ಕೊಟ್ಟ ಭರವಸೆ ಮೊದಲ ಸಂಪುಟ ಸಭೆಯಲ್ಲೇ ಜಾರಿ :  ಸಿಎಂ ಆಯ್ಕೆ ಬಗ್ಗೆ ಸಿದ್ಧರಾಮಯ್ಯ ಪ್ರತಿಕ್ರಿಯೆ ಏನು..?

ಮೈಸೂರು,ಮೇ,13,2023(www.justkannada.in):  ನಮ್ಮ ಸರ್ಕಾರ ರಚನೆ ಆಗುತ್ತಿದೆ.  ನಾವು ನೀಡಿದ್ದ ಭರವಸೆಗಳ ಈಡೇರಿಸಲು ತೀರ್ಮಾನ ತೆಗೆದುಕೊಳ್ಳುತ್ತೇವೆ. ನಾವು ಕೊಟ್ಟ ಭರವಸೆಯನ್ನ ಮೊದಲ ಸಚಿವ ಸಂಪುಟ  ಸಭೆಯಲ್ಲಿ ಈಡೇರಿಸುತ್ತೇವೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದರು.

ರಾಜ್ಯ ವಿಧಾನಸಭಾ ಚುನಾವಣೆ ವರುಣಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಿದ್ಧರಾಮಯ್ಯ, ನನ್ನ ಗೆಲುವಿಗೆ ವರುಣ ಕ್ಷೇತ್ರದ ಜನ ಪ್ರಮುಖ ಕಾರಣ. ಕ್ಷೇತ್ರದಲ್ಲಿ ಯತೀಂದ್ರ ಮಾಡಿರುವ ಅಭಿವೃದ್ಧಿ ಕೆಲಸ ಮತ್ತು ಅವರು ಕ್ಷೇತ್ರ ತ್ಯಾಗ ಮಾಡಿ ನನಗೆ ಬಿಟ್ಟುಕೊಟ್ಟುರು. ಕ್ಷೇತ್ರದಾದ್ಯಂತ ನನ್ನ ಗೆಲುವಿಗಾಗಿ ಬಹಳ ಶ್ರಮಿಸಿದ್ದಾರೆ. ಅವರಿಗೆ ಮತ್ತು ಕ್ಷೇತ್ರದ ಜನರಿಗೆ ಧನ್ಯವಾದಗಳನ್ನ ಸಲ್ಲಿಸುತ್ತೇನೆ. ಅದರಲ್ಲೂ ಪಕ್ಷದ ಕಾರ್ಯಕರ್ತರು ಹಗಲಿರುಳು ದುಡಿದಿದ್ದಾರೆ ಅವರೆಲ್ಲರ ಶ್ರಮದ ಫಲವಾಗಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದರು.

ಕಾಂಗ್ರೆಸ್ ಪಕ್ಷದ ಪರವಾಗಿ ಮತ ಹಾಕಿದ ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತಿದ್ದರು. ನಾನು ಮಾನವತವಾದಿ. ನಾನು ಯಾವುದೇ ಜಾತಿ ವಿರೋಧಿ ಅಲ್ಲ. ಲಿಂಗಾಯತ ವಿರೋಧಿ ಅಂತಾ ನನ್ನ ಬಿಂಬಿಸಲು ಹೊರಟಿದ್ರು. ಆದರೆ ಬಿಜೆಪಿ ಆಟ ಚುನಾವಣೆಯಲ್ಲಿ ನಡೆಯಲಿಲ್ಲ. ಮೋದಿ, ಅಮಿತ್ ಶಾ , ನಡ್ಡಾ ನೂರು ಬಾರಿ ಬಂದರೂ ಏನೂ ನಡೆಯಲ್ಲ ಅಂತಾ ನಾನು ಹೇಳಿದೆ ಎಂದು ಸಿದ್ಧರಾಮಯ್ಯ ಬಿಜೆಪಿಗೆ ಟಾಂಗ್ ನೀಡಿದರು.

ಇನ್ನು ಸಿಎಂ ಆಯ್ಕೆ ಬಗ್ಗೆ ಹೈ ಕಮಾಂಡ್ ತಿರ್ಮಾನ ಮಾಡ್ತಾರೆ ಎಂದ ಸಿದ್ಧರಾಮಯ್ಯ,  ನೀವು ಸಿಎಂ ಅಭ್ಯರ್ಥಿನಾ ಎಂದು ಪ್ರಶ್ನಿಸಿದ್ದಕ್ಕೆ ಮಾತನಾಡದೆ ಹೊರಟರು.

Key words: mysore-varuna-congress-Former CM- siddaramaiah