ಮೈಸೂರು: ಆಹಾರ ಮಳಿಗೆಯ ವಸ್ತು ಪ್ರದರ್ಶನ ಉದ್ಘಾಟಿಸಿದ ಆಹಾರ ಸಚಿವ ಕೆಹೆಚ್. ಮುನಿಯಪ್ಪ.

ಮೈಸೂರು, ಅಕ್ಟೋಬರ್,25,2025 (www.justkannada.in):  ದಸರಾ ಪ್ರಯುಕ್ತ ಸ್ಥಾಪಿಸಲಾಗಿರುವ ಆಹಾರ ಮಳಿಗೆಯ ವಸ್ತು ಪ್ರದರ್ಶನವನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ವತಿಯಿಂದ ಆಯೋಜಿಸಿದ್ದು  ಆಹಾರ ಇಲಾಖೆಯ  ವಸ್ತು ಪ್ರದರ್ಶನ ಮಳಿಗೆಯನ್ನು ಇಂದು ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ ಮಹದೇವಪ್ಪ ಹಾಗೂ ಆಹಾರ ಸಚಿವ ಕೆಹೆಚ್. ಮುನಿಯಪ್ಪ ರವರು ಉದ್ಘಾಟಿಸಿದರು.

ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯ ಯೋಜನೆಯ ಕುರಿತು ವಸ್ತು ಪ್ರರ್ದಶನದಲ್ಲಿ ಹಳ್ಳಿಯ ಜೀವನಶೈಲಿಯ ಕುರಿತ ಪ್ರದರ್ಶನ  ಮಾಡಲಾಗಿದ್ದು  ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ, ಜೋಳ ,ರಾಗಿಯ ಕುರಿತು ಹಾಗೂ ಕಾನೂನು ಮಾಪನ ಶಾಸ್ತ್ರದ ಇಲಾಖೆಯ ತೂಕದ ಸಾಮಗ್ರಿಗಳ ಕುರಿತು ವಸ್ತು ಪ್ರದರ್ಶನವನ್ನು ಮಾಡಲಾಗಿತ್ತು. ಹಸಿವು ಮುಕ್ತ ಕರ್ನಾಟಕ  ಸಂಕಲ್ಪದೊಂದಿಗೆ ಸಮೃದ್ದ ಹಳ್ಳಿಯ ಚಿತ್ರಣವನ್ನು ಪ್ರದರ್ಶಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಸಚಿವರು ಪಡಿತರ ಕಾರ್ಡ್ ಗಳು ಪರಿಷ್ಕರಣೆ ನಡೆಸಲಾಗಿತ್ತಿದ್ದು ಅರ್ಹರು ಒಂದು ವೇಳೆ ಬಿಪಿಎಲ್ ನಿಂದ ಎಪಿಎಲ್ ಗೆ ವರ್ಗಾವಣೆ ಯಾಗಿದ್ದರೆ ಸಂಬಂಧಿಸಿದ ತಾಲ್ಲೂಕಿನಲ್ಲಿ ತಹಶಿಲ್ದಾರರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಅವರು ಪರಿಶೀಲನೆ ನಡೆಸಿ ಪುನಃ ಕಾರ್ಡ್ ವಿತರಿಸಲು ಕ್ರಮವಹಿಸಲಾಗುವುದು ಎಂದರು.

ಅನ್ನಭಾಗ್ಯ ಯೋಜನೆಯಡಿ ಅರ್ಹ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ವಿತರಣೆ ಮಾಡುತ್ತಿದ್ದು ಮುಂದಿನ ತಿಂಗಳಲ್ಲಿ ಆಹಾರ ಧಾನ್ಯಗಳನ್ನು ಒಳಗೊಂಡ ಇಂದಿರಾ ಕಿಟ್ ವಿತರಿಸಲು ಕ್ರಮವಹಿಸಲಾಗುತ್ತಿದೆ  ಎಂದರು.

ಆಹಾರವನ್ಬು ವ್ಯರ್ಥ ಮಾಡಬೇಡಿ: ಡಾ: ಹೆಚ್.ಸಿ ಮಹದೇವಪ್ಪ

ಪ್ರತಿಯೊಬ್ಬರಿಗೂ ಆಹಾರ ಬಹಳ ಮುಖ್ಯವಾಗಿದ್ದು, ಆಹಾರವನ್ನು ವ್ಯರ್ಥ ಮಾಡದೇ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಚೆಲ್ಲದಿರಿ ಅನ್ನ ಬಡವರಿಗದೇ ಚಿನ್ನ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಅವರು ಹೇಳಿದರು.

ಅಂತ್ಯೋದಯ ಅಂದರೆ ಹಸಿವನ್ನು ಅಂತ್ಯ ಮಾಡುವುದು. ಆಹಾರ ನಾಗರಿಕ ಸರಬರಾಜು ಸಚಿವರಾಗಿ ಮುನಿಯಪ್ಪ‌ ಅವರು ಬಿಪಿಎಲ್ ಅಂತ್ಯೋದಯ ಕುಟುಂಬಗಳಿಗೆ 10 ಕೆಜಿ ಉಚಿತ ಅಕ್ಕಿ ನೀಡುವ ಯೋಜನೆ ತಂದರು. ಇದನ್ನು ಈಗ 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಗೆ ಇಂದಿರಾ ಕಿಟ್ ಮೂಲಕ ಬೇಳೆ , ಎಣ್ಣೆ ಅಂತಹ ಆಹಾರಧಾನ್ಯ ನೀಡಲು ಸಂಪುಟದಲ್ಲಿ ಅನುಮೋದನೆ ಪಡೆದಿದ್ದಾರೆ ಎಂದು ತಿಳಿಸಿದರು.

ನಮ್ಮ ಸರ್ಕಾರವು ಪ್ರತಿಯೊಬ್ಬರಿಗೂ ಬದುಕುವ ಹಕ್ಕು ನೀಡುವ ಸಲುವಾಗಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದು ಪ್ರತಿ ಕುಟುಂಬಗಳಿಗೂ ಆಹಾರಧಾನ್ಯ ನೀಡುತ್ತಿದ್ದೇವೆ, ಅದರಂತೆ ಇಂದು ಆಹಾರ ಇಲಾಖೆ ಮಳಿಗೆಯಲ್ಲಿ ಅನೇಕ ಉಪಯುಕ್ತ ಮಾಹಿತಿಗಳು ಇವೆ. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್  ಹಾಗೂ ಜಿಲ್ಲಾ ಜೆಂಟಿ ಉಪ ನಿರ್ದೇಶಕ ಮಂಟೇಸ್ವಾಮಿ, ತೂಕ ಮತ್ತು ಮಾಪನ‌ ಇಲಾಖೆ ಅಧಿಕಾರಿ ಮಹದೇವ ಸ್ವಾಮಿ ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

Key words: Mysore, Food Minister, KH. Muniyappa , food stall, exhibition