ಮೈಸೂರು, ಮಾರ್ಚ್,11,2026 (www.justkannada.in): ಸಂಶೋಧನೆ ಮಾಡುವಾಗ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಪರಿಶ್ರಮದಿಂದ ಸಂಶೋಧನೆಗಳನ್ನು ಸಿದ್ಧಪಡಿಸಬೇಕು, AI ತಂತ್ರಜ್ಞಾನದ ಕಡೆ ಮೊರೆಹೋಗುವುದನ್ನು ಕಡಿಮೆ ಮಾಡಿ ತಮ್ಮಲ್ಲಿರುವ ಜ್ಞಾನವನ್ನು ಸಂಶೋಧನೆಯಲ್ಲಿ ಬಳಸಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ . ಶರಣಪ್ಪ ಹಲಸೆ ಅವರು ಹೇಳಿದರು.
ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಡಾ. ಬಾಬು ಜಗಜೀವನರಾಮ್ ಸಂಶೋಧನಾ ಸಂಸ್ಥೆ ಸಮಾಜ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ಕಾವೇರಿ ಸಭಾಂಗಣದಲ್ಲಿ ಸಂಶೋಧನಾ ವಿಧಾನಗಳ ಕುರಿತು ಕಾರ್ಯಗಾರವನ್ನು ಕುಲಪತಿ ಪ್ರೊ . ಶರಣಪ್ಪ ಹಲಸೆ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನಿಲಯದಲ್ಲಿ ಇಂದು 345 ವಿದ್ಯಾರ್ಥಿಗಳು ಸಂಶೋಧನೆಗೆ ಪ್ರವೇಶಾತಿ ಪಡೆದುಕೊಂಡಿದ್ದಾರೆ. ಇಂದಿನ ಸಂಶೋಧನೆಗಳು ತಮ್ಮ ಮೂಲ ತತ್ವವನ್ನು ಕಳೆದುಕೊಳ್ಳುತ್ತಿವೆ, ಸಂಶೋಧನೆಯಲ್ಲಿ ಪ್ಲಾಗರಿಸಂ (ಕೃತಿಚೌರ್ಯ) ಚೆಕ್ ಮಾಡುವುದು ಅವಶ್ಯಕವಾಗಿದೆ ಆದ್ದರಿಂದ UGC ಸಂಸ್ಥೆಯು ಸಂಶೋಧನೆಯಲ್ಲಿ ಸಂಶೋಧನಾ ನೀತಿ ಶಾಸ್ತ್ರ ಪತ್ರಿಕೆಯನ್ನು ಸೇರಿಸಲಾಗಿದೆ ಎಂದರು.
ಸರ್ಕಾರದಿಂದ 5 ಲಕ್ಷ ರೂ ಅನುದಾನ ನೀಡಿ ಇಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಊಟ ವಸತಿ ಸೌಲಭ್ಯದೊಂದಿಗೆ ಮೂರು ದಿನದ ಕಾರ್ಯಗಾರವನ್ನು ಏರ್ಪಡಿಸಿದೆ, ಸಂಶೋಧನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದುಕೊಳ್ಳಿ ಎಂದು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಎನ್. ಸಿ.ಇ.ಆರ್. ಟಿ ಪಠ್ಯಪುಸ್ತಕಗಳನ್ನು ಓದಿಕೊಳ್ಳಬೇಕು, ವಿದ್ಯಾರ್ಥಿಗಳು ಯಾವುದೇ ಕೆಲಸವನ್ನು ಮಾಡುವಾಗ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಬಹದ್ದೂರ್ ನಿರ್ವಹಣಾ ಸಂಸ್ಥೆಯ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಆರ್ ಮಹೇಶ್ ಅವರು ಮಾತನಾಡಿ ಸಂಶೋಧನೆಗಳನ್ನು ಇಂದಿನ ದಿನಗಳಲ್ಲಿ ವಿವಿಧ ರೀತಿಯ ಆಯಾಮಗಳಿಂದ ಸಿದ್ಧಪಡಿಸಬೇಕು, ನಮ್ಮ ಸಂಶೋಧನೆಗಳು ಸಮಾಜಮುಖಿಯಾಗಿರಬೇಕು ಎಂದರು.
ಆರ್ಟಿಫಿಶಿಯಲ್ ಇಂಟಲಿಜೆನ್ಸಿ ತಂತ್ರಜ್ಞಾನದ ಸಂಪೂರ್ಣ ಮಾಹಿತಿ ಇಂದಿನ ಸಂಶೋಧನೆಯಲ್ಲಿ ಕಂಡು ಬರುತ್ತಿದೆ. AI ತಂತ್ರಜ್ಞಾನವು ಅದರ ಯೋಜನೆ ಕಡೆ ಕರೆದುಕೊಂಡು ಹೋಗುತ್ತಿದೆ. ಆದರೆ ತಮ್ಮ ಮೂಲ ಪರಿಶ್ರಮ ಕಡಿಮೆಯಾಗುತ್ತಿದೆ. ಕೆಲವು ಸಂಶೋಧನೆಯಲ್ಲಿ ಪ್ರಾಮಾಣಿಕತೆ ಶೂನ್ಯದಿಂದ ಕೂಡಿರುತ್ತದೆ, ತಂತ್ರಜ್ಞಾನಗಳಿಂದ ಲಾಭವನ್ನು ಪಡೆದುಕೊಳ್ಳಬೇಕೆ ಹೊರತು ನಾವೇ ತಂತ್ರಜ್ಞಾನಕ್ಕೆ ಒಳಪಡಬಾರದು ಎಂದು ಹೇಳಿದರು.
ಸಂಶೋಧನೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತು ಗುಂಪುಗಾರಿಕೆಯಲ್ಲಿ ಚರ್ಚೆಗಳನ್ನು ನಡೆಸಿ ಮಾಹಿತಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಮೌಲ್ಯಮಾಪಕರು ಸಂಶೋಧನೆಯನ್ನು ಮೌಲ್ಯಮಾಪನ ಮಾಡುವಾಗ ಅತಿ ಹೆಚ್ಚು ಪ್ರಾಮಾಣಿಕತೆಯನ್ನು ಗುರುತಿಸಬೇಕು ಸಂಶೋಧನೆಗಳು ಸಮಾಜಕ್ಕೆ ಪೂರಕವಾಗಿರಬೇಕು ಹಾಗೂ ಇತರರಿಗೆ ಸಹಾಯವಾಗುವಂತೆ ಸಿದ್ಧಪಡಿಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಡೀನ್ ಪ್ರೊ. ಎಂ ರಾಮನಾಥಮ್ ನಾಯ್ಡು ಅವರು ಮಾತನಾಡಿ, ವಿದ್ಯಾರ್ಥಿಗಳು ಸಂಶೋಧನೆಗಳ ಬಗ್ಗೆ ಅತಿಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬೇಕು ಮತ್ತು ಸಂಶೋಧನೆಯಲ್ಲಿ ಮೆಥಡಾಲಜಿ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾದದ್ದು ಎಂದು ಹೇಳಿದರು.
ಭಾಷೆಗಳಿಗೆ ವಿವಿಧ ರೀತಿಯ ಮೆಥಡಾಲಜಿ ಇದೆ. ಆದ್ದರಿಂದ ವಿವಿಧ ರೀತಿಯ ತಜ್ಞರನ್ನು ಕರೆತಂದು ಇಂದಿನ ಸಂಶೋಧನಾ ಕಾರ್ಯಗಾರವನ್ನು ಏರ್ಪಡಿಸಲಾಗಿದೆ. ಕಠಿಣ ಪರಿಶ್ರಮದಿಂದ ಸಂಶೋಧನೆಯನ್ನು ಸಿದ್ಧಪಡಿಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಸಿ ಎಸ್ ಆನಂದ್ ಕುಮಾರ್, ಹಣಕಾಸು ಅಧಿಕಾರಿ ಪ್ರೊ. ನಿರಂಜನ್ ರಾಜ್, ಡೀನ್ ಡಾ. ಎನ್ ಆರ್ ಚಂದ್ರೇಗೌಡ, ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ ಸಂಶೋಧನ ಮತ್ತು ವಿಸ್ತಾರಣ ಕೇಂದ್ರದ ನಿರ್ದೇಶಕಿಯಾದ ಡಾ.ಆರ್. ಶರಣಮ್ಮ ಅವರು ಉಪಸ್ಥಿತರಿದ್ದರು.
Key words: KSOU, research, AI technology, Prof. Sharanappa Halase







