ಪಂಚ ಗ್ಯಾರಂಟಿ ಯಶಸ್ವಿ ಹಿನ್ನೆಲೆ: ಮೇ 20 ರಂದು ಬೃಹತ್ ಸಾಧನಾ ಸಮಾವೇಶ- ಪುಷ್ಪಾ ಅಮರನಾಥ್.

ಮೈಸೂರು,ಮೇ,16,2025 (www.justkannada.in): ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಯಶಸ್ವಿ ಹಿನ್ನಲೆ, ಇದೇ ತಿಂಗಳ ಮೇ 20 ರಂದು ಗ್ಯಾರಂಟಿ ಯೋಜನೆಗಳ ಬಿಂಬಿಸುವ ಸಾಧನಾ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದರು.

ಇಂದು ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ ಡಾ.ಪುಷ್ಪಾ ಅಮರನಾಥ್, ಸರ್ಕಾರದಿಂದಲೇ ವಿಜಯಪುರ ಜಿಲ್ಲೆ ಹೊಸಪೇಟೆಯಲ್ಲಿ ಇದೇ ತಿಂಗಳ ಮೇ.20 ರಂದು ಸಾಧನಾ ಸಮಾವೇಶ ನಡೆಯಲಿದೆ. ರಾಜ್ಯಾದ್ಯಂತ ಈ ಸಮಾವೇಶಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಫಲಾನುಭವಿಗಳು ಆಗಮಿಸಲಿದ್ದಾರೆ. ಮೈಸೂರು ವ್ಯಾಪ್ತಿಗೆ ಬರುವ ಎಂಟು ಜಿಲ್ಲೆಗಳ ಗ್ಯಾರಂಟಿ ಅನುಷ್ಠಾನದ ಪ್ರಾಧಿಕಾರ ಜಿಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಸಮಾವೇಶಕ್ಕೆ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಕರ್ನಾಟಕ ಜಿಡಿಪಿಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಇದಕ್ಕೆ ಮೂಲ ಕಾರಣ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಲ್ಲಿ ಕೊಟ್ಟಂತಹ ಜನಪರ ಕಾರ್ಯಕ್ರಮಗಳು ಅಪಾರ ಯಶಸ್ಸನ್ನ ಗಳಿಸಿವೆ. ನಮ್ಮ ಸರ್ಕಾರ ಮಾಡಿದಂತಹ ಉತ್ತಮ ಕೆಲಸವನ್ನ ಜನರಿಗೆ ತಿಳಿಸುವ ಸದುದ್ದೇಶದಿಂದ ಸಾಧನ ಸಮಾವೇಶವನ್ನ ಹಮ್ಮಿಕೊಳ್ಳಲಾಗಿದೆ ಎಂದು  ಪುಷ್ಪಾ ಅಮರನಾಥ್ ತಿಳಿಸಿದರು.

Key words:  Guarantee Scheme, Success, Sadhana Conference, Pushpa Amarnath.