ನಾದಿನಿ ಜೊತೆ ಅಶ್ಲೀಲ ವರ್ತನೆ:  ಪ್ರಶ್ನಿಸಿದ ಭಾವನ ಮೇಲೆ ಮೂತ್ರ ವಿಸರ್ಜಿಸಿ ಮಾರಣಾಂತಿಕ ಹಲ್ಲೆ ಮಾಡಿದ ಆಂಬ್ಯುಲೆನ್ಸ್ ಡ್ರೈವರ್.

ಮೈಸೂರು,ನವೆಂಬರ್,24,2023(www.justkannada.in): ತನ್ನ  ನಾದಿನಿ ಜೊತೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದನ್ನ ಪ್ರಶ್ನಿಸಿದ ಭಾವನ ಮೇಲೆ ಅಂಬ್ಯುಲೆನ್ಸ್ ಚಾಲಕನೊಬ್ಬ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದು   ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಟ್ರಾಮಾ ಸೆಂಟರ್ ನ ಅಂಬ್ಯುಲೆನ್ಸ್ ಡ್ರೈವರ್  ಸಂದೇಶ್ ಎಂಬಾತನೇ ಈ ರೀತಿ ವಿಕೃತಿ ಮೆರೆದಿರುವುದು. ಅದೇ ಆಸ್ಪತ್ರೆ ಸೆಕ್ಯೂರಿಟಿ ಗಾರ್ಡ್ ಮಹೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು  ಸದ್ಯ  ಮಹೇಶ್ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಸಂದೇಶ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂದೇಶ್ ಈ ಹಿಂದೆ ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಇಟ್ಟು ಯುವತಿಯರು, ಆಸ್ಪತ್ರೆ ನರ್ಸ್ ಗಳ ವೀಡಿಯೋ ಮಾಡಿ ಸಿಕ್ಕಿಬಿದ್ದಿದ್ದ. ಈ ವಿಚಾರಕ್ಕೆ ಕೆ.ಆರ್‌.ಆಸ್ಪತ್ರೆಯಿಂದ ಸಂದೇಶ್ ನನ್ನು ಕೆಲಸದಿಂದ ತೆಗೆಯಲಾಗಿತ್ತು. ಬಳಿಕ ಇದೀಗ ಮತ್ತೆ ಟ್ರಾಮಾ ಸೆಂಟರ್ ಗೆ ಕೆಲಸಕ್ಕೆ ಸೇರಿದ್ದನು. ಅಲ್ಲೂ ಕೂಡ ಇದೇ ರೀತಿಯ ತನ್ನ ಆಟಾಟೋಪವನ್ನ ಸಂದೇಶ್  ಮುಂದುವರೆಸಿದ್ದ.

ಅಲ್ಲೆ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಮಹೇಶ್ ಅವರ  ನಾದಿನಿಯ ಜೊತೆ ಸಂದೇಶ್ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದನಂತೆ. ಅದನ್ನು ಮಹೇಶ್  ಪ್ರಶ್ನೆ ಮಾಡಿದ್ದು,  ಜೊತೆಗೆ ಆಸ್ಪತ್ರೆ ಅಧಿಕಾರಿಗಳಿಗೆ ಈ ಕುರಿತು ದೂರು ನೀಡಿದ್ದರು.

ಈ ಮಧ್ಯೆ ಇದೇ ಸೋಮವಾರ ಆಸ್ಪತ್ರೆಗೆ ಕೆಲಸಕ್ಕೆ ಬರುತ್ತಿದ್ದ ಮಹೇಶ್ ರನ್ನು ಮೈಸೂರಿನ ಹೊರವಲಯದ ಬಂಡೀಪಾಳ್ಯದ ಬಳಿಗೆ ಕರೆದುಕೊಂಡು ಹೋಗಿದ್ದ ಸಂದೇಶ್ ಹಾಗೂ  ಆತನ ಸ್ನೇಹಿತರು ಮಹೇಶ್ ತಲೆಭಾಗಕ್ಕೆ  ಹೊಡೆದು ಹಾಗೂ ಕೈ ಮುರಿದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಬಳಿಕ ಮಹೇಶ್ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ‌ ಮೆರೆದಿದ್ದಾರೆ ಎನ್ನಲಾಗಿದೆ.

Key words: mysore-Ambulance driver – assaulted – questioning- Indecency- behavior