ಮೈಸೂರು,ಡಿಸೆಂಬರ್,13,2025 (www.justkannada.in): ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 2025ನೇ ಸಾಲಿನ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿಗಳ ಪ್ರದಾನ ಮತ್ತು ಹಿರಿಯ ಪತ್ರಕರ್ತರಿಗೆ ಅಭಿನಂದನಾ ಕಾರ್ಯಕ್ರಮವು ಡಿ.14 (ಭಾನುವಾರ) ನಗರದ ಮಾನಸ ಗಂಗೋತ್ರಿ ಆವರಣದಲ್ಲಿರುವ (ಹುಣಸೂರು ರಸ್ತೆ) ವಿಜ್ಞಾನ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಜರುಗಲಿದೆ.
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು, ಮೈಸೂರು ಜಿಲ್ಲಾ ಪರ್ತಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಅಧ್ಯಕ್ಷತೆ ವಹಿಸಲಿದ್ದಾರೆ. ವರ್ಷದ ಹಿರಿಯ ಪತ್ರಕರ್ತರನ್ನು ಮಾಜಿ ಸಚಿವ, ಶಾಸಕ ಜಿ.ಟಿ.ದೇವೇಗೌಡ ಅಭಿನಂದಿಸಲಿದ್ದು, ವಾರ್ಷಿಕ ಪ್ರಶಸ್ತಿಗಳನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಪ್ರದಾನ ಮಾಡುವರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅವರನ್ನು ಅಭಿನಂದಿಸಲಾಗುವುದು. ಪ್ರಧಾನ ಭಾಷಣಕಾರರಾಗಿ ನ್ಯೂಸ್ 18 ಕನ್ನಡ ಸುದ್ದಿ ವಾಹಿನಿಯ ಸಂಪಾದಕ ಹರಿಪ್ರಸಾದ್. ಎ. ಆಗಮಿಸಲಿದ್ದು, ಮುಖ್ಯ ಅತಿಥಿಗಳಗಿ ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಚಾಮರಾಜ ಶಾಸಕ ಕೆ. ಹರೀಶ್ಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಎಸ್ಎಸ್ ಸಮ್ಮೂಹ ಸಂಸ್ಥೆಯ ಮುಖ್ಯಸ್ಥರಾದ ಶ್ರೀಹರಿ ದ್ವಾರಕನಾಥ್ ಭಾಗವಹಿಸಲಿದ್ದಾರೆ.
ಹಿರಿಯ ಪತ್ರಕರ್ತರಿಗೆ ಅಭಿನಂದನೆ:
ಈ ವರ್ಷದ ಹಿರಿಯ ಪತ್ರಕರ್ತರಾದ ನಗರ ಪ್ರದೇಶದಿಂದ ಜಸ್ಟ್ ಕನ್ನಡ ಸುದ್ದಿ ಸಂಸ್ಥೆಯ ಪ್ರಧಾನ ಸಂಪಾದಕ ವಿ. ಮಹೇಶ್ ಕುಮಾರ್, ಗ್ರಾಮೀಣ ಭಾಗದಿಂದ ಆಂದೋಲನ ದಿನಪತ್ರಿಕೆಯ ಹಿರಿಯ ವರದಿಗಾರ ಟಿ.ಎ. ಸಾದಿಕ್ ಪಾಷ, ವರ್ಷದ ಹಿರಿಯ ಉಪ ಸಂಪಾದಕ ವಿಜಯ ಕರ್ನಾಟಕ ಪತ್ರಿಕೆಯ ಕೆ.ಎಸ್.ಮಂಜುನಾಥಸ್ವಾಮಿ, ಹಿರಿಯ ಛಾಯಾಗ್ರಾಹಕ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ಎಸ್. ಉದಯಶಂಕರ್, ದೃಶ್ಯ ಮಾಧ್ಯಮ ವಿಭಾಗದಿಂದ ಸುವರ್ಣ ನ್ಯೂಸ್ ನ ಜಿಲ್ಲಾ ವರದಿಗಾರ ಸಿ.ಎಂ. ಮಧುಸೂದನ್, ಛಾಯಾಗ್ರಾಹಕ ಪ್ರಮೋದ್ ಪ್ರಭು ಹಾಗೆಯೇ ಪ್ರತಿಷ್ಠಿತ ಟಿಎನ್ಐಟಿ ಪ್ರಶಸ್ತಿಗೆ ಭಾಜನರಾದ ಮೈಸೂರಿನ ಪತ್ರಕರ್ತ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ರವಿ ಪಾಂಡವಪುರ ಮತ್ತು ಟಿವಿ 9 ವಾಹಿನಿಯ ಜಿಲ್ಲಾ ವರದಿಗಾರ ರಾಮ್ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಗುತ್ತದೆ. 
ಏಳು ಮಂದಿಗೆ ವಾರ್ಷಿಕ ಪ್ರಶಸ್ತಿ:
ಈ ಸಾಲಿನ ಅತ್ಯುತ್ತಮ ಕನ್ನಡ ವರದಿಗಾರಿಕೆ ಪ್ರಶಸ್ತಿಗೆ ಆಂದೋಲನ ದಿನಪತ್ರಿಕೆ ದಾ.ರಾ.ಮಹೇಶ್, ಇಂಗ್ಲಿಷ್ ವರದಿಗಾರಿಕೆಗೆ ಸ್ಟಾರ್ ಆಫ್ ಮೈಸೂರ್ ಪತ್ರಿಕೆ ವರದಿಗಾರ ಎ. ಗಣೇಶ್, ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಗೆ ಎಸ್.ಆರ್. ಮಧುಸೂದನ್, ದೃಶ್ಯ ಮಾಧ್ಯಮ ವಿಭಾಗದಲ್ಲಿ ನ್ಯೂಸ್ 18 ವಾಹಿನಿಯ ಕೆ.ಎಸ್. ಆನಂದ ಮತ್ತು ವಿಡಿಯೋಗ್ರಫರ್ ಪಿ. ರಾಹುಲ್ ಹಾಗೂ ಇಂಡಿಯನ್ ಟಿವಿ ವರದಿಗಾರ ಚಂದನ್ ಬಲರಾಮ ಮತ್ತು ವಿಡಿಯೋಗ್ರಫರ್ ಎಲ್. ಸತೀಶ್ ಅವರಿಗೆ ಪ್ರಶಸ್ತಿ ಲಭಿಸಿದೆ. ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಇವರಿಗೆ ನಗದು ಸಹಿತ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆದ್ದರಿಂದ ಸದರಿ ಸಮಾರಂಭಕ್ಕೆ ಸಂಘದ ಸರ್ವ ಸದಸ್ಯರು, ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ಆಗಮಿಸಬೇಕೆಂದು ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮತ್ತು ಆಡಳಿತ ಮಂಡಳಿಯ ಸದಸ್ಯರು ಕೋರಿದ್ದಾರೆ.
Key words: Press Day, Mysore, tomorrow, Award, felicitation program







