ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದ ಮಾಜಿ ಸಿಎಂ ಹೆಚ್.ಡಿಕೆಗೆ ಸವಾಲೆಸೆದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್. 

ಮೈಸೂರು,ಅಕ್ಟೋಬರ್,26,2023(www.justkannada.in):  ಕನಕಪುರವನ್ನ ಬೆಂಗಳೂರಿಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ  ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಜೆಡಿಎಸ್ ಮತ್ತು ಬಿಜೆಪಿ ಯವರಿಗೆ ಇತ್ತೀಚೆಗೆ ಹುಚ್ಚು ಹಿಡಿದಿದೆ. ಎಚ್. ಡಿ ಕುಮಾರಸ್ವಾಮಿ ತಮ್ಮ ವರ್ಚಸ್ಸು ಕಳೆದುಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಪಾಪುಲ್ಯಾರಿಟಿಯನ್ನ ಮತ್ತು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವನ್ನು ಎಚ್.ಡಿ ಕುಮಾರಸ್ವಾಮಿ  ಸಹಿಸುತ್ತಿಲ್ಲ. ಹೆಚ್.ಡಿ.ಕೆ ಇತ್ತೀಚಿನ ದಿನದಲ್ಲಿ ರಾಮನಗರವನ್ನ ಆಧುನಿಕರಣ ವಿಚಾರಕ್ಕೆ ತಲೆಹಾಕಿ ಕೂತಿದ್ದಾರೆ. ರಾಮನಗರ, ಕನಕಪುರ ಜಿಲ್ಲೆ ಜನ ಉದ್ಧಾರ ಆಗೋದು ಬೇಡವೇ ಕುಮಾರಸ್ವಾಮಿ ಅವರೇ..?  ಉದ್ಯೋಗವಕಾಶ ಹೆಚ್ಚು ಆಗುತ್ತೆ. ಇಂಡಸ್ಟ್ರಿ ಹೆಚ್ಚಾಗುತ್ತದೆ. ಲ್ಯಾಂಡ್ ಬೆಲೆ ಹೆಚ್ಚಾಗುತ್ತದೆ. ಅಲ್ಲಿನ ಸಾರ್ವಜನಿಕರಿಗೆ  ಅನುಕೂಲತೆ ಹೆಚ್ಚಾಗುತ್ತೆ. ಸಣ್ಣ ಸಣ್ಣ ಉದ್ಯಮ ಸೃಷ್ಟಿ ಆಗುತ್ತೆ .  ಸ್ವಯಂ ಉದ್ಯೋಗ ಮಾಡುವವರು ಹೆಚ್ಚಾಗುತ್ತಾರೆ. ಇದಕ್ಕೆ ನೀವ್ಯಾಕೆ ಅಡ್ಡಗಾಲು ಹಾಕುತ್ತೀರಾ ಎಂದು  ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಗುಡುಗಿದರು.

ನೀವು ಬಂದು ನಿಮ್ಮ ಕಾಲದಲ್ಲಿ ಏನು ಮಾಡಿದ್ದೀರಿ ಎಂದು ಪ್ರಮಾಣ ಮಾಡಿ-ಹೆಚ್.ಡಿಕೆಗೆ ಸವಾಲು.

ರಾಮನಗರದ ಕೇತಕನಹಳ್ಳಿಯಲ್ಲಿ ನೀವು ಜಾಗ ಖರೀದಿ ಮಾಡಿಕೊಂಡಿದ್ದು ಹೇಗೆ.? ದೇವಗಿರಿ ನಿಮ್ಮ ತೆಕ್ಕೆಗೆ ಹೇಗೆ ಬಂತು..? ನಿಮ್ಮ  ವಂಶವೃಕ್ಷವನ್ನ ತಿಳಿಸುವೆ ಕೇಳಿ. ನಿಮ್ಮ 43 ಜನ ಸಂಬಂಧಿಕರ ಹೆಸರಿನಲ್ಲಿ ನೈಸ್ ವ್ಯಾಪ್ತಿಯಲ್ಲಿ  ಬೇನಾಮಿ ಆಸ್ತಿ ಮಾಡಿದ್ದೀರಿ ಇದಕ್ಕೆ ಉತ್ತರ ಕೊಡಿ ಕುಮಾರಸ್ವಾಮಿ ಅವರೇ..? 2011 ಜೂನ್ 27 ಯಡಿಯೂರಪ್ಪ ಅವರನ್ನು ಆಣೆ ಪ್ರಮಾಣಕ್ಕೆ  ಧರ್ಮಸ್ಥಳಕ್ಕೆ ಯಾಕೆ ಕರೆದಿದ್ದು..?  ನಾವು ನಮ್ಮ ಮುಖ್ಯಮಂತ್ರಿ ಮತ್ತು ಡಿಕೆಶಿ ಅವರನ್ನು ಕರೆದುಕೊಂಡು ಬರುತ್ತೀವಿ. ನೀವು ಬಂದು ನಿಮ್ಮ ಕಾಲದಲ್ಲಿ ಏನು ಮಾಡಿದ್ದೀರಿ ಎಂದು ಪ್ರಮಾಣ ಮಾಡಿ ಎಂದು ಎಚ್ಡಿಕೆಗೆ ಎಂ. ಲಕ್ಷ್ಮಣ್ ಸವಾಲು ಎಸೆದರು.

ಪೆಂಡ್ರೈವ್ ಕಥೆ ಹೇಳಿದ್ದೀರಿ ಅದೆಲ್ಲೋಯ್ತು ನಿಮ್ಮ ಪೆನ್ ಡ್ರೈವ್ ಕಥೆ.? ನನ್ನ ಬಳಿಯೂ ಕೂಡ  ಪೆಂಡ್ರೈವ್ ಇದೆ. ನೀವು ಬಿಟ್ಟ ಮರುದಿನವೇ ನಿಮ್ಮ ಪೆಂಡ್ರೈವ್ ನಾವು  ಬಿಡುತ್ತೇನೆ. ಈಗ ನೀವು ಅದೆನೋ ಸರಕು ಇದೆ ಅಂತೀರಾ ಅದನ್ನಾದರೂ ಬಿಡ್ರೀ ಎಂದು ಹೆಚ್.ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಟಾಂಗ್ ಕೊಟ್ಟರು.

Key words: Ramanagara- Kanakapura –district- people Kumaraswamy- KPCC spokesperson -M. Laxman