Sunday, September 13, 2026

BDA Apartments

Home Front Page ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್’ನಿಂದ ಜುಲೈ 6ರಂದು ರೈತ ಸ್ಪಂದನ ಕಾರ್ಯಕ್ರಮ

ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್’ನಿಂದ ಜುಲೈ 6ರಂದು ರೈತ ಸ್ಪಂದನ ಕಾರ್ಯಕ್ರಮ

ಮೈಸೂರು, ಜುಲೈ 04, 2021 (www.justkannada.in): ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್  ವತಿಯಿಂದ ಜುಲೈ 6 ರಂದು ರೈತ ಸ್ಪಂದನ ಕಾರ್ಯಕ್ರಮ ಆಯೋಜನೆ‌ ಮಾಡಲಾಗಿದೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್ ಗೌಡ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಕೋವಿಡ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೆರವು ನೀಡುವ ಸಲುವಾಗಿ ರೈತ ಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ. ಅದೇ ದಿನ ಹೆಬ್ಬಾಳು ಶಾಖೆಯ ಉದ್ಘಾಟನೆ ಕೂಡ ನೆರವೇರಲಿದೆ. ಎರಡೂ ಕಾರ್ಯಕ್ರಮಗಳಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

2021-22ನೇ ಸಾಲಿಗೆ ಸಾಲ ವಿತರಿಸಲು ಗುರಿ ಹೊಂದಲಾಗಿದೆ. 90 ಸಾವಿರ ಜನ ಸದಸ್ಯರಿಗೆ 860 ಕೋಟಿ ಬೆಳೆ ಸಾಲ ವಿತರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಕಳೆದ ಜೂನ್ ಅಂತ್ಯದವರೆಗೆ 16,069 ಸದಸ್ಯರಿಗೆ 183.74 ಕೋಟಿ ಸಾಲ ವಿತರಿಸಲಾಗಿದೆ. 1,200 ಜನರಿಗೆ 40 ಕೋಟಿ  ಮಧ್ಯಮಾವಧಿ ಸಾಲ ವಿತರಿಸಲಾಗುತ್ತಿದ್ದು, 1,350 ಸ್ವ ಸಹಾಯ ಗುಂಪುಗಳಿಗೆ 40 ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬ್ಯಾಂಕಿನಲ್ಲಿ ಈ ಮೊದಲು ನಡೆದಿದ್ದ ಅವ್ಯವಹಾರಗಳ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಆ ಬಳಿಕ ಬ್ಯಾಂಕ್ ನ ಲಾಭಾಂಶ ಉತ್ತಮವಾಗಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ಅಧ್ಯಕ್ಷ ಜಿ ಡಿ ಹರೀಶ್ ಗೌಡ ಹೇಳಿದ್ದಾರೆ.

ಸಾಲವನ್ನು ಮನ್ನಾ ಚಿಂತನೆ: ಕೋವಿಡ್’ನಿಂದ ಮೃತ ಪಟ್ಟಿರುವ ಬ್ಯಾಂಕಿನ ಸದಸ್ಯರಾಗಿದ್ದ ರೈತರ ಒಂದು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವ ಚಿಂತನೆಯಿದೆ. ಈ ಬಗ್ಗೆ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರು ಹಾಗು ಆಡಳಿತ ಮಂಡಳಿ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು.

ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕಿನ ಸದಸ್ಯರಾಗಿದ್ದ 280 ಮಂದಿ ರೈತರು ಕೋವಿಡ್ ಗೆ ಬಲಿಯಾಗಿದ್ದಾರೆ. ಕೋವಿಡ್ ನಿಂದ ಮೃತಪಟ್ಟಿರುವ ರೈತರು ಮಾಡಿದ್ದ 2.10 ಕೋಟಿ ಲಕ್ಷ ಸಾಲವನ್ನು ಮನ್ನಾ ಮಾಡಲು ಒತ್ತಾಯಿಸಲಾಗಿದೆ‌. ಈ ಮೊತ್ತವನ್ನು ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಭರಿಸುವುದಾಗಿ ಹೇಳಿದ್ದೇವೆ. ಕೋವಿಡ್ ಸಮಯದಲ್ಲೂ ಬ್ಯಾಂಕಿನಲ್ಲಿ ಠೇವಣಿ ಮತ್ತು ಮರು ಪಾವತಿಯಾಗಿರುವ ಹಣದ ಪ್ರಮಾಣ ಉತ್ತಮವಾಗಿದೆ. ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಜಿ ಡಿ ಹರೀಶ್ ಗೌಡ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.