ಅಕ್ಷಯ ತೃತೀಯ ದಿನ ಬಾಲ್ಯವಿವಾಹ ನಡೆಯದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸೂಚನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ,8,2024 (www.justkannada.in): ಮೇ 10 ರಂದು ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ ವಿವಾಹಗಳು ನಡೆಯುವ ಸಾಧ್ಯತೆ ಹೆಚ್ಚಾಗಿದ್ದು, ಇಂತಹ ವಿವಾಹಗಳಲ್ಲಿ ಬಾಲ್ಯವಿವಾಹಗಳು ನಡೆಯುವ ಸಾಧ್ಯತೆಯೂ ಸಹ ಹೆಚ್ಚಿರುತ್ತದೆ. ಈಗಾಗಲೇ ಶಾಲೆ ಬಿಟ್ಟ ಮಕ್ಕಳ ಅನುಸರಣೆ ಮಾಡಿ ಬಾಲ್ಯವಿವಾಹಕ್ಕೆ ಒಳಗಾಗದಂತೆ ಸೂಕ್ತ ಕ್ರಮಕೈಗೊಳ್ಳುವುದು. ಈ ಸಮಯದಲ್ಲಿ ಯಾವುದೇ ಬಾಲ್ಯವಿವಾಹಗಳು ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಸೂಚಿಸಿದ್ದಾರೆ.

ಜಿಲ್ಲೆಯ ಸಾಮೂಹಿಕ ವಿವಾಹಗಳು ನಡೆಯಲು ಸಾಧ್ಯತೆಗಳಿರುವಂತಹ ಪ್ರಸಿದ್ದ ದೇವಸ್ಥಾನಗಳಾದ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಮಣ್ಯ, ಮಧುರೆ ದೇವಸ್ಥಾನ, ನೆಲಮಂಗಲ  ತಾಲ್ಲೂಕಿನ ಶಿವಗಂಗೆ, ದೇವಹಳ್ಳಿ ತಾಲ್ಲೂಕಿನ ತಿಮ್ಮರಾಯಸ್ವಾಮಿ ಬೆಟ್ಟ(ಅವತಿ) ಹಾಗೂ ಹೊಸಕೋಟೆ ತಾಲ್ಲೂಕಿನ ಶ್ರೀ ಕಾಳಬೈರವ ದೇವಸ್ಥಾನ ಜಡಿಗೇನಹಳ್ಳಿ, ಅನುಗೊಂಡನಹಳ್ಳಿಯ ಮದ್ದೂರಮ್ಮ ದೇವಸ್ಥಾನದ ಮುಖ್ಯಸ್ಥರಿಗೆ ಸಾಮೂಹಿಕ ವಿವಾಹಗಳಲ್ಲಿ ಹಾಗೂ ಕಲ್ಯಾಣ ಮಂಟಪಗಳಲ್ಲಿ ಯಾವುದೇ ಬಾಲ್ಯವಿವಾಹಗಳಿಗೆ ಅವಕಾಶ ಮಾಡಿಕೊಡಬಾರದೆಂದು ಬಾಲ್ಯವಿವಾಹ ಕಾಯ್ದೆಯ ಕುರಿತು ಅವರಿಗೆ ತಿಳಿಸಿ, ಅರಿವು ಮೂಡಿಸಬೇಕು.

ಎಲ್ಲಾ ವೃತ್ತದ ಮೇಲ್ವಿಚಾರಿಕಿಯವರಿಗೆ, ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ, ಆಯಾ ಗ್ರಾಮಗಳಲ್ಲಿ ಬಾಲ್ಯವಿವಾಹ  ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: precautionary, action, prevent, child marriage.