ಖಾತೆ ಮಾಡಿಸಿಕೊದಲು ರೈತರಿಂದ ಲಂಚಕ್ಕೆ ಬೇಡಿಕೆ: ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಮೈಸೂರು:ಮೇ-5:(www.justkannada.in) ಜಮೀನು ಖಾತೆ ಮಾಡಿ ಕೊಡಲು ರೈತರಿಂದ ಲಂಚಕ್ಕೆ ಬೇಡಿಕೆಯಿಡುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಮಹಿಳೆ ದೂರಿನ ಆಧಾರದ ಮೇಲೆ ಎಸಿಬಿ ತಂಡ ನಂಜನಗೂಡಿನ ದೇವಿರಮ್ಮನಹಳ್ಳಿ ಬಡಾವಣೆಯಲ್ಲಿ ಕಾರ್ಯಚರಣೆ ನಡೆಸಿ ಗ್ರಾಮ ಲೆಕ್ಕಾಧಿಕಾರಿಯನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ

ಮಣಿಕಂಠ ಹೊಲ್ದೂರು ಮಠ ಬಂಧಿತ ಗ್ರಾಮ ಲೆಕ್ಕಾಧಿಕಾರಿ. 20 ಗುಂಟೆ ಖುಷ್ಕಿ ಜಮೀನು ಖಾತೆ ಮಾಡಿಕೊಡಲು ಜಮೀನು ಮಾಲೀಕರ ಬಳಿಯೇ 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ನೊಂದ ಮಹಿಳೆ ಎಸಿಬಿ ಡಿವೈ ಎಸ್ ಪಿ ಅವರಿಗೆ ದೂರು ನೀಡಿದ್ದರು. ಪೊಲೀಸರ ಸೂಚನೆ ಮೇರೆಗೆ ಮಣಿಕಂಠ ಅವರಿಗೆ ಹತ್ತು ಸಾವಿರ ಹಣ ನೀಡುವುದಾಗಿ ಹೇಳಿ ಜಮೀನು ಮಾಲೀಕರ ಮನೆಗೆ ಕರೆಸಿಕೊಳ್ಳಲಾಗಿತ್ತು.

ಹಣ ಪಡೆಯುತ್ತಿದ್ದಾಗ ಮಣಿಕಂಠ ಹಾಗೂ ಆತನ ಸಹಾಯಕನನ್ನು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಎಸಿಬಿ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Mysore,Nanjanagudu,Village accountant,ACB,Arrest