ಮೈಸೂರಿನಲ್ಲಿ ರಾತ್ರಿ 1ರವರೆಗೆ ಹೊಸ ವರ್ಷಾಚರಣೆಗೆ ಅವಕಾಶ: ಬಿಗಿ ಭದ್ರತೆ : ಮಾಹಿತಿ ಹಂಚಿಕೊಂಡ ಪೊಲೀಸ್ ಆಯುಕ್ತ ರಮೇಶ್ ಬಾನೋತ್

ಮೈಸೂರು,ಡಿಸೆಂಬರ್,28,2023(www.justkannada.in): ಮೈಸೂರಿನಲ್ಲಿ ರಾತ್ರಿ 1ರವರೆಗೆ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ  ಅಗತ್ಯ ಪೊಲೀಸ್ ಭದ್ರತೆ  ವ್ಯವಸ್ಥೆ ಮಾಡಲಾಗುತ್ತದೆ ಎಂದು  ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್  ತಿಳಿಸಿದರು.

ಹೊಸ ವರ್ಷಾಚರಣೆ ಹಿನ್ನಲೆ, ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಮೈಸೂರಿನಲ್ಲಿ ರಾತ್ರಿ 1 ಗಂಟೆವರೆಗೆ ಹೊಸ ವರ್ಷಾಚರಣೆಗೆ ಅವಕಾಶವಿರಲಿದ್ದು, ಸರ್ಕಾರ ನಿಗದಿಪಡಿಸಿರುವ ಸಮಯ ಪಾಲಿಸಬೇಕು. ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.  ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೋಂಸ್ಟೇ ಸರ್ವಿಸ್ ಅಪಾರ್ಟ್ ಮೆಂಟ್ , ಅಪಾರ್ಟ್ ಮೆಂಟ್ ಅಸೋಸಿಯೇಷನ್, ಮಾಲ್ಸ್, ಸಂಘ ಸಂಸ್ಥೆಗಳು ರಾತ್ರಿ 1 ಗಂಟೆಗೆ ಕಾರ್ಯಕ್ರಮ ಮುಗಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

ನ್ಯೂ ಇಯರ್ ನೆಪದಲ್ಲಿ ಅಸಭ್ಯ ವರ್ತನೆ ಘಟನೆ  ತಡೆಯಲು 36 ವಿಶೇಷ ಕಾರ್ಯಪಡೆ ತಂಡ ರಚನೆ ಮಾಡಲಾಗಿದೆ.  ಮಹಿಳೆಯರ ರಕ್ಷಣೆಗಾಗಿ 8 ಸುರಕ್ಷತಾ ಪಿಂಕ್ ಗರುಡ (ಚಾಮುಂಡಿ ಪಡೆ) ರಚನೆ ಮಾಡಲಾಗಿದ್ದು, ನಗರದ ಪ್ರಮುಖ ಸ್ಥಳದಲ್ಲಿ ಶ್ವಾನದಳ ಮತ್ತು ವಿಧ್ವಂಸಕ ಕೃತ್ಯ ತಡೆಗಾಗಿ 4 ತಂಡ. ಕಾರ್ಯನಿರ್ವಹಿಸಲಿದೆ.

ಮೈಸೂರು ನಗರದಲ್ಲಿರುವ 59 ಸಿಸಿ ಟಿವಿ ಜೊತೆಗೆ 275 ಸಿಸಿ ಟಿವಿ ಅಳವಡಿಕೆ ಮಾಡಲಾಗುತ್ತದೆ. ಪೊಲೀಸ್ ಕಂಟ್ರೋಲ್ ರೂಂ ಮೂಲಕ ಕಣ್ಗಾವಲು ಇರಿಸಲಾಗುತ್ತಿದೆ. ವೀಲಿಂಗ್, ಸ್ಪೀಡ್, ಕರ್ಕಶ ಶಬ್ದ, ಕುಡಿದು ವಾಹನ ಚಾಲನೆ ತಡೆಗಾಗಿ ಸಂಚಾರ ಪೊಲೀಸರು, ತಜ್ಞರನ್ನೊಳಗೊಂಡ ಕ್ಷಿಪ್ರ ಪಡೆ ರಚನೆ ಮಾಡಲಾಗಿದೆ . ರಿಂಗ್ ರೋಡ್‌ನಲ್ಲಿ 8 ಹೈವೇ ಪೆಟ್ರೋಲ್ ವಾಹನ , ಒಟ್ಟು 18 ಗರುಡ ವಾಹನಗಳ ಗಸ್ತು ತಿರುಗುತ್ತಿರುತ್ತವೆ ಎಂದು ಮಾಹಿತಿ ನೀಡಿದರು.

ನಗರದ ಹೊರವಲಯದಲ್ಲಿ 12 ಕಡೆ ಚೆಕ್ ಪೊಸ್ಟ್ ಹಾಕಲಾಗಿದೆ. ನಗರದ ಒಳಭಾಗದಲ್ಲಿ 18 ಕಡೆ ಚೆಕ್ ಪೊಸ್ಟ್ ನಿರ್ಮಿಸಿ ಕಿಡಿಗೇಡಿಗಳ ಮೇಲೆ ನಿಗಾ ಇರಿಸಲಾಗಿದೆ. ಇನ್ನು ಹೊಸ ವರ್ಷ ಆಚರಣೆಯ ಕಾರ್ಯಕ್ರಮ ಆಯೋಜನೆಗಾಗಿ ನಗರ ಪೊಲೀಸ್ ಆಯಕ್ತರ ಕಚೇರಿಯಲ್ಲಿ ಅನುಮತಿ  ಪಡೆಯುವುದು ಕಡ್ಡಾಯವಾಗಿದೆ. ಧ್ವನಿವರ್ಧಕ ಅಳವಡಿಸುವುದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಬೇಕು. ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ಅಶ್ಲೀಲ, ಅರಬೆತ್ತಲೆ ,ಮಾದಕ ವಸ್ತುಗಳ ಸೇವನೆ ಜೂಜಾಟವನ್ನ ನಿಷೇಧಿಸಲಾಗಿದೆ  ಎಂದು ರಮೇಶ್ ಬಾನೋತ್ ತಿಳಿಸಿದರು.

ನ್ಯೂ ಇಯರ್‌ ಬಂದೋಬಸ್ತ್‌ ಗಾಗಿ ಡಿಸಿಪಿ 3, ಎಸಿಪಿ 12, ಪಿಐ 30, ಎಎಸ್ಪಿ 70, ಹೆಚ್‌ಸಿ/ಪಿಸಿ 550, ಸಿಬ್ಬಂದಿ 80, ಸಿಎಆರ್ 12 ತುಕಡಿ, ಕೆಎಸ್ ಆರ್ ಪಿ 4 ತಂಡ, ಕಮಾಂಡೋ ಪಡೆ 4, ಶ್ವಾನದಳ 4 ತಂಡ, ಸಶಸ್ತ್ರ ಪಡೆಗಳನ್ನ ನಿಯೋಜನೆ ಮಾಡಲಾಗಿದೆ ಎಂದು ಭದ್ರತೆ ಬಗ್ಗೆ ಮಾಹಿತಿ ನೀಡಿದರು.

ಚಾಮುಂಡಿ ಬೆಟ್ಟಕ್ಕೆ  ಡಿಸೆಂಬರ್ 31ರ ಸಂಜೆ 7ರವರೆಗೆ ಮಾತ್ರ ಎಂಟ್ರಿಗೆ ಅವಕಾಶ

ಹೊಸ ವರ್ಷಾಚರಣೆ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಡಿಸೆಂಬರ್ 31ರ ಸಂಜೆ 7ರವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ರಾತ್ರಿ 9ಕ್ಕೆ ತಾವರೆಕಟ್ಟೆ ಗೇಟ್ ಬಂದ್ ಆಗಲಿದ್ದು, ಚಾಮುಂಡಿ ಬೆಟ್ಟದಲ್ಲಿ ವಾಸಿಸುವ ಜನರಿಗೆ ಇದು ಅನ್ವಯಿಸುವುದಿಲ್ಲ. ಕಾನೂನು ಪಾಲಿಸಿ ಹೊಸ ವರ್ಷ  ಆಚರಿಸಿ,  ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಶುಭಾಶಯ ತಿಳಿಸಿದರು.

Key words: New Year- celebration- Mysore-Commissioner of Police -Ramesh Banoth