ಮೈಸೂರು-ಬೆಂಗಳೂರು ಮೇಲ್ಸೇತುವೆ ಕಾಮಗಾರಿ  ಪ್ರಕ್ರಿಯೆ ಇಂದಿನಿಂದ ಆರಂಭ- ಸಂಸದ ಯದುವೀರ್

ಮೈಸೂರು, ಜನವರಿ,20,2026 (www.justkannada.in): ಮೈಸೂರು ನಾಗರಿಕರ ಬಹುದಿನದ ಕನಸು ನನಸಾಗುತ್ತಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಪ್ರಯತ್ನದ ಫಲವಾಗಿ ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್‌ ವೇಯ ಮಣಿಪಾಲ್‌ ಜಂಕ್ಷನ್‌ ಬಳಿ ಫ್ಲೈ ಓವರ್‌ ನಿರ್ಮಾಣಕ್ಕೆ ಮುಹೂರ್ತ ನಿಗದಿಯಾಗಿದೆ.

ಇಂದಿನಿಂದ ಅಂದರೆ ಜನವರಿ 20ರಿಂದ ಈ ಕಾಮಗಾರಿಯ ಪ್ರಕ್ರಿಯೆಗೆ ಹಸಿರು ನಿಶಾನೆ ದೊರೆಯಲಿದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆದೇಶ ಹೊರಡಿಸಿದೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದ ಯದುವೀರ್‌ ಒಡೆಯರ್‌, ಜನವರಿ 20ರಿಂದ ಕಾಮಗಾರಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಮಣಿಪಾಲ ಜಂಕ್ಷನ್‌ ಬಳಿ ಫ್ಲೈ ಓವರ್‌ ನಿರ್ಮಾಣ ಸಂಬಂಧ ಬೇಡಿಕೆಗಳು ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ನಿರಂತರ ಸಭೆ ನಡೆಸಿ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಲಾಯಿತು. ಅದಕ್ಕೀಗ ಪುರಸ್ಕಾರ ದೊರೆತಿದೆ ಎಂದು ಹೇಳಿದ್ದಾರೆ.

ಎನ್‌ ಎಚ್‌ಎಐ ಅಧಿಕಾರಿಗಳ ಬೆಂಬಲ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಕಾರ್ಯದರ್ಶಿ ಉಮಾಶಂಕರ್‌ ಅವರು ಈ ಕಾಮಗಾರಿ ಪ್ರಕ್ರಿಯೆ ಆರಂಭ ಸಂಬಂಧ ಆದೇಶ ಹೊರಡಿಸಿದ್ದಾರೆ ಎಂದು ಸಂಸದ ಯದುವೀರ್ ವಿವರಿಸಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್‌ ವೇ ಹಾದಿಯಲ್ಲಿರುವ ಬರುವ ಕೆಂಪೇಗೌಡ ವೃತ್ತ (ಮಣಿಪಾಲ ಜಂಕ್ಷನ್‌)ದಲ್ಲಿ ಫ್ಲೈ ಓವರ್‌ ನಿರ್ಮಾಣದಿಂದ ಅಪಘಾತಗಳು ಕಡಿಮೆಯಾಗಲಿವೆ, ಪ್ರಯಾಣದ ಸಮಯ ಇಳಿಕೆಯಾಗಲಿದೆ, ಜೊತೆಗೆ ಸಾರಿಗೆ ದಟ್ಟಣೆ ನಿವಾರಣೆಯಾಗಿ, ಮೈಸೂರಿಗೆ ಆಗಮಿಸುವ  ಮತ್ತು ನಿರ್ಗಮಿಸುವ ಹಾದಿ ಸುಗಮವಾಗಲಿದೆ  ಎಂದು ಮನವರಿಕೆ ಮಾಡಿಕೊಡಲಾಗಿತ್ತು. ಅದನ್ನು ಆಲಿಸಿರುವ ಉಮಾಶಂಕರ್‌ ಅವರು ಈ ಆದೇಶ ನೀಡಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೈಸೂರು-ಕೊಡಗು ಕ್ಷೇತ್ರಕ್ಕೆ ಮೂಲಸೌಕರ್ಯ ಯೋಜನೆಗಳನ್ನು ಮಂಜೂರು ಮಾಡುತ್ತಿದೆ. ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಹೆದ್ದಾರಿ ಯೋಜನೆಗಳಿಗೆ ಸಾಕಷ್ಟು ನೆರವು ಒದಗಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಬೆಂಬಲದಿಂದ ಯೋಜನೆಗಳು ಸಾಕಾರಗೊಳ್ಳುತ್ತಿವೆ. ನನ್ನ ಕ್ಷೇತ್ರದ ಪ್ರತಿಯೊಬ್ಬರ ಪರವಾಗಿ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದ್ದಾರೆ.

Key words: Mysore-Bangalore, flyover work, process, starts, MP Yaduveer