Wednesday, September 9, 2026

BDA Apartments

Home Front Page ಸಚಿವರ ಆಶಯದಂತೆ ಶುರುವಾಯ್ತು ರೇಷ್ಮೆ ಮಾರುಕಟ್ಟೆಯಲ್ಲಿ ಆನ್ ಲೈನ್ ವ್ಯವಹಾರ…

ಸಚಿವರ ಆಶಯದಂತೆ ಶುರುವಾಯ್ತು ರೇಷ್ಮೆ ಮಾರುಕಟ್ಟೆಯಲ್ಲಿ ಆನ್ ಲೈನ್ ವ್ಯವಹಾರ…

ಬೆಂಗಳೂರು,ಜನವರಿ,21,2021(www.justkannada.in):  ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಆದರೆ ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಮಾತ್ರ ನಿರಂತರ ಅನ್ಯಾಯವಾಗುತ್ತಲೇ ಇದೆ. ಈ ಕಾರಣದಿಂದಲೇ ರೇಷ್ಮೆ ಮಾರುಕಟ್ಟೆಯಲ್ಲಿ ಹರಾಜು ಮತ್ತು ಮಾರಾಟ ವ್ಯವಸ್ಥೆಯಲ್ಲಿ ಇ ಹಣ ಪಾವತಿ ತಂದು ಪಾರದರ್ಶಕ ವಹಿವಾಟು ನಡೆಸಲು ಅನುಕೂಲ ಮಾಡಿಕೊಡುವ ಬಗ್ಗೆ ಬಜೆಟ್ ನಲ್ಲಿಯೇ ಸರ್ಕಾರ ಘೋಷಣೆ ಮಾಡಲಾಗಿತ್ತು.

ಅಂತೆಯೇ ಈಗ  ಇ ಟೆಂಡರ್ ಪದ್ದತಿ ಜಾರಿಗೆ ತರಲಾಗಿದ್ದು, ಹಲವು ದಶಕಗಳಿಂದ ಸಂಕಷ್ಟ ಅನುಭವಿಸುತ್ತಿದ್ದ ರೈತರು ಈಗ ನೆಮ್ಮದಿಯ ನಿಟ್ಟುಸಿರು  ಬಿಟ್ಟಿದ್ದಾರೆ. ನಗದು ವ್ಯವಹಾರ ಇದ್ದ ಕಾರಣ ರೈತರಿಗೆ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಅದೆಷ್ಟೋ ರೈತರು ಮಾರುಕಟ್ಟೆಯಲ್ಲಿ ವ್ಯವಹಾರ ಮುಗಿಸಿ, ಹಣ ಪಡೆದು ಹೋಗುವಾಗ ಪಿಕ್ ಪಾಕೆಟ್ ಆಗಿರುವ ಉದಾಹರಣೆಯೂ ಸಾಕಷ್ಟಿತ್ತು. ಕೆಲವು ವೇಳೆ ಮಧ್ಯವರ್ತಿಗಳಿಂದಾಗಿ ರೈತರಿಗೆ ಕಡಿಮೆ ಹಣ ಲಭ್ಯವಾಗುತ್ತಿತ್ತು. ಈ ಎಲ್ಲ ಕಾರಣಗಳಿಂದ ರೈತರು ಹೈರಾಣಾಗಿದ್ದರು. ಸಚಿವ ಡಾ| ನಾರಾಯಣ ಗೌಡ ರೇಷ್ಮೆ ಇಲಾಖೆ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಮಾರುಕಟ್ಟೆಯಲ್ಲಿ ನಗದು ವ್ಯವಹಾರಕ್ಕೆ ಬ್ರೇಕ್ ಹಾಕುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಶಿಡ್ಳಘಟ್ಟ ರೇಷ್ಮೆ ಮಾರುಕಟ್ಟೆಯಲ್ಲಿ ಇ ಟೆಂಡರ್ ಹಾಗೂ ಇ ಹಣ ಪಾವತಿ ಆರಂಭಿಸಲಾಗಿತ್ತು. ಶಿಡ್ಳಘಟ್ಟದಲ್ಲಿ ನಡೆಸಿದ ಪ್ರಯೋಗ ಸಂಪೂರ್ಣ ಯಶಸ್ಸಾಗಿದೆ. ರೈತರು, ರೀಲರುಗಳು ಸುಗಮವಾಗಿ ವ್ಯವಹಾರ ನಡೆಸಿದ್ದಾರೆ. ರಾಜ್ಯದ ಎಲ್ಲ ರೇಷ್ಮೆ ಮಾರುಕಟ್ಟೆಗೂ ಇದನ್ನ ವಿಸ್ತರಿಸಲಾಗಿದೆ.jk

ಜನೆವರಿ 20 ರಿಂದ ಶಿಡ್ಳಘಟ್ಟ ರೇಷ್ಮೆ ಮಾರುಕಟ್ಟೆಯಲ್ಲಿ ನಗದು ರಹಿತ (ಕ್ಯಾಶ್ ಲೆಸ್) ವ್ಯವಹಾರ ಆರಂಭವಾಗಿದೆ. ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ಖರೀದಿ ಇನ್ನು ಮುಂದೆ ನಗದು ರಹಿತವಾಗಿ ನಡೆಯಲಿದೆ. ಗೂಡು ಖರೀದಿಸಿದ ರೀಲರ್ ಗಳು ಮಾರ್ಕೆಟ್ ಆಫೀಸರ್ ಅಕೌಂಟ್ ಗೆ ಹಣ ಜಮ ಮಾಡುತ್ತಾರೆ. ಮಾರ್ಕೇಟ್ ಆಫೀಸರ್ ಅಕೌಂಟ್ ನಿಂದ ರೇಷ್ಮೆ ಬೆಳೆಗಾರರ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಜಮಾ ಆಗಲಿದೆ. ಮೊದಲು ಬಹಿರಂಗವಾಗಿ ರೇಷ್ಮೆ ಗೂಡು ಹರಾಜು ಮಾಡಲಾಗುತ್ತಿತ್ತು. ಈಗ ಮೊಬೈಲ್ ಆಪ್ ಮೂಲಕ ಹರಾಜು ಪ್ರಕ್ರಿಯೆ ನಡೆಯಲಿದೆ. ಜನೆವರಿ 4 ರಂದು ರೇಷ್ಮೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದ ಸಚಿವರು, ರೇಷ್ಮೆ ಬೆಳೆಗಾರರು ಮತ್ತು ರೀಲರುಗಳು ಇ ಹಣ ಪಾವತಿಗೆ ಆಸಕ್ತಿ ಹೊಂದಿದ್ದಾರೆ. ಆದರೂ ಮಾರುಕಟ್ಟೆಯಲ್ಲಿ ಇ ಹಣ ಪಾವತಿ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಅಧಿಕಾರಿಗಳಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ 15 ದಿನಗಳ ಒಳಗಾಗಿ ಪ್ರಕ್ರಿಯೆ ಆರಂಭವಾಗಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಸಚಿವರ ಆದೇಶದ ಮೇರೆಗೆ ಅಧಿಕಾರಿಗಳು ಪ್ರತಿಯೊಂದು ರೇಷ್ಮೆ ಮಾರುಕಟ್ಟೆಗೆ ಭೇಟಿ ನೀಡಿ ಪರೀಶಿಲಿಸಿ, ಎಲ್ಲೆಡೆ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ನಗದು ವ್ಯವಹಾರಕ್ಕೆ ಸಂಪೂರ್ಣ ಬ್ರೇಕ್ ಹಾಕಿ ಟೆಂಡರ್ ಹಾಗೂ ಖರೀದಿಗೆ ಇ ಹಣ ಪಾವತಿ ವ್ಯವಸ್ಥೆ ಕಲ್ಪಿಸಿದ್ದಾರೆ.

ಶಿಡ್ಳಘಟ್ಟ ಮಾರುಕಟ್ಟೆಯಲ್ಲಿ ಆನ್ಲೈನ್ ವ್ಯವಹಾರ ಯಶಸ್ಸಾದ ಬಳಿಕ ಈಗ ಎಲ್ಲ ಮಾರುಕಟ್ಟೆಗೆ ಇ ಬ್ಯಾಂಕಿಂಗ್ ವ್ಯವಸ್ಥೆಯನ್ನ ವಿಸ್ತರಿಸಲಾಗಿದೆ. ಈ ಬಗ್ಗೆ ರೈತರಿಗೂ ಸಂಪೂರ್ಣ ಮಾಹಿತಿ ಒದಗಿಸುವ ಕಾರಣಕ್ಕೆ ಪ್ರತಿ ಮಾರುಕಟ್ಟೆಯಲ್ಲಿ ಕರಪತ್ರಗಳು, ಬ್ಯಾನರ್ ಗಳನ್ನ ಅಳವಡಿಸಲಾಗಿದೆ.online-business-silk-market-began-minister-wanted

ಸುಮಾರು 1 ಲಕ್ಷದ 31 ಸಾವಿರ ರೇಷ್ಮೆ ಬೆಳೆಗಾರರು ಹಾಗೂ 7 ಸಾವಿರ ರೀಲರುಗಳು ರೇಷ್ಮೆ ಉದ್ಯಮದಲ್ಲಿ ತೊಡಗಿದ್ದಾರೆ. ಇಲ್ಲಿವರೆಗೆ ನಗದು ವ್ಯವಹಾರ ನಡೆಸಿದ್ದ ರೈತರು ಮತ್ತು ರೀಲರುಗಳು ಇನ್ನು ಮುಂದೆ ಇ ಹಣ ಪಾವತಿ ಮೂಲಕವೆ ವ್ಯವಹಾರ ನಡೆಸಲಿದ್ದಾರೆ. ಇ ಹಣ ಪಾವತಿ ಆರಂಭಿಸಿ ಎಲ್ಲ ಮಾರುಕಟ್ಟೆಯಲ್ಲಿ ನಗದು ವ್ಯವಹಾರ ಸಂಪೂರ್ಣ ನಿಲ್ಲಿಸಲು ತೀರ್ಮಾನಿಸಲಾಗಿದೆ. ರೀಲರುಗಳು ನಗದು ಠೇವಣಿ ಇಡಬೇಕಾಗಿಲ್ಲ. ಕಂಪ್ಯೂಟರ್ ನಲ್ಲಿ ಎಲ್ಲ ವ್ಯವಹಾರಗಳ ಮಾಹಿತಿಯನ್ನ ಅಪ್ಲೋಡ್ ಮಾಡಲಾಗುತ್ತದೆ. ವ್ಯವಹಾರ ಪ್ರಕ್ರಿಯೆ ಕೂಡ ವೇಗವಾಗಿ ಆಗಲಿದೆ. ಪ್ರತಿದಿನ ಸರಿಸುಮಾರು 150 ಮೆಟ್ರಿಕ್ ಟನ್ ರೇಷ್ಮೆ ಗೂಡಿನ ವಹಿವಾಟು ಆಗುತ್ತಿದೆ. ವಾರ್ಷಿಕವಾಗಿ ಸುಮಾರು 3500 ಕೋಟಿ ರೂ. ವಹಿವಾಟು ನಡೆಯುತ್ತಿದೆ. ಇನ್ನು ಮುಂದೆ ರಾಜ್ಯದಲ್ಲಿರುವ ಎಲ್ಲ 55 ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ನಗದು ವ್ಯವಹಾರ ಸ್ಥಗಿತವಾಗಿ ಆನ್ಲೈನ್ ವ್ಯವಹಾರ ನಡೆಯಲಿದೆ. ಯಾವುದೇ ಕಾರಣಕ್ಕು ಆನ್ಲೈನ್ ವ್ಯವಹಾರ ಸ್ಥಗಿತಗೊಂಡು ನಗದು ವ್ಯವಹಾರ ಆರಂಭವಾದಲ್ಲಿ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆ. ಅಲ್ಲದೆ ಪ್ರತಿ ಮಾರುಕಟ್ಟೆಯಲ್ಲೂ  ಸರಿಯಾದ ವ್ಯವಹಾರ ನಡೆಯುತ್ತಿದೆ ಎಂಬುದನ್ನ ಖಾತ್ರಿಪಡಿಸಿಕೊಳ್ಳಲು ಸಡನ್ ವಿಸಿಟ್ ಮಾಡಲು ಜಂಟಿ ನಿರ್ದೇಶಕರ ನೇತೃತ್ವದ ವಿಚಕ್ಷಣಾ ದಳ  ರಚಿಸಲಾಗಿದೆ. ರೈತರು, ರೀಲರುಗಳ ದೂರು ಇದ್ಧಲ್ಲಿ ವಿಚಕ್ಷಣಾ ದಳ ಟೀಂ ಕ್ರಮ ತೆಗೆದಕೊಳ್ಳಲಿದೆ.

Key words: Online- business – silk market -began – minister -wanted