ಬೆಳಗಾವಿ,ಜುಲೈ,22,2025 (www.justkannada.in): ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಣಿಚನ್ನಮ್ಮ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ವಿಜಯಪುರ ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕ ಪ್ರೊ.ಕೆ.ಎಲ್ .ಎನ್ ಮೂರ್ತಿ ಅಮಾನತಾದವರು. ರಾಣಿಚನ್ನಮ್ಮ ವಿಶ್ವ ವಿದ್ಯಾನಿಲಯದ ಕುಲಸಚಿವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರಾಧ್ಯಾಪಕ ಪ್ರೊ.ಕೆ.ಎಲ್ .ಎನ್ ಮೂರ್ತಿ ಅವರು ತನಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿರುವುದಾಗಿ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಆರೋಪ ಮಾಡಿದ್ದರು. ಈ ಸಂಬಂಧ ವಿಚಾರಣೆ ಮಾಡಿ ವರದಿಯನ್ನು ಸಲ್ಲಿಸಲು ಆಂತರಿಕ ದೂರು ನಿವಾರಣಾ ಸಮಿತಿಗೆ ಸೂಚನೆ ನೀಡಲಾಗಿತ್ತು.
ಇದೀಗ ಆಂತರಿಕ ದೂರು ನಿವಾರಣಾ ಸಮಿತಿ ಅಂತಿಮ ವರದಿ ಸಲ್ಲಿಸಿದ್ದು, ಆರೋಪಿತ ಪ್ರಾಧ್ಯಾಪಕರು ತನ್ನ ಅಧಿಕಾರ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದು ಮತ್ತು ಅವರ ನಡವಳಿಕೆಯು POSH ಕಾಯ್ದೆಯ ಪ್ರಕಾರ ಲೈಂಗಿಕ ಕಿರುಕುಳಕ್ಕೆ ಕಾರಣವಾಗಿದೆ. ಕಾರಣ ಶಿಸ್ತು ಕ್ರಮ ಸಮರ್ಥನೀಯವಾಗಿದ್ದು, ಮರುಕಳಿಸುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲು ಅಂತಿಮ ವರದಿಯಲ್ಲಿ ತಿಳಿಸಿತ್ತು.
ಪ್ರಾಧ್ಯಾಪಕ ಪ್ರೊ. ಕೆ. ಎಲ್. ಎನ್. ಮೂರ್ತಿ ಇವರ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಇದೀಗ ಆಂತರಿಕ ದೂರು ನಿವಾರಣಾ ಸಮಿತಿ ವರದಿ ಆಧರಿಸಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇತಿಹಾಸ ವಿಭಾಗದ ಪ್ರಾಧ್ಯಾಪಕ ಹುದ್ದೆಯಿಂದ ಅಮಾನತುಗೊಳಿಸಿ ರಾಣಿಚನ್ನಮ್ಮ ವಿಶ್ವ ವಿದ್ಯಾನಿಲಯದ ಕುಲಸಚಿವರು ಆದೇಶಿಸಿದ್ದಾರೆ.
Key words: Professor, suspended ,sexually harassing, research student