ಲಂಚ ಬೇಡಿಕೆ ಪ್ರಕರಣ: ಮಾಜಿ ಡಿಸಿ ಜೆ.ಮಂಜುನಾಥ್ ಜಾಮೀನು ಅರ್ಜಿ ವಜಾ.

ಬೆಂಗಳೂರು,ಆಗಸ್ಟ್,3,2022(www.justkannada.in):  ಬೆಂಗಳೂರು  ನಗರ ಜಿಲ್ಲಾಧಿಕಾರಿಯಾಗಿದ್ದ ವೇಳೆ ಲಂಚ‌ ಬೇಡಿಕೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಜೆ.ಮಂಜುನಾಥ್  ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಪ್ರಕರಣ ಸಂಬಂಧ ಜೆ.ಮಂಜುನಾಥ್  ಅವರು ಜಾಮೀನು ಕೋರಿ ಸಲ್ಲಿಸಿದ್ಧ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೆ.ನಟರಾಜನ್​ ರವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನ ವಜಾಗೊಳಿಸಿ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ತನಿಖೆ ಇನ್ನೂ ಮುಕ್ತಾಯವಾಗಿಲ್ಲ. ಎಫ್‌ಎಸ್‌ಎಲ್​ನಿಂದ ವರದಿ ಇನ್ನೂ ಬರಬೇಕಿದೆ. ಜಿಲ್ಲಾಧಿಕಾರಿ ಹುದ್ದೆ ದುರ್ಬಳಕೆಯ ಗಂಭೀರ ಆರೋಪವಿದೆ ಎಂದು ಎಸಿಬಿ ಪರ ವಕೀಲ ಪಿ.ಎನ್.ಮನಮೋಹನ್ ವಾದಿಸಿದ್ದಾರೆ.

ಬೆಂಗಳೂರು ನಗರ ಡಿಸಿ ಕಚೇರಿ ಮೇಲೆ ಎಸಿಬಿ ದಾಳಿ ಪ್ರಕರಣ ಸಂಬಂಧ ಭ್ರಷ್ಟಾಚಾರ ಆರೋಪದಲ್ಲಿ IAS ಅಧಿಕಾರಿ ಜೆ.ಮಂಜುನಾಥ್‌ ಅವರನ್ನು ಯಶವಂತಪುರದಲ್ಲಿರುವ ಅವರ ನಿವಾಸದಲ್ಲಿ ಜುಲೈ 4 ರಂದು ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದಾಗ ಭ್ರಷ್ಟಾಚಾರ ಆರೋಪದ ಬಳಿಕ ಮಂಜುನಾಥ್‌ ರನ್ನು ಸರ್ಕಾರ ವರ್ಗಾವಣೆಗೊಳಿಸಿತ್ತು. ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಂ ಡೈರೆಕ್ಟರ್ ಆಗಿ ಮಂಜುನಾಥ್‌ ವರ್ಗಾವಣೆಗೊಂಡಿದ್ದರು.

Key words: Bribe- demand- case-J. Manjunath- bail -application -dismissed.