ಜೀವ ಕೊಟ್ಟು ನಿಮಗಾಗಿ ಹೋರಾಟ ಮಾಡುತ್ತೇನೆ: ನೀವು ನನ್ನ ಜೊತೆ ಇರಿ ಸಾಕು- ಕಾರ್ಯಕರ್ತರಿಗೆ ಡಿ.ಕೆ ಶಿವಕುಮಾರ್ ಕರೆ.

ಮೈಸೂರು,ಫೆಬ್ರವರಿ,20,2023(www.justkannada.in):  ಜೀವ ಕೊಟ್ಟು ನಿಮಗಾಗಿ ಹೋರಾಟ ಮಾಡುತ್ತೇನೆ. ನೀವು ನನ್ನ ಜೊತೆ ಇರಿ ಸಾಕು ಎಂದು ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ನೀಡಿದರು.

ಟಿ.ನರಸೀಪುರ ಕ್ಷೇತ್ರ ಬನ್ನೂರು ತಾಲೂಕಿನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಕಾಂಗ್ರೆಸ್ ಕಾರ್ಯಕರ್ತರು 11 ಜೆಸಿಬಿಗಳ ಮೂಲಕ ಪುಷ್ಪಾರ್ಚನೆ ಮಾಡಿ ಅದ್ದೂರಿ ಸ್ವಾಗತ ಕೋರಿದರು.

ಸಮಾವೇಶದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ , ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಹುಟ್ಟು ಸಾವಿನ ನಡುವೆ ನಾವು ಏನೂ ಕೆಲಸ ಮಾಡುತ್ತೇವೆ ಎಂಬುದು ಮುಖ್ಯ.  ನಿಮಗಾಗಿ ಜೀವ ಕೊಟ್ಟು ಹೋರಾಟ ಮಾಡುತ್ತೇನೆ. ನೀವು ನನ್ನ ಜೊತೆ ಇರಿ ಎಂದರು. ಈ ವೇಳೆ ಮುಂದಿನ ಸಿಎಂ ಡಿಕೆಶಿಗೆ ಜೈ ಎಂದು ಕಾಂಗ್ರೆಸ್ ಕಾರ್ಯಕರ್ತನೊಬ್ಬ ಘೋಷಣೆ ಕೂಗಿದನು. ಇದೇ ವೇಳೆ  ನನ್ನ ಮುಖ್ಯಮಂತ್ರಿ ಆಮೇಲೆ ಮಾಡುವಿರಂತೆ. ಮೊದಲು ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಆಡಳಿತ ಕಾಲದಲ್ಲಿ ಏನೂ ಕೆಲಸ ಆಗಿದೆ ಮೊದಲು ಹೇಳಿ ಎಂದು  ಡಿಕೆ ಶಿವಕುಮಾರ್  ಪ್ರಶ್ನಿಸಿದರು.

ಸಿದ್ದರಾಮಯ್ಯರ ಬೆಡ್ ರೂಂಗೆ ಹೋಗ್ತಿದ್ದ ಮಂತ್ರಿಯೊಬ್ಬ, ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೂರೇ ಜನ ಸತ್ತಿದ್ದು ಎಂದಿದ್ದ. ಅಧಿಕಾರಿಗಳಿಗೆ ಸಿದ್ದರಾಮಯ್ಯ ಲಾಯರ್ ಭಾಷೆಯಲ್ಲಿ ಕೇಳಿದ್ದಾಗ  33 ಜನ ಸತ್ತರು ಎಂದು ಒಪ್ಪಿಕೊಂಡರು. ಆರೋಗ್ಯ ಸಚಿವ ಡಿ. ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಆಕ್ಸಿಜನ್ ಇಲ್ಲದೆ ಸತ್ತವರ ಮನೆಗೆ ಹೋಗಲಿಲ್ಲ. ಅಭಿಮಾನದಿಂದ ಈಗ ಜೆಸಿಬಿಯಲ್ಲಿ ಹೂ ಎರಚಿದಂತೆ ಆಗ ಸರಕಾರ ಕೋವಿಡ್ ನಲ್ಲಿ ಸತ್ತ ಜನರನ್ನು ಜೆಸಿಬಿ ಮೂಲಕ ಎತ್ತಿ ಬಿಸಾಕಿದರು ಎಂದು  ಕಿಡಿಕಾರಿದರು.

ಸಿದ್ದರಾಮಯ್ಯರಿಗೆ ಇಷ್ಟ ಇತ್ತೋ ನನಗೆ ಇಷ್ಟ ಇತ್ತೋ ಇಲ್ಲವೋ ಆದರೂ ನಾವು ಕುಮಾರಣ್ಣನಿಗೆ ಅಧಿಕಾರ ಕೊಟ್ಟೆವು. ಕುಮಾರಣ್ಣನ ನಾವು ಕೊಟ್ಟ ಅಧಿಕಾರ ಉಳಿಸಿ ಕೊಂಡ್ರಾ? ಇಂದು ಭ್ರಷ್ಟ ಆಡಳಿತದ ಸರಕಾರ ಬರಲು ಯಾರು ಕಾರಣ ಅನ್ನೋದು ಜನರಿಗೆ ಗೊತ್ತಿದೆ. ಎಚ್.ಡಿ. ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನಿ ಮಾಡಿತು.‌ ಕುಮಾರಣ್ಣನಿಗೆ ಕಾಂಗ್ರೆಸ್ ಸಿಎಂ ಮಾಡಿತು. ಅವರಿಬ್ಬರೂ ಅದನ್ನು ಉಳಿಸಿ ಕೊಳ್ಳಲಿಲ್ಲ.  ಈಗ ನನ್ನ ಕೈ ಬಲಪಡಿಸಿ.  ನಿಮ್ಮ ಕೈಮುಗಿದು ಕೇಳುತ್ತೇನೆ‌ ಎಂದು ಡಿಕೆ ಶಿವಕುಮಾರ್ ಭಾವನಾತ್ಮಕವಾಗಿ ಭಾಷಣ ಮಾಡಿದರು.

Key words: mysore-T.Narasipur- DK Shivakumar- -congress- activists.