ಮೈಸೂರು ,ಆಗಸ್ಟ್,15,2025 (www.justkannada.in): ಮಹಿಳೆಗೆ ಸಿಗಬೇಕಾದ ಗೌರವ ಸಿಕ್ಕಾಗ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಣಿಶಾಸ್ತ್ರ ಸಹ ಪ್ರಾಧ್ಯಾಪಕಿ ಎಂ.ಸಿ.ಸುಧಾ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿ ನಿಲಯದ ಸರಸ್ವತಿ ಪುರo ನಲ್ಲಿರುವ ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಪ್ರೊ. ಅಬ್ದುಲ್ ರಹಿಮಾನ್ ಎಂ ಧ್ವಜಾರೋಹಣ ನೆರವೇರಿಸಿದರು.
ಕಾಲೇಜಿನ ಪ್ರಾಂಗಣದಲ್ಲಿ ಆಯೋಜಿಸಿದ್ದ 79 ನೆಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದ ಅವರು, ಇಂದಿನ ಸಮಾಜ ಮಹಿಳೆಯರನ್ನು ಕಾಣುತ್ತಿರುವ ಬಗೆಯನ್ನು ಬದಲಿಸಿಕೊಳ್ಳುವಂತೆ ಸಲಹೆ ನೀಡಿದರು.
ಮಹಿಳೆಯರನ್ನು ಗೌರವಿಸುವ ಸಮಾಜ ನಮ್ಮದಾಗಬೇಕು. ಮಹಿಳೆಯರು ಮುಖ್ಯ ವಾಹಿನಿಯಲ್ಲಿ ಹೆಚ್ಚು ಅವಕಾಶ ಪಡೆದುಕೊಳ್ಳಬೇಕು. ಅಲ್ಲದೆ, ಮಹಿಳೆಯರ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು ಎಂದು ಹೇಳಿದ ಅವರು, ಸ್ವಾತಂತ್ರ್ಯ ದೇಶ ಎಂದರೆ ಅನ್ಯರ ಕಪಿ ಮುಷ್ಟಿಯಿಂದ ಹೊರ ಬರುವುದಷ್ಟೇ ಅಲ್ಲ, ಬದಲಿಗೆ ಕಾನೂನು ಪಾಲನೆ ಮಾಡುವುದು, ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣಕ್ಕೆ ಪಣ ತೊಡುವುದು, ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬದುಕಿನಿಂದ ಪ್ರೇರೇಪಣೆ ಪಡೆದು ಮೌಲ್ಯಯುತ ಬದುಕನ್ನು ರೂಪಿಸಿಕೊಳ್ಳುವುದು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಅಬ್ದುಲ್ ರಹಿಮಾನ್ ಎಂ ಅವರು ಮಾತನಾಡಿ, ಜಗತ್ತು ಆಧುನಿಕತೆ ಕಡೆಗೆ ವಾಲುತ್ತಿದೆ. ಆದರೆ, ಹಿಂದಿನ ದಿನಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟಗಾರರು ನಡೆಸಿದ ತ್ಯಾಗ ಮತ್ತು ಬಲಿದಾನಗಳನ್ನು ಮನಗಂಡು ಅವರ ಮೌಲ್ಯಗಳನ್ನು ಪಾಲಿಸಬೇಕು ಎಂದರು. ಸಸ್ಯಶಾಸ್ತ್ರ ಸಹ ಪ್ರಾಧ್ಯಾಪಕಿ ಕಿರಣ್ಮಯಿ ಪಿ ನಾಗವಂದ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್, ಎನ್.ಎಸ್.ಎಸ್.ಅಧಿಕಾರಿ ಡಾ. ಲಕ್ಷ್ಮಣ ಬಿ, ದೈಹಿಕ ಶಿಕ್ಷಣ ಅಧ್ಯಾಪಕಿ ಡಾ.ಪ್ರತಿಮಾ ಕೆ.ಆರ್. ಸಾಂಸ್ಕೃತಿಕ ಸಮಿತಿ ಸಂಚಾಲಕ ಗೋವಿಂದರಾಜು, ನಿಲಯ ಪಾಲಕಿ ಪದ್ಮ ಸಿ, ಶೈಕ್ಷಣಿಕ ಡೀನ್ ಡಾ. ಶ್ರೀಪಾದ್, ಎಚ್.ಆರ್, ಡಾ. ಹನುಮಂತಪ್ಪ ಮಕರಿ, ಡಾ.ರಮೇಶ್ ಕೆ. ಎಲ್. ಡಾ. ಅಭಿನಂದಿನಿ, ಡಾ.ಲೀಲಾವತಿ, ಸುಧಾ, ಡಾ. ಲಕ್ಷ್ಮಣ ಬಿ, ಸಿದ್ದರಾಜು, ನಿಲಯ ಗೋವಿಂದರಾಜು, ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು, ಎನ್.ಎಸ್.ಎಸ್, ಎನ್. ಸಿ .ಸಿ,ಕ್ರೀಡೆ, ರೇಂಜರ್ಸ್, ರೆಡ್ ಕ್ರಾಸ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ತರಗತಿ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
Key words: Independence day, Mysore, Maharani college