ಮೈಸೂರು,ಜೂನ್,12,2025 (www.justkannada.in): ಮೈಸೂರಿನ ಕೂರ್ಗಳ್ಳಿಯಲ್ಲಿರುವ ಎನ್ಐಇಐಟಿ (NIEIT) ಸಂಸ್ಥೆ ಖಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಸಿಬ್ಬಂದಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ಈ ಕುರಿತು ಮೈಸೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಎನ್ಐಇಐಟಿ (NIEIT) ಸಂಸ್ಥೆ ಖಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಮೈಸೂರಿನ ಎನ್ಐಇಐಟಿ (NIEIT), ಖಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಾದ ನಾವು ಸಂಸ್ಥೆಯ ವಿವಿಧ ವಿಭಾಗ ಹಾಗೂ ಹುದ್ದೆಗಳಲ್ಲಿ ಕಳೆದ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಎನ್ಐಇ ನಿರ್ವಹಣಾ ಮಂಡಳಿಯು ಕೈಗೊಂಡ ಎನ್ಐಇ ಮತ್ತು ಎನ್ಐಇಐಟಿ ಸಂಸ್ಥೆಗಳ ವಿಲೀನಪ್ರಕ್ರಿಯೆಯನ್ನು ಹಾಗೂ ತತ್ಸಂಬಂಧವಾದ ಬೆಳವಣಿಗೆಗಳನ್ನು ಪ್ರಶ್ನಿಸಿ ಕರ್ನಾಟಕದ ಉಚ್ಚನ್ಯಾಯಾಲಯದಲ್ಲಿ ಕಾನೂನು ಹೋರಾಟದಲ್ಲಿ ತೊಡಗಿದ್ದು. ಈ ಮಧ್ಯೆ ನಮ್ಮ ಶೈಕ್ಷಣಿಕ ಜವಾಬ್ದಾರಿಗಳನ್ನು ಚಾಚೂ ತಪ್ಪದೆ ನಿರ್ವಹಿಸುತ್ತಿದ್ದೇವೆ. ಈ ಕಾನೂನಿನ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಘನನ್ಯಾಯಾಲಯದ ವಿಚಾರಣೆಯು ಇಂದು ನಿಗದಿಯಾಗಿದೆ.
ಈ ಮಧ್ಯೆ ಎಂದಿನಂತೆ ನಾವು ನಮ್ಮ ಸಂಸ್ಥೆಯ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸಲು ಇಂದು ಕೂಡ ಸಂಸ್ಥೆಯ ಆವರಣವನ್ನು ಪ್ರವೇಶಿಸಲು ಉದ್ಯುಕ್ತರಾದಾಗ ಅನಿರೀಕ್ಷಿತವಾಗಿ ನಮ್ಮನ್ನು ಸಂಸ್ಥೆಯ ಆವರಣವನ್ನು ಪ್ರವೇಶಿಸಿದಂತೆ ಕಾನೂನು ಬಾಹಿರವಾಗಿ ನಿರ್ಬಂಧಿಸಲಾಗಿದೆ. ಆದರೆ, ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಅಧಿಕೃತವಾದ ಸಂವಹನ ಅಥವಾ ಸೂಚನೆಗಳಿಲ್ಲದೆ ನಮ್ಮನ್ನು ನಿಷ್ಕಾರುಣ್ಯವಾಗಿ ಹಾಗೂ ವೃತ್ತಿಪರತಾರಹಿತವಾಗಿ ನಡೆಸಿಕೊಳ್ಳಲಾಗಿದೆ. ಇವೆಲ್ಲದರ ಪರಿಣಾಮವಾಗಿ ಸಂಸ್ಥೆಯ ಹಾಗೂ ಅದರ ಉದ್ಯೋಗಿಗಳ ಘನತೆಗೆ ಧಕ್ಕೆಯುಂಟಾಗಿದೆ.
ಆಡಳಿತ ಮಂಡಳಿಯ ಕಾನೂನು ಬಾಹಿರವಾದ ಈ ಕೃತ್ಯಗಳ ವಿರುದ್ಧ ತಾವು ಸೂಕ್ತ ಕ್ರಮವನ್ನು ಕೈಗೊಂಡು ನಮ್ಮ ಶೈಕ್ಷಣಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಪ್ರತಿಭಟನೆಗೆ ಮುಂದಾಗಿರುವ ಎನ್ಐಇಐಟಿ (NIEIT) ಸಂಸ್ಥೆ ಖಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಮನವಿ ಮಾಡಿದ್ದಾರೆ.
ಅಂತೆಯೇ ಆಡಳಿತ ಮಂಡಳಿಯ ಅಮಾನವೀಯ ಧೋರಣೆ ಹಾಗೂ ನಡವಳಿಕೆಗಳನ್ನು ವಿರೋಧಿಸಿ ಖಾಯಂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಶಾಂತಿಯುತವಾದ ಪ್ರತಿಭಟನೆಗೆ ಮುಂದಾಗಿದ್ದಾರೆ.
Key words: Protest, permanent faculty, non-teaching, staff ,Mysore ,NIEIT, Institute