರ್ಷದ ನೆನಪು: ಹಿರಿಯ ಪತ್ರಕರ್ತ ರಮೇಶ್ ಉತ್ತಪ್ಪ ಅವರ ಎರಡು ಪುಸ್ತಕಗಳು ಬಿಡುಗಡೆ

ಮೈಸೂರು,ಡಿಸೆಂಬರ್,4,2025 (www.justkannada.in):  ಪುಸ್ತಕವನ್ನು ಕೊಂಡು ಓದುವವರು ಇರುವ ತನಕ ಲೇಖಕರಿಗೆ ಅಭಿರುಚಿ ಸಿಗುತ್ತದೆ. ಹಾಗಾಗಿ ಎಲ್ಲರೂ ಪುಸ್ತಕ ಓದಿ. ಆ ಮೂಲಕ ಓದುವ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ನುಡಿದರು.

ನಗರದ ಜೆಎಲ್‌ ಬಿ ರಸ್ತೆಯಲ್ಲಿರುವ ದಿ ಇನ್ಸ್ ಟಿಟ್ಯೂಟ್ ಆಫ್  ಎಂಜಿನಿಯರಿಂಗ್ ಸಭಾಂಗಣದಲ್ಲಿ ಮೈಸೂರು ಕಲ್ಚರಲ್ ಅಸೋಸಿಯೇಷನ್ ಮತ್ತು ಕಲಿಸು  ಫೌಂಡೇಶನ್ ವತಿಯಿಂದ ಗುರುವಾರ ಆಯೋಜಿಸಿದ್ದ ಅರ್ಜುನ 2ನೇ ವರ್ಷದ ನೆನಪು ಹಾಗೂ ಹಿರಿಯ ಪತ್ರಕರ್ತ ಐತಿಚಂಡ ರಮೇಶ ಉತ್ತಪ್ಪ ರಚಿಸಿರುವ ಸಾವಿನ ಸತ್ಯ‘ಅರ್ಜುನಾ ನಿನ್ನ ಕೊಂದದ್ದು ಮದಗಜವಲ್ಲ ಪಾಪಿ ಮನುಷ್ಯ’ ಹಾಗೂ ದಸರಾ ಆನೆಗಳು ‘ಭೀಮ ಹಾಗೂ ಇತರರು’ ಕೃತಿಗಳನ್ನು ಬಿಡುಗಡೆಗೊಳಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿದರು.

ಕರ್ನಾಟಕದಲ್ಲಿ ಅತಿಹೆಚ್ಚು ಆನೆಗಳಿರುವುದು ಖುಷಿಯ ವಿಚಾರ. ಕೊಡಗು, ಮೈಸೂರು ಭಾಗಗಳಲ್ಲಿ ಹೆಚ್ಚು ಆನೆಗಳ ಉಪಟಳವಿದೆ. ಇದರಿಂದ ಮಾನವ-ಆನೆಗಳ ಸಂಘರ್ಷ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಕ್ರಮ ಕೈಗೊಳ್ಳಬೇಕು. ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.

ಸಾವಿನ ಸತ್ಯ (ಅರ್ಜುನಾ ನಿನ್ನ ಕೊಂದದ್ದು ಮದಗಜವಲ್ಲ ಪಾಪಿ ಮನುಷ್ಯ) ಹಾಗೂ ದಸರಾ ಆನೆಗಳು-ಭೀಮ ಹಾಗೂ ಇತರರು ಎಂಬ ಎರಡು ಕೃತಿಗಳ ಬಗ್ಗೆ ಮಾತನಾಡಿದ ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ, ಆನೆಗಳ ಜೊತೆ ನಿಕಟ ಸಂಬಂಧ ಇರುವ ವ್ಯಕ್ತಿಗಳಷ್ಟೇ ಆನೆ ಪುಸ್ತಕ ಬರೆಯಲು ಸಾಧ್ಯ ಎಂಬುದಕ್ಕೆ ಐತಿಚಂಡ ರಮೇಶ್ ಉತ್ತಪ್ಪ ಸಾಕ್ಷಿಯಾಗಿದ್ದಾರೆ. ಅರ್ಜುನ ಸಾವನ್ನಪ್ಪಿದಾಗ ಹಲವಾರು ಕಾರಣಗಳಿದ್ದು ಅವರ ಆತ್ಮಕ್ಕೆ ಶಾಂತಿಯನ್ನು ಕೋರಲಾಗುವುದು. ಇವರು ಬರೆದಿರುವಂತಹ ಪುಸ್ತಕ ವಿಶೇಷವಾಗಿದೆ ಎಂದರು.

ಸಮಾಜದಲ್ಲಿ ಪ್ರಾಣಿಗಳಿಂದ ಪ್ರಕೃತಿಯಿಂದ ಸಾಕಷ್ಟು ಉಪಯೋಗ ಪಡೆದಿದ್ದು ಅದಕ್ಕೆ ನಾವು ಎಷ್ಟು ಋಣಿಯಾಗಿದ್ದೇವೆ ಎಂಬುದನ್ನು ಅರಿಯಬೇಕು. ಅಲ್ಲದೇ ಆನೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಹೊಣೆ ಎಂಬುದನ್ನು ನಾವು ಮರೆಯಬಾರದು. ಇದುವರೆಗೂ ಮನುಷ್ಯರಿಗಷ್ಟೇ ನಿವೃತ್ತಿ ವಯಸ್ಸು, ಸೇವಾ ಪುಸ್ತಕ ಇದೆ ಎಂದುಕೊಂಡಿದ್ದೇವು. ಆದರೆ ಅನೆಗಳಿಗೂ ಇದು ಇದೆ ಎಂಬುದನ್ನು ಐತಿಚಂಡ ರಮೇಶ್ ಉತ್ತಪ್ಪ ಅವರ ಪುಸ್ತಕ ಅಧ್ಯಯನ ಮಾಡಿದಾಗ ನನಗೆ ತಿಳಿಯಿತು ಎಂದು ಹೇಳಿದರು.

ಮದಗಜ ಘರ್ಷಣೆ ಆಗುವಾಗ ಅರಣ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ. ಮಹಾಭಾರತ ಹಾಗೂ ರಾಮಾಯಣದಲ್ಲಿ ಬರುವಂತಹ ಬಹುತೇಕ ಹೆಸರನ್ನು ಆನೆಗಳಿಗೆ ಇಡಲಾಗಿದ್ದು ಅದು ಕಾಕತಾಳಿಯಾಗಿರಬಹುದು ಅಥವಾ ವೈಜ್ಞಾನಿಕವಾಗಿರಬಹುದು ಎಂದರು.

ಅರಣ್ಯ ಇಲಾಖೆಯಲ್ಲಿ ಪಶುವೈದ್ಯ (ಆನೆ ವೈದ್ಯರ) ಕೊರತೆಯಿದ್ದು ಶೀಘ್ರವಾಗಿ ಅವರನ್ನು ನೇಮಕ ಮಾಡಬೇಕು ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಆನೆಗಳ ಸಂಬಂಧಿತ ಮ್ಯೂಸಿಯಂ ಮಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಚೇಂರ್ಬ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಬಿ. ಲಿಂಗರಾಜು ಮಾತನಾಡಿ, ರಮೇಶ್ ಉತ್ತಪ್ಪ ಅವರ ಕೃತಿ ವಿಶೇಷವಾಗಿದ್ದು ಪ್ರಕೃತಿ, ಪ್ರಾಣಿಗಳ ಬಾಂಧವ್ಯವನ್ನು ಈ ಪುಸ್ತಕದಲ್ಲಿ ಬರೆದಿದ್ದು ಮುಂದಿನ ಪೀಳಿಗೆಗೆ ಈ ಪುಸ್ತಕಗಳು ಅವಶ್ಯಕತೆ ಇರುತ್ತದೆ ಎಂದರು.

ಕಾರ್ಯಕ್ರಮದಲ್ಲಿ  ಡಾ ಮುಜಿಬ್ ರೆಹಮಾನ್(ಪಶುವೈದ್ಯ)  ಹಾಗೂ (ಅರ್ಜುನ ಅಭಿಮಾನಿ )ಕೆ ಆರ್ ಸತ್ಯಪ್ರಭಾ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತ ರಮೇಶ್ ಉತ್ತಪ್ಪ, ರೈತಮುಖಂಡ ಮಂಜುಕಿರಣ್, ಅಮರನಾಥ ರಾಜೇ ಅರಸು, ಎಂಜಿಆರ್ ಅರಸು, ಕೆ.ಎಸ್.ಶಿವರಾಂ, ಮಾಜಿ ಮೇಯರ್ ಶಿವಕುಮಾರ್, ನವ ಕರ್ನಾಟಕ ಸತ್ಯನಾರಾಯಣ್, ನಂಜಯ್ಯ ಹೊಂಗನೂರು, ಮಲ್ಲಿಕಾರ್ಜುನಸ್ವಾಮಿ, ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ.ನಾಗೇಶ್, ಪ್ರಕಾಶಕ ಎಂ.ಎಂ.ನಿಖಿಲೇಶ್ ಉಪಸ್ಥಿತರಿದ್ದರು.

Key words: ‘Arjuna, senior journalist, Ramesh Uthappa, Two books, released