ಮೈಸೂರು ಅಭಿವೃದ್ದಿಗೆ ನನ್ನದೊಂದು ಪ್ರಣಾಳಿಕೆ ಇದೆ: ಸೇವೆ ಮಾಡಲು ಅವಕಾಶ ನೀಡಿ- ಎಂ. ಲಕ್ಷಣ್ ಮತಯಾಚನೆ.

ಮೈಸೂರು,ಏಪ್ರಿಲ್,8,2024 (www.justkannada.in): ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಾವು ಹೆಚ್ಚಾಗಿದ್ದು ಭಾರಿ ಕುತೂಹಲ ಮೂಡಿಸಿರುವ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಭರ್ಜರಿ ಪ್ರಚಾರ ನಡೆಸಿ ಮತಯಾಚನೆ ಮಾಡುತ್ತಿದ್ದಾರೆ.

ಈ ನಡುವೆ ಇಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ  ಒಳಪಡುವ ರಾಜರಾಜೇಶ್ವರಿ ನಗರ  ವಾರ್ಡ್ ನಂಬರ್ 45ಕ್ಕೆ ಎಂ.ಲಕ್ಷ್ಮಣ್ ಭೇಟಿ ನೀಡಿ  ಜನ ಸಂಪರ್ಕ ಸಭೆ ನಡೆಸಿ ಮತಯಾಚನೆ ಮಾಡಿದರು.

ವಾರ್ಡಿನ ಜನರು ಎಂ. ಲಕ್ಷ್ಮಣ್ ರವರನ್ನ ಅದ್ಧೂರಿಯಿಂದ ಸ್ವಾಗತ ಮಾಡಿದರು. ಈ ವೇಳೆ ಮಾತನಾಡಿದ ಎಂ.ಲಕ್ಷ್ಮಣ್, ಮೈಸೂರು ಅಭಿವೃದ್ದಿಗೆ ನಾನೊಂದು ಪ್ರಣಾಳಿಕೆ ತಂದಿದ್ದೇನೆ. ಜನರ ಪರ ನಿಂತು ಕೆಲಸ ಮಾಡುವುದಕ್ಕೆ ಈ ಬಾರಿ ನನಗೊಂದು ಅವಕಾಶ  ಕೊಡಿ ಎಂದು ಮನವಿ ಮಾಡಿದರು.

ನಾನು ಮೂಲತಃ ಮೈಸೂರಿನವನು ಕಾಂಗ್ರೆಸ್ ಪಕ್ಷ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್ ನೀಡಿದೆ. ನನ್ನನ್ನು ಹಲವಾರು ಜನ ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಾರೆ ನೀವು ಗೆದ್ದು ಬಂದರೆ ಏನು ಮಾಡುತ್ತೀರಾ ನಿಮ್ಮ ಚಿಂತನೆ ಏನು ಎಂದು.  ನಾನು ಮುಖ್ಯಮಂತ್ರಿ ಮತ್ತು ನಾಯಕರ ಜೊತೆ ಚರ್ಚೆ ಮಾಡಿ ಪ್ರಣಾಳಿಕೆಯನ್ನು ಮೈಸೂರಿನಲ್ಲಿ ಬಿಡುಗಡೆ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದ ರಕ್ತದಲ್ಲಿ ಸುಳ್ಳು ಎಂಬುದು ಕಾಣುವುದಿಲ್ಲ. ಕಳೆದ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿ ಕೊಡುತ್ತೇವೆ ಎಂದು ಹೇಳಿದ್ದೆವು.  ಸಿಎಂ ಮತ್ತು ಡಿಸಿಎಂ ಜಾರಿಗೊಳಿಸಿದ್ದಾರೆ. ಮತ್ತೆ ಈಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಬಡವರಿಗೆ ಅನುಕೂಲವಾಗುವಂತೆ ಕಾಂಗ್ರೆಸ್ ಸರಕಾರ 5 ನ್ಯಾಯಗಳನ್ನು ಕೊಡುವುದಕ್ಕೆ  ಮುಂದಾಗಿದೆ.

ಕೇಂದ್ರದಲ್ಲಿ ಸರಕಾರ ಬಂದರೆ ಮೊದಲ ಮಹಾಲಕ್ಷ್ಮಿ ಯೋಜನೆ ಜಾರಿ ಮಾಡುತ್ತೇವೆ. ವರ್ಷಕ್ಕೆ 1 ಲಕ್ಷ ನಗದು ಹಣ ನೀಡುತ್ತೇವೆ. 25 ಗ್ಯಾರಂಟಿ ಯೋಜನೆಗಳು ಬರಲಿವೆ. ನನ್ನನ್ನು ಬೆಂಬಲಿಸುವ ಮೂಲಕ ದೇಶದಲ್ಲಿ ಕಾಂಗ್ರೆಸ್ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷರು ಕೆ. ಮರೀಗೌಡ, ಎಂಎಲ್ಸಿ ತಿಮ್ಮಯ್ಯ, ಗ್ರಾಮಾಂತರ ಅಧ್ಯಕ್ಷರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಅರುಣ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್ . ಸಿ ಕೃಷ್ಣ ಕುಮಾರ ಸಾಗರ್, ಮಾಜಿ ನಗರ ಪಾಲಿಕ ಸದಸ್ಯ ಮಲ್ಲೇಶ್, ಬ್ಲಾಕ್ ಅಧ್ಯಕ್ಷರು ಸತೀಶ್, ಮಾದೇವಣ್ಣ ಸೇರಿ ಹಲವರು ಭಾಗಿಯಾಗಿದ್ದರು.

ನಿವೇದಿತಾ ನಗರದಲ್ಲಿ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಎಂ. ಲಕ್ಷ್ಮಣ್, ಜನರ ಬಳಿ ಕೈ ಮುಗಿದು ತಮ್ಮಲ್ಲಿ ಮತ  ಕೇಳಿಕೊಳ್ಳುತ್ತೇನೆ. ಈ ಬಾರಿ ನನಗೊಂದು ಅವಕಾಶ ಮಾಡಿಕೊಡಿ ತಮ್ಮ ಸೇವೆಯಲ್ಲಿ ನಿರತನಾಗಿ ಕೆಲಸ ಮಾಡುತ್ತೇನೆ ಎಂದು ಮನವಿ ಮಾಡಿದರು.

ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ ವಿಜಯ್ ಕುಮಾರ್ ಮಾತನಾಡಿ, 8 ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿ ಈಗಾಗಲೇ ಮತಯಾಚನೆ ಮಾಡಿದ್ದಾರೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸಬೇಕು. ಮುಖ್ಯಮಂತ್ರಿಯವರ ಅಭಿವೃದ್ದಿ ಕಾರ್ಯಗಳನ್ನು ಸಮಾಜಕ್ಕೆ ನೀಡಿದ್ದಾರೆ. ಮತ್ತೊಮ್ಮೆ ನಮಗೆ ಅವಕಾಶ ಮಾಡಿಕೊಡಿ, ಎಂದು ಲಕ್ಷ್ಮಣ್ ರವರ ಪರ ಮತಯಾಚನೆ ಮಾಡಿದ್ದರು.

ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷರು ಮರೀಗೌಡ ಗ್ರಾಮಾಂತರ ಅಧ್ಯಕ್ಷರು ಬಿ.ಜೆ ವಿಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಗೌಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಜವರಪ್ಪ, ಅರುಣ್ ಕುಮಾರ್, ಬ್ಲಾಕ್ ಅಧ್ಯಕ್ಷರು ಗುರುಸ್ವಾಮಿ, ಮಾಜಿ ಮೇಯರ್ ಚಿಕ್ಕಣ್ಣ, ಮುಖಂಡರು ಮತ್ತಿತರು ಹಾಜರಿದ್ದರು‌.

Key words: mysore, congress, candidate, M. Lakshan