ಅತಂತ್ರ ಫಲಿತಾಂಶ ಬೇಡ: ಸ್ಪಷ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಲು ಅವಕಾಶ ಕೊಡಿ- ಮಾಜಿ ಸಿಎಂ ಸಿದ್ಧರಾಮಯ್ಯ.

ಮೈಸೂರು,ಮೇ,5,2023(www.justkannada.in): ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಆದರೆ ಸುಭದ್ರ ಸರ್ಕಾರ ನೀಡಲು ಸಾಧ್ಯವಿಲ್ಲ. ಸುಭದ್ರ ಸರ್ಕಾರ ಇಲ್ಲದಿದ್ದರೆ ಜನರ ಆಶೋತ್ತರ ಈಡೇರಿಸಲು ಅಸಾಧ್ಯ. ಹೀಗಾಗಿ ಅತಂತ್ರ ವಿಧಾನಸಭೆಯಾಗಲು ಜನರು ತೀರ್ಪು ನೀಡಬಾರದು. ಸ್ಪಷ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಅವಕಾಶ ಕೊಡಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಮನವಿ ಮಾಡಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ನಡದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ಧರಾಮಯ್ಯ, ರಾಜ್ಯದಲ್ಲಿ ಬಿಜೆಪಿ ವಿರುದ್ಧ ಗಾಳಿ ಬೀಸಲು ಶುರುವಾಗಿದೆ. ಜನರು ಬಿಜೆಪಿ ಸರ್ಕಾರದ ವಿರುದ್ಧ ಬೇಸತ್ತಿದ್ದು, ಬದಲಾವಣೆ ಬಯಸಿದ್ದಾರೆ. ಜನರಿಗೂ ಸಹ ಮನವರಿಕೆಯಾಗಿದ್ದು, ನಾವು ಸಹ ಮನದಟ್ಟು ಮಾಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವಂತೆ ಮನವರಿಕೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಅತಂತ್ರ ವಿಧಾನಸಭೆ ಆಗಬಾರದು. 2004, 2008, 2018ರಲ್ಲಿ ಅತಂತ್ರ ವಿಧಾನಸಭೆ ಆಯಿತು. ಅತಂತ್ರ ವಿಧಾನಸಭೆ ಆದರೆ ಸುಭದ್ರ ಸರ್ಕಾರ ನೀಡಲು ಸಾಧ್ಯವಿಲ್ಲ. ಇದರಿಂದ ಜನರ ಆಶೋತ್ತರಗಳನ್ನು ಈಡೇರಿಸಲು ಆಗಲ್ಲ. 2004ರಲ್ಲಿ ಪೂರ್ಣಾವಧಿ ಸರ್ಕಾರ ಬರಲಿಲ್ಲ. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ನಡೆಸಿತು. ನಂತರ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರ ಮಾಡಿ 20 ತಿಂಗಳ ಒಪ್ಪಂದ ಮಾಡಿಕೊಂಡು ಸರ್ಕಾರ  ನಡೆಸಿದರು. ಆದರೆ ಜೆಡಿಎಸ್ ಒಪ್ಪಂದದ ಪ್ರಕಾರ ನಡೆಯದ ಕಾರಣ ಬಿಜೆಪಿ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದು ಸ್ವಲ್ಪಮಟ್ಟಿಗೆ ಬಿಜೆಪಿಗೆ ಅನುಕೂಲ ಆಯಿತು.  2008ರಲ್ಲಿ ಸಹ ಅತಂತ್ರ ವಿಧಾನಸಭೆ ನಿರ್ಮಾಣ ಆಯಿತು. ಬಿಜೆಪಿ ಹೆಚ್ಚು ಸ್ಥಾನ ನೀಡಿದರೂ ಸರ್ಕಾರ ರಚನೆಗೆ ಸ್ಪಷ್ಟ ಬಹುಮತ ಸಿಗಲಿಲ್ಲ. ಸ್ವತಂತ್ರವಾಗಿ ಗೆದ್ದವರನ್ನ ಪಡೆದು ಸರ್ಕಾರ ರಚಿಸಿದರು. ಮೂರು ಜನರು ಸಿಎಂಗಳಾದರು ಎಂದು ತಿಳಿಸಿದರು.

ಭ್ರಷ್ಟಾಚಾರ ತಡೆಯುವ ಬದ್ಧತೆ ಪ್ರಧಾನಿಗಳಿಗಿಲ್ಲ.

ಕರ್ನಾಟಕದಲ್ಲಿ ಅಪರೇಷನ್ ಕಮಲ ಸಂಸ್ಕೃತಿ ಬಂತು. ಬಿಜೆಪಿಯವರಿಗೆ ಬೇಕಾದವರನ್ನ ಕೊಂಡುಕೊಂಡು ಸರ್ಕಾರ ರಚನೆ ಮಾಡಿದ್ರು. ಇದು ರಾಜ್ಯದ ಅಭಿವೃದ್ಧಿಗೆ ಸಹಕಾರ ಆಗಿಲ್ಲ. ಈಗ ಬಿಜೆಪಿ ಆಡಳಿತಕ್ಕೆ ಜನ ಬೇಸತ್ತಿದ್ದಾರೆ. ಬಿಜೆಪಿಯ ಭ್ರಷ್ಟಾಚಾರ ಅಷ್ಟರ ಮಟ್ಟಿಗಿದೆ. ಬಸವರಾಜು ಬೊಮ್ಮಯಿ ಸರ್ಕಾರ 40% ಸರ್ಕಾರ ಅಂತಾ ಪ್ರಧಾನಿಗಳಿಗೆ ಪತ್ರ ಹೋಯಿತು. ಕಂಟ್ರಾಕ್ಟರ್ ಅಸೋಸಿಯೇಷನ್ ‌ನವರು 40% ಅಂತಾ ಪತ್ರ ಬರೆದರು. ಆದರೆ ಪ್ರಧಾನಿ ಮೋದಿವರು ನಾ ಕಾವುಂಗಾ ನಾ ಕಾನೇದುಂಗ ಅಂತಾರೆ.  ಅಧಿಕೃತವಾದ ಪತ್ರವಿದ್ದರೂ ಯಾವುದೇ ಕ್ರಮ ವಾಗ್ಲಿಲ್ಲ. ಭ್ರಷ್ಟಾಚಾರ ತಡೆಯುವ ಬದ್ಧತೆ ಪ್ರಧಾನಿಗಳಿಗಿಲ್ಲ ಎಂದು ಸಿದ್ಧರಾಮಯ್ಯ ಟೀಕಿಸಿದರು.

ಭ್ರಷ್ಟಾಚಾರದ ಆರೋಪ ಇದ್ರೆ ದಾಖಲಾತಿ ಕೊಡಿ ಅಂತಾ ಬೊಮ್ಮಾಯಿ ಕೇಳಿದರು. ಆದರೆ ರೂಪ್ಸಾ, ಕಂಟ್ರಾಕ್ಟರ್ ಅಸೋಸಿಯೇಷನ್‌ ನವರು ಬರೆದಿರುವ ಪತ್ರಗಳು ದಾಖಲೆಗಳಲ್ವಾ..? ಪಿಎಸ್ಐ ನೇಮಕಾತಿಯಲ್ಲಾದ ಹಗರಣ ದಾಖಲೆಯಾಗಿಲ್ವಾ..? 40% ಕಮಿಷನ್ ನಿಂದಾಗಿ ಒಬ್ಬ ಆತ್ಮಹತ್ಯೆ ಮಾಡಿಕೊಂಡರು. ಈ ಪ್ರಕರಣದಲ್ಲಿ ಈಶ್ವರಪ್ಪ ರಾಜೀನಾಮೆ ಕೊಟ್ಟರು. ನಾವು ವಿಧಾನಸೌಧದಲ್ಲಿ ಧರಣಿ ಮಾಡುದವು. ಇದು ಎವಿಡೆನ್ಸ್ ಅಲ್ವಾ..? ಮಾಡಳ್ ವಿರೂಪಾಕ್ಷಪ್ಪ ಮಗನನ್ನ  ಪೊಲೀಸರು ರೆಡ್‌ಹ್ಯಾಂಡಾಗಿ ಹಿಡಿದರು. ಆ ವೇಳೆ ಮನೆಯಲ್ಲಿ ಎಂಟು ಕೋಟಿ ಹಣ ಸಿಕ್ಕಿದೆ. ಇದಕ್ಕಿಂತ ಎವಿಡೆನ್ಸ್ ಏನುಬೇಕು..? ಇದರಲ್ಲಿ ಗೊತ್ತಾಗುತ್ತೆ ಇದು 40% ಸರ್ಕಾರ ಅಂತಾ. ಕರ್ನಾಟಕ ಇತಿಹಾಸದಲ್ಲಿ ಇಂತಹ ಭ್ರಷ್ಟಾಚಾರ ನಡೆದಿಲ್ಲ. ಬರೀ ಇಷ್ಟೇ ಅಲ್ಲ ಬೇರೆ ಬೇರೆ ಕ್ಷೇತದಲ್ಲೂ ಲಂಚ ನಡೆಯುತ್ತಿದೆ. ವರ್ಗಾವಣೆ ಸೇರಿದಂತೆ ಹಲವು ಕಡೆ ಲಂಚ ನಡೆಯುತ್ತಿದೆ ಎಂದು ಸಿದ್ಧರಾಮಯ್ಯ ಆರೋಪಿಸಿದರು.

ಬೊಮ್ಮಯಿ ಹೇಳ್ತಾರೆ ಸಿದ್ದರಾಮಯ್ಯ ಕಾಲದಲ್ಲೂ ಭ್ರಷ್ಟಾಚಾರ ನಡೆಯುತ್ತಿತ್ತು ಅಂತಾರೆ. ಅವರು ಆವಾಗ ವಿರೋಧ ಪಕ್ಷದಲ್ಲಿದ್ದರಲ್ಲ ಯಾಕೆ ಧ್ವನಿ ಎತ್ತಲಿಲ್ಲ. ಈಗ ನೀವೇ ಅಧಿಕಾರದಲ್ಲಿದ್ದಿರಲ್ಲ ತನಿಖೆ ಮಾಡಿಸಬೇಕಿತ್ತು. ಈಗ ಸುಮ್ಮನೆ ಮಾತನಾಡೋದು. ಜೊತೆಗೆ ಅನಗತ್ಯವಾದ ವಿಚಾರಗಳಣ್ನ ಸೃಷ್ಟಿಸೋದು. ಆಜಾನ್, ಹಲಾಲ್, ವ್ಯಾಪಾರ ಮಾಡ್ಬೇಡಿ ಅನ್ನೋದು. ಇದರಿಂದ ಅಲ್ಪ ಸಂಖ್ಯಾತರು ಭಯದಲ್ಲಿ ಬದುಕುವಂತಾಯ್ತು. ನಾವು 15 ಲಕ್ಷ ಮನೆ ಕಟ್ಟಿದ್ವು. ನೀವು ಎಷ್ಟು ಮನೆ ಕಟ್ಟಿದ್ರಿ ಹೇಳಿ. ನಾವು ಬಡವರಿಗೆ ಏಳು ಕೆಜಿ ಅಕ್ಕಿ ಕೊಟ್ಟೆ. ನೀವು ಅದನ್ನ ಕಡಿಮೆ ಮಾಡಿ ಕಡಿಮೆ ಕೊಡುತ್ತಿದ್ದೀರಿ ಯಾಕ್ ಕಡಿಮೆ ಮಾಡಿದ್ರಿ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

2018 ರಲ್ಲಿ 600 ಭರವಸೆ ನೀಡಿದ್ದು,ಎಷ್ಟು ಈಡೇರಿಸಿದ್ದೀರಾ?

ನಮ್ಮ ಅವಧಿಯಲ್ಲಿ ನಾವು 165 ಭರವಸೆಗಳನ್ನ ನೀಡಿದ್ದವು.ಅದರಲ್ಲಿ 158 ಭರವಸೆ ಈಡೇರಿಸಿ, 20ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಹೆಚ್ಚಾಗಿ ನೀಡಲಾಗಿದೆ. ಆದರೆ ನಿಮ್ಮ ಅವಧಿಯಲ್ಲಿ ನೀವೇನು ಮಾಡಿದ್ದೀರಾ? 2018 ರಲ್ಲಿ 600 ಭರವಸೆ ನೀಡಿದ್ದು,ಎಷ್ಟು ಈಡೇರಿಸಿದ್ದೀರಾ?  ನಮ್ಮ ಪ್ರಣಾಳಿಕೆ ಬಗ್ಗೆ ಟೀಕೆ ಮಾಡಿರುವ ಪ್ರಧಾನಿ ಮೋದಿ ಅವರು ಎಷ್ಟು ಭರವಸೆ ಈಡೇರಿಸಿದ್ದೀರಾ? ಈ ಕುರಿತ ಬಹಿರಂಗ ಚರ್ಚೆಗೆ ಬನ್ನಿ  ಎಂದರೂ ಬಿಜೆಪಿಗರು ಬರುತ್ತಿಲ್ಲ. ಭ್ರಷ್ಟಾಚಾರ, ಜನವಿರೋಧಿ ಆಡಳಿತ, ನಿಷ್ಕ್ರಿಯತೆ, ದ್ವೇಷದ ರಾಜಕಾರಣ ಎಲ್ಲವೂ ಹೆಚ್ಚಾಗಿದೆ.  ಡಬಲ್ ಇಂಜಿನ್‌ ಸರ್ಕಾರ ಇದ್ದರೂ ಮಹದಾಯಿ ಯೋಜನೆ, ಮೇಕೆದಾಟು ಯೋಜನೆ ಯಾವುದನ್ನು ಸಹ ಈಡೇರಿಸಿಲ್ಲ. ಈ ಎಲ್ಲದರ ಕಾರಣದಿಂದ ಜನರು ಬೇಸತ್ತಿದ್ದಾರೆ. ಅತಂತ್ರ‌ ವಿಧಾನಸಭೆ ಮಾಡದಿರಲು ಜನ ತೀರ್ಮಾನಿಸಿದ್ದಾರೆ.  ಕಾಂಗ್ರೆಸ್ ನುಡಿದಂತೆ ನಡೆದಿರುವ ಪಕ್ಷ, ಜನರ ಆಶೋತ್ತರಗಳಿಗೆ ಸ್ಪಂದಿಸಿದೆ. ನರೇಂದ್ರ ಮೋದಿ ಅವರು ಕಾರ್ಯಕರ್ತರನ್ನ ಉದ್ದೇಶಿಸಿ‌ ಆನ್ಲೈನ್ ಭಾಷಣ‌ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ನೀಡಿರುವ ಗ್ಯಾರೆಂಟಿ ಈಡೇರಿಸಲು ಆಗಲ್ಲ,‌ ಇದಕ್ಕೆ ದುಡ್ಡಿಲ್ಲ, ಜನರ ಜೊತೆ ಆಟ ಆಡುತ್ತಾರೆ ಎಂದಿದ್ದಾರೆ. ಆದರೆ ಮೋದಿ ಅವರು ಒಕ್ಕೂಟ ವ್ಯವಸ್ಥೆಯ ಪ್ರಧಾನಿ ಆಗಿದ್ದಾರೆ. ದೇಶದ ಮೇ‌ಲೆ‌ ಇಂದು 155 ಲಕ್ಷ ಕೋಟಿ ಸಾಲ ಇದೆ.  ಸ್ವತಂತ್ರ ಬಂದ ಮೇಲೆ‌ ದೇಶದ ಮೇಲೆ ಆಗಿರುವ ಸಾಲ 55 ಲಕ್ಷ ಕೋಟಿ.  ರಾಜ್ಯದಲ್ಲಿ 2018ರ ಮಾರ್ಚ್ ವೇಳೆ 2 ಲಕ್ಷದ 42 ಸಾವಿರ ಕೋಟಿ ಸಾವಿರ ಕೋಟಿ ಇತ್ತು. ಈಗ 5 ಲಕ್ಷದ 64 ಸಾವಿರ ಕೋಟಿ ಇದೆ ಎಂದು ಮಾಹಿತಿ ನೀಡುವ ಮೂಲಕ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯನ್ನು ಮುಕ್ತ ಚರ್ಚೆಗೆ ಆಹ್ವಾನಿಸಿದ ಸಿದ್ದರಾಮಯ್ಯ

ತಮ್ಮ ಕಾಲದ ಅವಧಿಯ ಘೋಷಣೆ ಈಡೇರಿಕೆ, ತಮ್ಮ ಕಾಲದ ಪ್ರಣಾಳಿಕೆಯ ಈಡೇರಿಕೆಗಳ ಕುರಿತು ಚರ್ಚೆಗೆ ಬನ್ನಿ ಎಂದು ಹೇಳುವ ಮೂಲಕ ಸಿದ್ಧರಾಮಯ್ಯ ಅವರು ಬಿಜೆಪಿಯನ್ನು ಮುಕ್ತ ಚರ್ಚೆಗೆ ಆಹ್ವಾನಿಸಿದರು.

ಡಬಲ್ ಇಂಜಿನ್ ಸರ್ಕಾರ ಇದೆಯಲ್ಲ ಏನು ಮಾಡಿದ್ದಾರೆ? ಯಾಕೆ ಅಭಿವೃದ್ಧಿ ಕಾರ್ಯ ಮಾಡಿಲ್ಲ ಈವರಗೆ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಿಲ್ಲ. ಡಿಪಿಆರ್ ಕಳಿಸಿ ವರ್ಷಗಳೇ ಕಳೆದಿವೆ ಎಂದು ಸಿದ್ಧರಾಮಯ್ಯ ಹರಿಹಾಯ್ದರು.

Key words: mysore-Former CM –Siddaramaiah- press conference