ಸಾರ್ವಜನಿಕರು ಲೋಕ್ ಅದಾಲತ್ ನ ಉಪಯೋಗ ಪಡೆದುಕೊಳ್ಳಿ – ಜಿ.ಎಸ್ ಸಂಗ್ರೇಶಿ ಮನವಿ

ಮೈಸೂರು,ಸೆಪ್ಟಂಬರ್,8,2023(www.justkannada.in):  ಸೆಪ್ಟೆಂಬರ್ 9ರಂದು ರಾಷ್ಟ್ರೀಯ ಲೋಕ ಅದಾಲತ್ ಅನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎಸ್ ಸಂಗ್ರೇಶಿ ಅವರು ತಿಳಿಸಿದರು.

ಸೆಪ್ಟೆಂಬರ್ 9 ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ನ ಸಲುವಾಗಿ ಇಂದು ಮಳಲವಾಡಿ ನ್ಯಾಯಾಲಯದ ವಿಡಿಯೋಕಾನ್ಫರೆನ್ಸ್  ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ರಾಜಿ ಆಗಬಹುದಾದ ಪ್ರಕರಣಗಳನ್ನು ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಲೋಕದಲತ್ತನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮೈಸೂರು ನಗರ ಮತ್ತು ತಾಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ ಒಟ್ಟು 1,14,990 ಪ್ರಕರಣಗಳ ವಿಚಾರಣೆ ಬಾಕಿಯಿದ್ದು, ಅವುಗಳ ಪೈಕಿ 55770 ಸಿವಿಲ್ ಪ್ರಕರಣಗಳು ಹಾಗೂ 59,220 ಕ್ರಿಮಿನಲ್ ಪ್ರಕರಣಗಳಿವೆ. ಸದರಿ ಪ್ರಕರಣಗಳಲ್ಲಿ 21, 584 ರಾಜಿ ಆಗಬಹುದಾದ ಪ್ರಕರಣಗಳಿದ್ದು ಈಗಾಗಲೇ 13,315 ಪರ್ಕರಣಗಳನ್ನು ರಾಜಿಯಾಗುವ ಸಾಧ್ಯತೆ ಇರುವ ಪ್ರಕರಣಗಳೆಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಿನೇಶ್ ಬಿ.ಜಿ ಅವರು ಮಾತನಾಡಿ, ಈ ವರ್ಷದಲ್ಲಿ ನಡೆಯುತ್ತಿರುವ ಮೂರನೇ ಲೋಕ ಅದಾಲತ್ ಇದಾಗಿದೆ. ಕಳೆದ ಬಾರಿಯ ಲೋಕ ಅದಾಲತ್ ನಲ್ಲಿ ನಾಲ್ಕು ಸಾವಿರ ಪ್ರಕರಣಗಳ ಇತ್ಯರ್ಥದ ಗುರಿಯಿತ್ತು ಆದರೆ 5,582 ಪ್ರಕರಣಗಳನ್ನು ಇತ್ಯರ್ಥ ಗೊಳಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಎಂ ಮಹದೇವಸ್ವಾಮಿ, ಉಪಾಧ್ಯಕ್ಷರಾದ ಪುಟ್ಟ ಸಿದ್ದೇಗೌಡ ಹಾಗೂ ಕಾರ್ಯದರ್ಶಿಗಳಾದ ಉಮೇಶ್ ಎಸ್ ಭಾಗವಹಿಸಿದ್ದರು.

Key words: Public – use – Lok Adalat –mysore- GS Sangreshi