ನಟಿ ರಮ್ಯಾಗೆ ಧಮ್ಕಿ ವಿಚಾರ: ನಟ ದರ್ಶನ್ ಫ್ಯಾನ್ಸ್ ಗೆ ಪರೋಕ್ಷ ಟಾಂಗ್ ಕೊಟ್ಟ ಸಂಸದ ಯದುವೀರ್

ಮೈಸೂರು,ಜುಲೈ,28,2025 (www.justkannada.in):  ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಗೆ ದರ್ಶನ್ ಅಭಿಮಾನಿಗಳ ಧಮ್ಕಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಅಭಿಮಾನಿಗಳಿಗೆ  ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರೋಕ್ಷ ಟಾಂಗ್ ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಂಸದ ಯದುವೀರ್,   ನಾನು ಕೂಡ ಅಂತಹ ಟೀಕೆಗಳನ್ನು ಅನುಭವಿಸಿದ್ದೇನೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲೋ  ಕುಳಿತುಕೊಂಡು ಕಮೆಂಟ್ ಹಾಕುತ್ತಾರೆ. ಅಂತವರಿಗೆ ಏನು ಮಾಡೋಕಾಗತ್ತೆ. ನಾವು ನಮ್ಮ ಕೆಲಸ ಮಾಡಿಕೊಂಡು ಹೋಗಬೇಕು. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ವಿಚಾರಣೆ ಮಾಡುತ್ತಿದೆ. ಕೊನೆಗೆ ತೀರ್ಪುನ್ನು ಕೊಡೊ ತನಕ ನಾವು ಯಾರು ಅದಕ್ಕೆ ಪ್ರತಿಕ್ರಿಯೆ ನೀಡಬಾರದು. ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಗಳನ್ನ ನಿರ್ಲಕ್ಷ ಮಾಡಬೇಕಷ್ಟೆ ಎಂದಿದ್ದಾರೆ.

ನಾಯಕತ್ವ ಇರೋದು ಕೆಲಸ ಮಾಡೋಕೆ ಹೋಲಿಕೆ ಮಾಡೋಕಲ್ಲ

ನಾಲ್ವಡಿ ಕೃಷ್ಣರಾಜ ಒಡೆಯರ್ ಗೆ ಸಿಎಂ ಸಿದ್ದರಾಮಯ್ಯ ಹೋಲಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ನಾಯಕತ್ವ ಇರೋದು ಕೆಲಸ ಮಾಡೋಕೆ ಹೋಲಿಕೆ ಮಾಡೋಕಲ್ಲ. ನಾನು ಸಂಸದನಾಗಿ ನನ್ನ ಕೆಲಸ ಮಾಡುತ್ತಿದ್ದೇನೆ. ನನ್ನ ಹಿಂದಿನವರು ಏನು ಮಾಡಿದರು ಅದನ್ನು ನಾನು ಹೋಲಿಕೆ ಮಾಡಲ್ಲ. ನನ್ನ ಆಲೋಚನೆಗಳ ಪ್ರಕಾರ ಕೆಲಸ ಮಾಡುತ್ತಿದ್ದೇನೆ. ಸರ್ಕಾರದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಯತೀಂದ್ರ ಹೇಳಿಕೆ ಖಂಡಿಸಿ ಪ್ರತಿಭಟನೆಗಳು ಆಗ್ತೀವೆ. ಕ್ಷಮೆ ಕೇಳುವಂತೆ ಆಗ್ರಹ ವ್ಯಕ್ತವಾಗುತ್ತಿದೆ. ಕ್ಷಮೆ ಕೇಳೋದು ಬಿಡೋದು ಅವರಿಗೆ ಬಿಟ್ಟಿದ್ದು. ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರೇ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಮೈಸೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ ಹಿನ್ನಲೆ, ಇದೊಂದು ಒಳ್ಳೆಯ ಕಾರ್ಯಾಚರಣೆ. ಡ್ರಗ್ಸ್ ಅನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇವೆ. ಪೊಲೀಸರು ಕೂಡ ಇನ್ನೂ ಹೆಚ್ಚಿನದಾಗಿ ಕೆಲಸ ಮಾಡಬೇಕು. ಡ್ರಗ್ಸ್ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಯದುವೀರ್ ತಿಳಿಸಿದರು.

ನರಸಿಂಹ ರಾಜ ಕ್ಷೇತ್ರದಲ್ಲಿ ಇಂತಹ ಅನೇಕ ದೂರುಗಳು ದಿನನಿತ್ಯ ಬರತ್ತದೆ. ಡ್ರಗ್ಸ್ ಮಾರಾಟ ಎಲ್ಲ ಕಡೆ ಆಗುತ್ತಿದೆ ಅನ್ನುವ ಆರೋಪ ಕೇಳಿ ಬಂದಿದೆ. ನರಸಿಂಹರಾಜ ಕ್ಷೇತ್ರದ ಜನಪ್ರತಿನಿಧಿಗಳು ಅಲ್ಲಿನ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇದನ್ನು ಸವಾಲಾಗಿ ಸ್ವೀಕರಿಸಿ ಜನರ ನಂಬಿಕೆ ಉಳಿಸಿಕೊಳ್ಳಬೇಕು ಸಂಸದ ಯದುವೀರ್ ಒಡೆಯರ್ ಹೇಳಿದರು.

ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಸಂಸದ ಯದುವೀರ್  

ವಸ್ತುಪ್ರದರ್ಶನದ ಆವರಣದಲ್ಲಿ ನೂತನ ಯುನಿಟಿ ಮಾಲ್ ನಿರ್ಮಾಣ ಹಿನ್ನಲೆ, ಸಂಸದ ಯದುವೀರ್ ಅವರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಕೇಂದ್ರ ಸರ್ಕಾರದ ಯೋಜನಯಡಿ 193 ಕೋಟಿ ವೆಚ್ಚದಲ್ಲಿ ಯುನಿಟಿ ಮಾಲ್ ನಿರ್ಮಾಣಗೊಳ್ಳುತ್ತಿದ್ದು, ಸಂಸದ ಯದುವೀರ್ ಒಡೆಯರ್ ಗೆ ಶಾಸಕ ಶ್ರೀವತ್ಸ ಸಾಥ್ ನೀಡಿದರು.

ಬಳಿಕ ಮಾತನಾಡಿದ ಯದುವೀರ್, ಮೈಸೂರಿನ ವಸ್ತುಪ್ರದರ್ಶನದ ಆವರಣದಲ್ಲಿ ಮಾಲ್ ನಲ್ಲಿ 99 ಮಳಿಗೆಗಳು ಇರುತ್ತದೆ. ಮೈಸೂರಿನ ಪರಂಪರೆ ಸಾರುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಮೈಸೂರಿನ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಎಲ್ಲಾ ರೀತಿಯ ಅಂಗಡಿಗಳನ್ನು ಕೂಡ ಇಲ್ಲಿ ತೆರೆಯಲು ನಿರ್ಧಾರ ಮಾಡಲಾಗಿದೆ. ಲೋಕಲ್ ಪ್ರಾಡಕ್ಟ್ ಗಳಿಗೆ ಮೊದಲ ಆದ್ಯತೆ ನೀಡುತ್ತೇವೆ. ಇದಕ್ಕೆ ರಾಜ್ಯ ಸರ್ಕಾರ ಜಾಗ ನೀಡಿದೆ. ಕೇಂದ್ರ ಸರ್ಕಾರ ಸಂಪೂರ್ಣ ಹಣ ನೀಡುತ್ತೆ. ಆರೂವರೆ ಎಕರೆ ಜಾಗದಲ್ಲಿ ಈ ಮಾಲ್ ನಿರ್ಮಾಣ ಆಗತ್ತದೆ. ಪಾರ್ಕಿಂಗ್ ಸೇರಿ ಎಲ್ಲವೂ ಕೂಡ ಇಲ್ಲೇ ಆಗುತ್ತದೆ ಎಂದರು.

ಪ್ರವಾಸೋಧ್ಯಮಕ್ಕೆ ಒತ್ತು ನೀಡುವ ಸಲುವಾಗಿ ಮಾಲ್ ನಿರ್ಮಾಣ ಮಾಡುತ್ತಿದ್ದೇವೆ. ಹೆಚ್ಚಿನ ಜನ ಮುಂದಿನ ದಿನಗಳಲ್ಲಿ ಇಲ್ಲಿ ಬರುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಇಲ್ಲಿ ಆಯೋಜಿಸುವ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸುತ್ತೇವೆ. ವಾರಾಂತ್ಯದಲ್ಲಿ ಸಂತೆಗಳನ್ನು ಕೂಡ ಆಯೋಜಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.

ಚುನಾವಣೆ ಸಂಧರ್ಭದಲ್ಲಿ ಸಿಎಂ ಮೈಸೂರನ್ನು ತವರು ಜಿಲ್ಲೆ ಅಂತ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಅದೇ ಗಂಭೀರತೆಯನ್ನು ಚುನಾವಣೆ ಇಲ್ಲದಿದ್ದಾಗ ತೋರಿಸಬೇಕು. ಅ ಭಾಗದ ಶಾಸಕರು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಯದುವೀರ್ ಪ್ರತಿಕ್ರಿಯೆ ನೀಡಿದರು.vtu

Key words: Threat, actress, Ramya,  MP Yaduveer, actor, Darshan