ಸಿದ‍್ಧರಾಮಯ್ಯ ಬಗ್ಗೆ ಸಚಿವ ಅಶ‍್ವಥ್ ನಾರಾಯಣ್ ಹೇಳಿಕೆಗೆ ಖಂಡನೆ: ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ.

ಮೈಸೂರು,ಫೆಬ್ರವರಿ,25,2023(www.justkannada.in): ಟಿಪ್ಪುವಿನಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡಿದ್ದ  ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಇಂದು ಮೈಸೂರಿನಲ್ಲಿ ಹಲವು ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು.

ರೈತ ಸಂಘ, ಡಿಎಸ್ಎಸ್, ಕನ್ನಡಪರ, ಕಾಯಕ ಸಮಾಜಗಳು, ಪ್ರಗತಿಪರ, ಅಲ್ಪಸಂಖ್ಯಾತ, ಸಿದ್ದು ಅಭಿಮಾನಿ ಬಳಗ, ಸಾಹಿತ್ಯ ಕ್ಷೇತ್ರ ಸೇರಿದಂತೆ ಹಲವು ಸಂಘಟನೆಗಳಿ  ಪ್ರತಿಭಟನೆ ನಡೆಸಿ ಸಚಿವ ಅಶ್ವಥ್ ನಾರಾಯಣ್ ರಾಜೀನಾಮೆಗೆ ಆಗ್ರಹಿಸಿದರು. ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಮತ್ತು ಬಿಜೆಪಿಯಿಂದ ಅಶ‍್ವಥ್ ನಾರಾಯಣ್ ರನ್ನ ಉಚ್ಚಾಟನೆ ಮಾಡಬೇಕು ಎಂದು ಪ್ರತಿಭಟನಾಕಾರು ಆಕ್ರೋಶ ವ್ಯಕ್ತಪಡಿಸಿದರು.

ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಡೊಳ್ಳು,ತಮಟೆಗಳೊಂದಿಗೆ ಪ್ರತಿಭಟನಾ ಮೆರವಣಿಗೆ ಸಾಗಿತು. ಪ್ರತಿಭಟನಾಕಾರರು ನನ್ನನ್ನೂ ಹತ್ಯೆ ಮಾಡಿ ಎಂಬ ಭಿತ್ತಿ ಪತ್ರ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮರಿಗೌಡ, ಅಯೂಬ್ ಖಾನ್, ಜಿಲ್ಲಾ ಮತ್ತು ಗ್ರಾಮಾಂತರ ಕಾಂಗ್ರೆಸ್ ಜಿಲ್ಲಾಧ್ಯರಾದ ವಿಜಯ್ ಕುಮಾರ್ ಮತ್ತು ಮೂರ್ತಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.

Key words: Protest –Mysore- against-Minister –Ashwath Narayan- statement