ಇಂದು ಸಂಜೆ ನಂಜನಗೂಡಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ

ಮೈಸೂರು, ಮೇ 07, 2023 (www.justkannada.in): ಪುಧಾನ ಮಂತ್ರಿ ನರೇಂದ್ರ ಮೋದಿ ಇಂದು ಸಂಜೆ 4ಕ್ಕೆ ನಂಜನಗೂಡು ತಾಲ್ಲೂಕಿನ ಎಲಚಗೆರೆಬೋರೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ವಿಧಾನಸಭೆ ಚುನಾವಣೆಯ ಅಂಗವಾಗಿ ಪಕ್ಷದಿಂದ ಆಯೋಜಿಸಿರುವ ಕೊನೆಯ ಬಹಿರಂಗ ಪ್ರಚಾರ ಸಭೆಯಲ್ಲಿಮೋದಿ ಭಾಗವಹಿಲಿದ್ದಾರೆ.

ಮೋದಿ ಅವರು ಶಿವಮೊಗ್ಗ ಕಾರ್ಯಕ್ರಮ ಮುಗಿಸಿ ಇಲ್ಲಿಗೆ ಬರಲಿದ್ದಾರೆ. ವೇದಿಕೆಯಿಂದ ಸುಮಾರು 600 ಮೀಟರ್ ದೂರದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಸಭೆಯ ನಂತರ ಅಲ್ಲಿಂದಲೇ ನೇರವಾಗಿ ತೆರಳಲಿದ್ದಾರೆ.

ನಂಜನಗೂಡಿನಿಂದ 12 ಕಿ.ಮೀ. ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರಿಗೆ 4 ಕಿ.ಮೀ. ದೂರದಲ್ಲಿರುವ ಎಲಚಗೆರೆಬೋರೆಯು ಎರಡೂ ತಾಲ್ಲೂಕುಗಳ ಗಡಿಯಲ್ಲಿದೆ. ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ.

ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳನ್ನು ಹೊರತುಪಡಿಸಿ, ಮೈಸೂರು ಗ್ರಾಮಾಂತರದ ಏಳು ಕ್ಷೇತ್ರಗಳು, ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.