ನವೀಕೃತ ಅಶೋಕಪುರಂ ರೈಲ್ವೆ ಸ್ಟೇಷನ್ ಯಾರ್ಡ್ ಲೋಕಾರ್ಪಣೆ ಮಾಡಿದ ಸಂಸದ ಪ್ರತಾಪ್ ಸಿಂಹ.

ಮೈಸೂರು,ಮಾರ್ಚ್,4,2024(www.justkannada.in):  ನವೀಕರಿಸಿದ ಮೈಸೂರಿನ ಅಶೋಕಪುರಂ ರೈಲ್ವೆ ಸ್ಟೇಷನ್ ಯಾರ್ಡ್ ಅನ್ನು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಲೋಕಾರ್ಪಣೆ ಮಾಡಿದರು.

ಅಶೋಕಪುರಂ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನವೀಕೃತ ರೈಲ್ವೆ ಸ್ಟೇಷನ್ ಯಾರ್ಡ್ ಅನ್ನು ಸಂಸದ ಪ್ರತಾಪ್ ಸಿಂಹ ಲೋಕಾರ್ಪಣೆ ಮಾಡಿದರು.  ಸ್ಥಳೀಯ ಶಾಸಕ ಶ್ರೀವತ್ಸ, ಮಾಜಿ ಮೇಯರ್ ಶಿವಕುಮಾರ್ ಹಾಗೂ  ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತಿದ್ದರು.

ಒಟ್ಟು 37.5 ಕೋಟಿ ವೆಚ್ಚದಲ್ಲಿ ನವೀಕರಣ ಕಾರ್ಯ ನಡೆದಿದ್ದು, ಈ ಪೈಕಿ 22 ಕೋಟಿ ಸಂಚಾರ ಸೌಲಭ್ಯಗಳ ಉನ್ನತೀಕರಣಕ್ಕೆ ವಿನಿಯೋಗ ಮಾಡಲಾಗಿದ್ದರೇ  10.5 ಕೋಟಿ ರೂ. ಪ್ರಯಾಣಿಕರ ಸೌಕರ್ಯ ವೃದ್ದಿಗೆ ವಿನಿಯೋಗಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, 4 ಮೆಮು ರೈಲು,1 ಮಾಲ್ಗುಡಿ ರೈಲು, 1 ಕಾವೇರಿ ಎಕ್ಸ್ ಪ್ರೆಸ್ ರೈಲು ಸೇರಿದಂತೆ ಹಲವು ಟ್ರೈನ್ ಗಳು  ಅಶೋಕ್ ಪುರಂ ರೈಲ್ವೇ ನಿಲ್ದಾಣದಿಂದಲೇ ಹೊರಡುವಂತೆ ಕ್ರಮ ವಹಿಸಲಾಗುತ್ತದೆ. ಕಡಕೊಳ ರೈಲ್ವೆ ನಿಲ್ದಾಣದ ಅಭಿವೃದ್ಧಿಯನ್ನು ಮಾಡಲು ಕ್ರಮ ವಹಿಸಲಾಗುತ್ತದೆ. ನಾನು ರಾಜಕೀಯಕ್ಕೆ ಬಂದು ಯಾರೋ ಗುತ್ತಿಗೆದಾರನ ಬಳಿ ಕಮಿಷನ್ ತೆಗೆದುಕೊಳ್ಳಲಿಕ್ಕೆ ಬಂದಿಲ್ಲ. ಯಾವ ರಾಜಕೀಯ ಹಿನ್ನೆಲೆ ಇಲ್ಲದೆ ಇದ್ದರೂ ಜನ‌ ನನಗೆ ಮತ್ತು ಶ್ರೀವತ್ಸ ಅವರಿಗೆ ಜನ‌ ಆಶೀರ್ವಾದ ಮಾಡಿದ್ದಾರೆ. ಅದರಂತೆ ನಾನು ಜನ‌ಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಮುಂದಿನ‌ ದಿನಗಳಲ್ಲಿ ಮತ್ತಷ್ಟು ಕೆಲಸ ಮಾಡಲು ನನಗೆ ಮತ್ತೊಂದು ಬಾರಿ ಆಶೀರ್ವಾದ ಮಾಡಿ ಎಂದು ಮತಯಾಚನೆ ಮಾಡಿದರು.

ನಾನು ಚುನಾವಣೆಗೆ ಸ್ಪರ್ಧಿಸಲು ಬಂದಾಗ ಮೈಸೂರು ಕೊಡಗಿನ ಜನರು ನನ್ನ ಕೈಹಿಡಿದರು. ಹೊಸಬನಾಗಿದ್ದ ನನ್ನನ್ನು ಜನರು ಗೆಲ್ಲಿಸಿದರು‌. ಇದರಿಂದ ನಾನು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಯಿತು. ನಾನು ಜನರ ಸೇವೆ, ಅಭಿವೃದ್ಧಿ ಮಾಡಲು ರಾಜಕೀಯಕ್ಕೆ ಬಂದೆ. ನಾನೇನು ಗುತ್ತಿಗೆದಾರರ ಬಳಿ ಕಾಮಗಾರಿಗಳ ಕಮೀಷನ್ ಪಡೆಯಲು ಬರಲಿಲ್ಲ. ನಾನು ಯಾವುದೇ ಹೋರಾಟ ಮಾಡಿದ್ದರೂ ಜನರಿಗಾಗಿ ಮಾಡಿದ್ದೇನೆ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಮುಂದಿಟ್ಟುಕೊಂಡು ಮತ್ತೊಮ್ಮೆ ಜನಾದೇಶ ಪಡೆಯಲು ಮುಂದಾಗಿದ್ದೇನೆ‌ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

Key words: Newly- renovated- Ashokapuram railway station – inaugurated -MP Pratap Simha