ಪಿಯು‌ ಉಪನ್ಯಾಸಕರ ವರ್ಗಾವಣೆ :  ‘ ಟರ್ಮಿನಲಿ ಇಲ್’ ದಂಧೆ..!

There is suspicion that the Department of Pre-University Education is using the 'terminal illness' preference in the transfer process of PU lecturers. It is suspicious that many of those who were kept in abeyance for not submitting supplementary/satisfactory documents despite applying under various priorities during the publication of the provisional selection list have infiltrated the final list.

* ತಾತ್ಕಾಲಿಕ ಪಟ್ಟಿಯಲ್ಲಿ ತಡೆ ಹಿಡಿಯಲಾದವರು, ಅಂತಿಮ ಪಟ್ಟಿಯಲ್ಲಿ ‘ಅರ್ಹರು’

ಬೆಂಗಳೂರು, ಜೂ.೨೩,೨೦೨೫ : ಪದವಿ ಪೂರ್ವ‌ ಶಿಕ್ಷಣ‌ ಇಲಾಖೆ ನಡೆಸುತ್ತಿರುವ ಪಿಯು‌ ಉಪನ್ಯಾಸಕರ ವರ್ಗಾವಣೆ‌ ಪ್ರಕ್ರಿಯೆಯಲ್ಲಿ ‘ಮಾರಣಾಂತಿಕ ಕಾಯಿಲೆ’ (ಟರ್ಮಿನಲಿ ಇಲ್) ಆದ್ಯತೆಯನ್ನು ‌ಬಳಸಿಕೊಂಡು‌‌ ಅಕ್ರಮ ನಡೆಸುತ್ತಿರುವ ಅನುಮಾನ ಮೂಡಿದೆ.

ತಾತ್ಕಾಲಿಕ‌ ಆಯ್ಕೆ ಪಟ್ಟಿ ಪ್ರಕಟಣೆಯ ಸಂದರ್ಭ ವಿವಿಧ ಆದ್ಯತೆಗಳಡಿ ಅರ್ಜಿ‌ ಸಲ್ಲಿಸಿಯೂ ಪೂರಕ/ ತೃಪ್ತಿದಾಯಕ ದಾಖಲೆ ಸಲ್ಲಿಸದ ಕಾರಣಕ್ಕೆ ತಡೆ‌‌ ಹಿಡಿಯಲಾದ (kept in abeyance) ಪಟ್ಟಿಯಲ್ಲಿದ್ದವರಲ್ಲಿ‌‌‌‌ ಹಲವರು ಅಂತಿಮ ಪಟ್ಟಿಯಲ್ಲಿ ನುಸುಳಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ಟರ್ಮಿನಲಿ‌‌ ಇಲ್ (ಮಾರಣಾಂತಿಕ ಕಾಯಿಲೆ) ಆದ್ಯತೆಯಡಿ ಅಂತಿಮ ಪಟ್ಟಿಯಲ್ಲಿರುವ 27 ಅಭ್ಯರ್ಥಿಗಳ ಪೈಕಿ 10 ಮಂದಿ 13.06.2025 ರಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜಂಟಿ‌ ನಿರ್ದೇಶಕರು (ಆಡಳಿತ) ಪ್ರಕಟಿಸಿದ ತಾತ್ಕಾಲಿಕ ಪಟ್ಟಿಯಲ್ಲಿ ‘ತಡೆ ಹಿಡಿಯಲಾದವರ’ ಯಾದಿಯಲ್ಲಿದ್ದರು. ಡಾ. ಎಚ್.ಸಿ. ಮಹದೇವಸ್ವಾಮಿ (ಕನ್ನಡ), ಎಂ.ಆರ್. ಸರಿತಾ, ಸುಜಾತ, ವೀಣಾ ಆಲಗೂಡ್ಕರ್, ಸುಮಂಗಲ ಅಕ್ಕಿ, ವಿ.ಪಣೀಶ್ (ಇಂಗ್ಲಿಷ್), ರಶ್ಮಿ (ಇತಿಹಾಸ), ಮಾರುತಿ (ಸಮಾಜ ಶಾಸ್ತ್ರ), ಜೆ.ಪಿ.ಶಾಂತಲಾ (ಗಣಿತ ಶಾಸ್ತ್ರ), ಕೆ.ಬಿ.ಮಧುರ (ಜೀವಶಾಸ್ತ್ರ) ಅವರ ‘ ಮಾರಣಾಂತಿಕ ಕಾಯಿಲೆ ಆದ್ಯತಾ ಕೋರಿಕೆಯನ್ನು ಇಲಾಖೆ ತಡೆ ಹಿಡಿದಿತ್ತು.

vtu

ಈ‌ ಪೈಕಿ ವೀಣಾ, ರಶ್ಮಿ, ಶಾಂತಲಾ ಅವರ ಹೊರತು ಉಳಿದ ಏಳು ಜನರ ಕೋರಿಕೆ ತಡೆ ಹಿಡಿಯಲು ಇಲಾಖೆ ನೀಡಿದ್ದ ಸ್ಪಷ್ಟವಾದ ಕಾರಣ : ‘ ಮಾನ್ಯವಾದ ಆದ್ಯತೆಯಲ್ಲ. ಮಾರಣಾಂತಿಕ ಕಾಯಿಲೆ ಎನ್ನುವುದನ್ನು ಪರಿಗಣಿಸಲಾಗದು’ (Not Valid Priority. Not considered as Terminal illness). ಮೆಡಿಕಲ್ ಬೋರ್ಡ್ ಪ್ರಮಾಣ ಪತ್ರ‌ ಸಲ್ಲಿಸಿಲ್ಲ ಎನ್ನುವ ಕಾರಣಕ್ಕೆ ವೀಣಾ ಅವರ ಕೋರಿಕೆಯನ್ನು,  ಮೆಡಿಕಲ್ ಬೋರ್ಡ್‌ನ ಮೂರು ಜನರ ಸಮಿತಿ ಪ್ರಮಾಣಿಕರಿಸಿಲ್ಲ ಎಂದು ಶಾಂತಲಾ ಅವರ‌ ಕೋರಿಕೆಯನ್ನು, ಚಿಕಿತ್ಸೆ ಪಡೆಯುವ ಜಾಗದ ಮಾಹಿತಿ ‌ನೀಡಿಲ್ಲ ಎಂದು ರಶ್ಮಿ ಅವರ ಕೋರಿಕೆಯನ್ನು ತಡೆ ಹಿಡಿಯಲಾಗಿತ್ತು.

ಜೂ.13 ರಂದು ತಾತ್ಕಾಲಿಕ ಪಟ್ಟಿ ಪ್ರಕಟಿಸಿದ ಇಲಾಖೆಯು ಆಕ್ಷೇಪಣೆಗಳಿದ್ದರೆ 18.06.2025 ರೊಳಗೆ ಸಲ್ಲಿಸುವಂತೆ ಸೂಚಿಸಿತ್ತು. ಬಳಿಕ, ಜೂ.20 ರಂದು ಅಂತಿಮ ಪಟ್ಟಿ ಪ್ರಕಟಣೆ ಸಂದರ್ಭ ಇಲಾಖೆ ನೀಡಿದ ಟಿಪ್ಪಣಿಯಲ್ಲಿ, ‘ಪ್ರಕಟಿತ ಪಟ್ಟಿಗೆ ಬಂದಂತಹ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ, ಅಪೂರ್ಣ ದಾಖಲೆಗಳನ್ನು ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿ, ವಿವಿಧ ಆದ್ಯತೆಯಡಿಯಲ್ಲಿ ಹಾಗೂ ಇತರೆ ಆದ್ಯತೆ ವರ್ಗದಲ್ಲಿ ಸಲ್ಲಿಸಲಾದ ಅರ್ಜಿಗಳ ಅಂತಿಮ ಪಟ್ಟಿ‌ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.

ಟರ್ಮಿನಲ್ ಇಲ್ ಆದ್ಯತೆಯ ಹತ್ತು ಅಭ್ಯರ್ಥಿಗಳು ಸಹಿತ ಹಲವರ ಆದ್ಯತಾ ಕೋರಿಕೆಯನ್ನು ಇಲಾಖೆಯೇ ‘ತಡೆ ಹಿಡಿದ’ ಕಾರಣ ಅವರ ವಿಷಯದಲ್ಲಿ ಯಾರೂ ಆಕ್ಷೇಪಣೆ ಸಲ್ಲಿಸಿರಲಿಲ್ಲ.

‘ಆಕ್ಷೇಪಣೆ‌ ಸಲ್ಲಿಕೆ ಅವಧಿ ಮುಗಿದ ನಂತರ ಹತ್ತು‌‌ ಜನರ ಪೈಕಿ ವೀಣಾ, ಮಧುರ ಅವರ ಹೊರತು 8 ಮಂದಿ ಅಂತಿಮ ಪಟ್ಟಿಯಲ್ಲಿ ‘ಅರ್ಹತೆ’ ಪಡೆದಿದ್ದಾರೆ.ತಾತ್ಕಾಲಿಕ ಪಟ್ಟಿಯಲ್ಲಿ kept in abeyance ಆಗಿದ್ದವರು, ಒಂದು ವಾರದಲ್ಲಿ ‘ಅರ್ಹ’ತೆ ಪಡೆದ ಪವಾಡ ಹೇಗೆ ಸಾಧ್ಯವಾಯಿತು, ಇದರ ಹಿಂದೆ ಏನು ಚಮತ್ಕಾರ ನಡೆದಿರಬಹುದು ಎನ್ನುವುದು ಉಪನ್ಯಾಸಕ ವಲಯವನ್ನು ಕಾಡುತ್ತಿರುವ ಪ್ರಶ್ನೆ.

 

ಈ ‘ಲಾಭಕರ ದಂಧೆ’ಯಲ್ಲಿ ಅರ್ಹರಾದ ಹೆಚ್ಚಿನವರು ಮೈಸೂರು ಜಿಲ್ಲೆಗೆ ಸೇರಿರುವುದು ಮತ್ತು ವಿಷಯವಾರು ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು, ಕೌನ್ಸೆಲಿಂಗ್ ನಲ್ಲಿ ವರ್ಗಾವಣೆ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿರುವುದು ಗಮನಾರ್ಹ ಸಂಗತಿ.

ಕಾನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಮಾರಣಾಂತಿಕ ಕಾಯಿಲೆ, ಪತಿ-ಪತ್ನಿ ಪ್ರಕರಣ‌ ಸಹಿತ ಹಲವು ಆದ್ಯತಾ ಅವಕಾಶಗಳಿವೆ. ಕೆಲವರು‌ ಇಂಥ ಅವಕಾಶವನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವುದರಿಂದ ‘ಸಾಮಾನ್ಯ ಅವಕಾಶ’ದಡಿ ವರ್ಗಾವಣೆ ನಿರೀಕ್ಷೆಯಲ್ಲಿರುವವರು ಹಿರಿತನ, ಅತಿ ಹೆಚ್ಚು ಅರ್ಹತಾ ಅಂಕ ಇದ್ದರೂ‌ ಪ್ರಯೋಜನ ಇಲ್ಲದಂತಾಗಿದೆ ಎನ್ನುವುದು ಹಲವು ಹಿರಿಯ ಉಪನ್ಯಾಸಕರ ಆಕ್ಷೇಪ.

‘ಟರ್ಮಿನಲಿ ಇಲ್’ ಆದ್ಯತೆಯ ಪ್ರಯೋಜನ ಪಡೆಯಬೇಕೆಂದರೆ ಅಭ್ಯರ್ಥಿ ಗುಣಪಡಿಸಲಾಗದ ‌ಮಾರಣಾಂತಿಕ ಕಾಯಿಲೆಯ ಜತೆ ಜೀವಿಸುತ್ತಿರಬೇಕು. ಅದನ್ನು ದೃಢಪಡಿಸಲು ಹಲವು ನಿಯಮಗಳನ್ನು ಅನುಸರಿಸಬೇಕು. ಆದರೆ, ಇತ್ತೀಚಿನ‌ ವರ್ಷಗಳಲ್ಲಿ  ಸ್ಪಾಂಡಿಲೈಟಿಸ್ ಮತ್ತಿತರ ಸಾಮಾನ್ಯ ಸಮಸ್ಯೆ ಇರುವವರು, ಚೆನ್ನಾಗಿ ಓಡಾಡಿಕೊಂಡಿರುವವರು ‘ಟರ್ಮಿನಲಿ‌ ಇಲ್’ ಎಂದು ವೈದಕೀಯ ಪ್ರಮಾಣಪತ್ರ ಮಾಡಿಸಿಕೊಂಡು, ಆದ್ಯತೆಯ‌ ಮೇಲೆ ಲಾಭ ಗಿಟ್ಟಿಸಿಕೊಳ್ಳುತ್ತಿರುವುದನ್ನು ಈ ಪ್ರಕರಣ ಮತ್ತೊಮ್ಮೆ ಸಾಬೀತು ‌ಪಡಿಸಿದೆ.

ತಮ್ಮ ಜೊತೆಗೇ ಓಡಾಡಿಕೊಂಡಿರುವವರು ‘ಆಕ್ಷೇಪ’ ಎತ್ತಬಾರದು ಎನ್ನುವ ಕಾರಣಕ್ಕೆ ಆಕ್ಷೇಪಣೆ ಸಲ್ಲಿಕೆ  ಅವಧಿ ವರೆಗೆ ಅವರ‌ ಹೆಸರುಗಳನ್ನು ತಡೆ ಹಿಡಿದ ಪಟ್ಟಿಯಲ್ಲಿಟ್ಟು, ಬಳಿಕ ಸೇರಿಸುವ ಚಾಕಚಕ್ಯತೆ ಮೆರೆಯಲಾಗುತ್ತಿದೆ. ಮಾರಣಾಂತಿಕ ಕಾಯಿಲೆಯ ದಾಖಲೆ ಸಲ್ಲಿಸುವ ಕೆಲವರು,ವರ್ಗಾವಣೆ ಪ್ರಕ್ರಿಯೆ‌‌ ಮುಗಿದ ಬಳಿಕ ಎಲ್ಲರಂತೆ, ಎಲ್ಲೆಡೆ  ಬಿಂದಾಸ್ ಆಗಿ ಓಡಾಡಿಕೊಂಡಿರುವುದು, ಮುಂದಿನ ವರ್ಗಾವಣೆ ಕಾನ್ಸೆಲಿಂಗ್ ವೇಳಗೆ ದೂರದಲ್ಲಿರುವ ಪತಿ /ಪತ್ನಿಯನ್ನು ಹತ್ತಿರಕ್ಕೆ ವರ್ಗ ಮಾಡಿಸಿಕೊಳ್ಳಲು ‘ಪತಿ-ಪತ್ನಿ ಆದ್ಯತೆ’ ಮೇಲೆ ಅರ್ಜಿ ಗುಜರಾಯಿಸುವುದು … ಪಿಯು ಇಲಾಖೆಯಲ್ಲಿ ‘ಅತಿ ಸಾಮಾನ್ಯ’ ಸಂಗತಿಗಳು’ ಎನ್ನುವಂತೆ‌ ಚರ್ಚೆಯಾಗುತ್ತಿವೆ.

ವರ್ಗಾವಣೆಯಲ್ಲಿ ಅಕ್ರಮಗಳನ್ನು ತಡೆಯಲು ಸರ್ಕಾರ ನಿಯಮ ರೂಪಿಸಿದರೆ,ವ್ಯವಸ್ಥೆಯ ಒಳಗೇ ಇದ್ದು ಬಿಲ‌ ಕೊರೆಯುವ ಚಾಣಾಕ್ಷರು ಆ‌ ನಿಯಮಗಳನ್ನೆ ಅಕ್ರಮಕ್ಕೆ ರಹದಾರಿ‌ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆಲ ಸರಕಾರ ಇತಿಶ್ರೀ ಹಾಡದಿದ್ದರೆ ಕಾನ್ಸೆಲಿಂಗ್-ಪಾರರ್ಶಕತೆ ಎನ್ನುವುದೆಲ್ಲ ಉಳಿದವರ ಕಣ್ಣಿಗೆ ಮಣ್ಣೆರೆಚುವ ತಂತ್ರವಾಗುತ್ತದೆಯಷ್ಟೆ.

ಕೌನ್ಸೆಲಿಂಗ್ ಆಶಯವನ್ನು ಬುಡಮೇಲು ಮಾಡುವ ಕೃತ್ಯದಲ್ಲಿ ಕೆಲವು ಉಪನ್ಯಾಸಕರು,ಇಲಾಖೆಯ ಆಯಕಟ್ಟಿನ ಜಾಗದಲ್ಲಿರುವ ಅಧಿಕಾರಿಗಳು, ಪ್ರಮಾಣ ಪತ್ರ‌ ನೀಡುವ ವೈದ್ಯಾಧಿಕಾರಿಗಳು ‘ಜಂಟಿ ಕಾರ್ಯಾಚರಣೆ’ ಎದ್ದು ಕಠಣುತ್ತಿದ್ದು, ಸರ್ಕಾರ ತಕ್ಷಣ ಲೋಪ‌ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ನೊಂದ ಉಪನ್ಯಾಸಕರು ಆಗ್ರಹಿಸಿದ್ದಾರೆ.

ಅಂದ ಹಾಗೆ, ಈಗ ಪ್ರಕಟವಾಗಿರುವ ಆದೇಶದ ಪ್ರಕಾರ ಜೂ.25 ರಿಂದ 27ರ ವರೆಗೆ ಪ್ರಾಂಶುಪಾಲರು, ಉಪನ್ಯಾಸಕರ ವರ್ಗಾವಣೆ ಕಾನ್ಸೆಲಿಂಗ್ ನಡೆಯಲಿದೆ

key words: PUC, lecturer transfer, ‘Terminally ill’, scam.

vtu

SUMMARY: 

PU lecturer transfer: ‘Terminally ill’ scam.

There is suspicion that the Department of Pre-University Education is using the ‘terminal illness’ preference in the transfer process of PU lecturers. It is suspicious that many of those who were kept in abeyance for not submitting supplementary/satisfactory documents despite applying under various priorities during the publication of the provisional selection list have infiltrated the final list.