ಮೈಸೂರು,ಆಗಸ್ಟ್,14,2025 (www.justkannada.in): ಮೈಸೂರಿನ ಹೆಬ್ಬಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 16 ಕೆಜಿ ಬೆಳ್ಳಿ ಕಳುವು ಪ್ರಕರಣದಲ್ಲಿ 7 ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನೀಡಿದರು. ಹೆಬ್ಬಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ಕಟ್ಟಿಹಾಕಿ ದರೋಡೆಕೋರರು 16 ಕೆಜಿ ಬೆಳ್ಳಿಯನ್ನ ಕಳ್ಳತನ ಮಾಡಿದ್ದರು. ಬೆಳ್ಳಿ ಪದಾರ್ಥ ಕಳೆದುಕೊಂಡಿದ್ದ ಮಾಲೀಕರ ಬಳಿ ವಾಹನ ಚಾಲಕನಾಗಿದ್ದ ಗುಜರಾತ್ ಮೂಲದ ವ್ಯಕ್ತಿಯ ನೆರವಿನೊಂದಿಗೆ ದರೋಡೆಕೋರರು ಬೆಳ್ಳಿಯ ಪದಾರ್ಥ ದೋಚಿಕೊಂಡು ಪರಾರಿಯಾಗಿದ್ದರು.
ಸಾಲದ ಸುಳಿಗೆ ಸಿಲುಕಿದ್ದ ಡ್ರೈವರ್ ಗುಜರಾತ್ ನ ನಟೋರಿಯಸ್ ಕ್ರಿಮಿನಲ್ ನನ್ನು ಸಂಪರ್ಕಿಸಿರುವ ಸಂಗತಿ ಇದೀಗ ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿಯನ್ನು ಸೆರೆ ಹಿಡಿದ ಬಳಿಕ ಡ್ರೈವರ್ ಕೂಡ ಕೈಜೋಡಿಸಿರುವ ಸಂಗತಿ ಬಯಲಾಗಿದೆ.
ಈ ಮಧ್ಯೆ ವೈಜ್ಞಾನಿಕ ಮಾದರಿಯಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ನಟೋರಿಯಸ್ ಕ್ರಿಮಿನಲ್ ಗುಜರಾತ್ ರಾಜ್ಯದ ಬನಸ್ಕಾಂತ ಜಿಲ್ಲೆಯ ದಿಶಾ ಗ್ರಾಮದಲ್ಲಿ ಅಡಗಿದ್ದುದನ್ನು ಪತ್ತೆ ಹಚ್ಚಿದ ಮೈಸೂರು ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು 7 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವ ಮತ್ತೋರ್ವ ಆರೋಪಿಯನ್ನು ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.
Key words: 16 kg silver, theft case, Mysore police, arrest, 7 accused