Tuesday, August 4, 2026

BDA Apartments

Home Crime ಮುಡಾ ಕೇಸ್ ನಿಂದ ಹಿಂದೆ ಸರಿಯುವಂತೆ ಒತ್ತಡ ಆರೋಪ: ಸಿಸಿ ಟಿವಿ ದೃಶ್ಯ ಸಮೇತ ಸ್ನೇಹಮಯಿ...

ಮುಡಾ ಕೇಸ್ ನಿಂದ ಹಿಂದೆ ಸರಿಯುವಂತೆ ಒತ್ತಡ ಆರೋಪ: ಸಿಸಿ ಟಿವಿ ದೃಶ್ಯ ಸಮೇತ ಸ್ನೇಹಮಯಿ ಕೃಷ್ಣ ದೂರು

ಮೈಸೂರು,ಡಿಸೆಂಬರ್,18,2024 (www.justkannada.in): ಮುಡಾ ಪ್ರಕರಣದಿಂದ ಹಿಂದೆ ಸರಿಯಿರಿ ಎಂದು ನನಗೆ ಹಾಗೂ ನನ್ನ ಕುಟುಂಬಕ್ಕೆ ಆಮಿಷ, ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿ ದೂರುದಾರ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಗಂಭೀರ ಆರೋಪ ಮಾಡಿರುವ  ಆರ್ ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಮುಡಾ ಪ್ರಕರಣದಿಂದ ಹಿಂದೆ ಸರಿಯಿರಿ ಎಂದು ಒತ್ತಡ ಹಾಕಲಾಗುತ್ತಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಹರ್ಷ, ಶ್ರೀನಿಧಿ ಎಂಬವವರು ಆಮೀಷ ಒಡ್ಡಿದ್ದಾರೆ.  ಮತ್ತೊಬ್ಬ ಆರ್ ಟಿಐ ಕಾರ್ಯಕರ್ತ ಗಂಗರಾಜು ಅವರಿಗೆ ಮೂರು ಕೋಟಿ ರೂ ಹಣ ನೀಡಿದ್ದೇವೆ. ಮುಂಗಡ ಹಣವಾಗಿ ಒಂದೂವರೆ ಕೋಟಿ ರೂಪಾಯಿ ನೀಡಿರುತ್ತೇವೆ ಎಂದು ಹೇಳಿದ್ದಾರೆ ಎಂದು ಆರೋಪಿಸಿದರು.

ಪಾರ್ವತಿ ಅವರ ಆಪ್ತ ಸಹಾಯಕ ಹರ್ಷ ಎಂದು ಹೇಳಿಕೊಂಡಿದ್ದ ವ್ಯಕ್ತಿ. ಆರಂಭದಲ್ಲಿ ನನ್ನ ಮೇಲೆ ಒತ್ತಡ ತಂದರು. ನಾನು ಮನೆಯಲ್ಲಿ‌ ಇಲ್ಲದ ವೇಳೆ ನನ್ನ ಮನೆ ಬಳಿ ಬಂದಿದ್ದಾರೆ. ನನ್ನ ಮಗನಿಗೂ ಅವರು ಆಮೀಷ ಒಡ್ಡಿದ್ದಾರೆ. ಈ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿ ಸಿಸಿಟಿವಿ ದೃಶ್ಯ ಸಮೇತ  ಲೋಕಾಯುಕ್ತ ಎಸ್ಪಿ ಉದೇಶ್ ಅವರಿಗೆ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.

Key words: pressure, withdraw , Muda case,  Snehamayi Krishna