ಮೈಸೂರು,ಡಿಸೆಂಬರ್,18,2025 (www.justkannada.in): ರಾಜ್ಯದಲ್ಲೇ ಬಾರೀ ಸದ್ದು ಮಾಡಿರುವ ಮುಡಾ ಹಗರಣ ಪ್ರಕರಣವು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಇಂದು ನ್ಯಾಯಲಯಕ್ಕೆ ವರದಿ ಸಲ್ಲಿಸಲಿದ್ದಾರೆ.
ಪ್ರಕರಣ ಸಂಬಂಧ 50 ಪುಟಗಳ ಹೆಚ್ಚುವರಿ ವರದಿ ಸಲ್ಲಿಕೆಗೆ ಲೋಕಾಯುಕ್ತ ಎಸ್ಪಿ ಉದೇಶ್ ಮುಂದಾಗಿದ್ದು ಬೆಂಗಳೂರಿಗೆ ತೆರಳಿದ್ದಾರೆ. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಲಿದ್ದಾರೆ.
ಡಿಸೆಂಬರ್ 18 ರ ಒಳಗೆ ವರದಿ ಸಲ್ಲಿಸುವಂತೆ ನ್ಯಾಯಲಯ ಸೂಚಿಸಿತ್ತು. ಈ ಹಿನ್ನೆಲೆ ಮುಡಾ ಮಾಜಿ ಆಯುಕ್ತರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಅವರನ್ನೂ ಲೋಕಾ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಈ ಪ್ರಕರಣದಲ್ಲಿ ಈಗಾಗಲೇ ದಿನೇಶ್ ಕುಮಾರ್ ಜೈಲು ಸೇರಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮೊದಲ ಆರೋಪಿ ಆಗಿದ್ದರೇ ಪತ್ನಿ ಪಾರ್ವತಿ ಎ2, ಬಾಮೈದ ಮಲ್ಲಿಕಾರ್ಜುನಸ್ವಾಮಿ ಎ3, ದೇವರಾಜು ಎ4 ಆಗಿದ್ದಾರೆ. ಮೊದಲ ಹಂತದ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗು ಉಳಿದವರ ಕುರಿತು ಲೋಕಾಯುಕ್ತ ಅಧಿಕಾರಿಗಳು ವರದಿ ಸಲ್ಲಿಕೆ ಮಾಡಿದ್ದರು.
ಲೋಕಾಯುಕ್ತ ಲೋಪಗಳ ಕುರಿತು ದೂರುದಾರ ಸ್ನೇಹಮಯಿಕೃಷ್ಣ ಮೇಲ್ಮನವಿ ಸಲ್ಲಿಕೆ ಮಾಡಿದ್ದರು. ಈ ಹಿನ್ನೆಲೆ ಸಂಪೂರ್ಣ ವರದಿ ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು 900ಕ್ಕೂ ಹೆಚ್ಚು ಪುಟಗಳ ವರದಿ ಸಲ್ಲಿಸಿದ್ದು, ಇದೀಗ ವರದಿ ಸಲ್ಲಿಸಲು ಲೋಕಾಯುಕ್ತ ಎಸ್ಪಿ ಉದೇಶ್ ತೆರಳಿದ್ದು ಮುಡಾ ಹಗರಣ ಪ್ರಕರಣದ ಇಂಚಿಂಚು ಮಾಹಿತಿ ಹೊತ್ತೊಯ್ದಿದ್ದಾರೆ. ಯಾರ ಯಾರ ಪಾತ್ರ, ಏನೇನು? ಎಂಬುದು ವರದಿಯಲ್ಲಿ ಉಲ್ಲೇಖವಾಗಿರುವ ಸಾಧ್ಯತೆ ಇದೆ.
Key words: Muda scam, Report, court, Lokayukta, today







