ಪಾಕ್ ಪರ ಘೋಷಣೆ ಪ್ರಕರಣ: ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳ ನಡೆ ಸ್ವಾಗತಿಸಿದ ಆರ್.ಅಶೋಕ್.  

ಬೆಂಗಳೂರು, ಮಾರ್ಚ್,7,2024(www.justkannada.in): ಪಾಕ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಗೆ ಪ್ರಮಾಣ ವಚನ ಬೋಧಿಸದಂತೆ ನಿವೃತ್ತ ಐಎಎಸ್, ಐಪಿಎಸ್ , ಐಆರ್ ಎಸ್ ಅಧಿಕಾರಿಗಳು ಉಪರಾಷ್ಟ್ರಪತಿ ಅವರಿಗೆ ಪತ್ರ ಬರೆದ ನಡೆಯನ್ನು  ವಿಪಕ್ಷ ನಾಯಕ ಆರ್.ಅಶೋಕ್ ಸ್ವಾಗತಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್, ರಾಜ್ಯಸಭಾ ಚುನಾವಣೆಯಲ್ಲಿ ಚುನಾಯಿತರಾಗಿರುವ ಕಾಂಗ್ರೆಸ್ ನಾಯಕ  ನಾಸಿರ್ ಹುಸೇನ್ ಅವರ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದ ಘಟನೆ ಹಿನ್ನೆಲೆಯಲ್ಲಿ ಅವರಿಗೆ ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಬಾರದು ಎಂದು 17 ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಘನತೆವೆತ್ತ ಉಪರಾಷ್ಟಪತಿಗಳು ಹಾಗೂ ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಹಿರಿಯ ಅಧಿಕಾರಿಗಳ ನಿಲುವನ್ನು ಸ್ವಾಗತಿಸುತ್ತೇನೆ ಮತ್ತು ಬೆಂಬಲಿಸುತ್ತೇನೆ.

ದೇಶದ್ರೋಹಿಗಳನ್ನು ಪೋಷಿಸಿ, ಬೆಂಬಲಿಸಿ ಅವರು ರಾಷ್ಟ್ರ ವಿದ್ರೋಹದ ಪಾಪದ ಕೆಲಸ ಮಾಡಿದ ಮೇಲೂ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಗೆ ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನ ಒಳಗೆ ಪ್ರವೇಶಿಸುವ ಅರ್ಹತೆಯೇ ಇಲ್ಲ. ಇಂತಹ ವ್ಯಕ್ತಿಗಳಿಗೆ ರಾಜ್ಯಸಭಾ ಸದಸ್ಯತ್ವ ನೀಡಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು. ಸಿಎಂ ಸಿದ್ರಾಮಯ್ಯ,  ಹಾಗೂ ಡಿಸಿಎಂ  ಡಿಕೆ ಶಿವಕುಮಾರ್ ಅವರಿಗೆ ಕಿಂಚಿತ್ತಾದರೂ ದೇಶಪ್ರೇಮವಿದ್ದರೆ ನಾಸಿರ್ ಹುಸೇನ್ ಅವರ ರಾಜೀನಾಮೆ ಪಡೆದು ಮರುಚುನಾವಣೆ ನಡೆಸಬೇಕು ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.

Key words: Pro-Pak- declaration –case-R. Ashok –welcomed- move -retired IAS, IPS officers.