ಕಾಲ್ತುಳಿತ ಪ್ರಕರಣ ಮುಚ್ಚಿ ಹಾಕಲು ಮರು ಜಾತಿಗಣತಿಗೆ ಸರ್ಕಾರ ಪ್ಲಾನ್- ಸಂಸದ ಯದುವೀರ್ ಆರೋಪ

ಮೈಸೂರು,ಜೂನ್,11,2025 (www.justkannada.in): ಬೆಂಗಳೂರು ಕಾಲ್ತುಳಿತ ಘಟ‌ನೆಯಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಹೀಗಾಗಿ ಪ್ರಕರಣವನ್ನ ಮುಚ್ಚಿ ಹಾಕಲು, ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ, ಜನರ ದಿಕ್ಕು ತಪ್ಪಿಸಲು ಮರು ಜಾತಿಗಣತಿಗೆ ಸರ್ಕಾರ ಮುಂದಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು.

ರಾಜ್ಯದಲ್ಲಿ ಮತ್ತೆ ಜಾತಿಗಣತಿ ಮರು ಸಮೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಯದುವೀರ್, ಜನರನ್ನ ದಿಕ್ಕು ತಪ್ಪಿಸುವ ಕೆಲಸಕ್ಕೆ ಕಾಂಗ್ರೆಸ್ ನವರು ಮುಂದಾಗಿದ್ದಾರೆ. ಕಾಲ್ತುಳಿತ ಪ್ರಕರಣವನ್ನ ಮುಚ್ಚಿ ಹಾಕಲು ಮುಂದಾಗಿದ್ದಾರೆ. ಸರ್ಕಾರದವರು ಪೊಲೀಸ್ ಇಲಾಖೆಯ ಮೇಲೆ ಆರೋಪ ಮಾಡ್ತಿದ್ದಾರೆ. ಆ ಪ್ರಕರಣ ಮುಚ್ಚಿ ಹಾಕಲು ಕಾಂತರಾಜು ವರದಿ ತಂದಿದ್ದಾರೆ ಎಂದರು.

ನೂರಾರು ಕೋಟಿ ವ್ಯಯಿಸಿ ಕಾಂತರಾಜು ಆಯೋಗ ಸಿದ್ದಪಡಿಸಿದ್ದ ಜಾತಿಗಣತಿ ವರದಿಯನ್ನು ಇದುವರೆಗೂ ಬಹಿರಂಗ ಪಡಿಸಿಲ್ಲ. ಬೆಂಗಳೂರು ಕಾಲ್ತುಳಿತ ಘಟ‌ನೆಯಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ 11 ಯುವ ಜನರು ಸಾವನ್ನಪ್ಪಿದ್ದಾರೆ. ಇದರಿಂದ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ, ಜನರ ದಿಕ್ಕು ತಪ್ಪಿಸಲು ಮರು ಜಾತಿಗಣತಿಗೆ ಮುಂದಾಗಿದೆ. 90 ದಿನದಲ್ಲಿ ಮರು ಜಾತಿಗಣತಿ ನಡೆಸಲು ಸಾಧ್ಯವೇ ಇಲ್ಲ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರನ್ನು ಉಳಿಸಲು ಕಾಂಗ್ರೆಸ್ ಹೈಕಮಾಂಡ್ ಹಿಂದುಳಿದ ವರ್ಗಗಳ ಹಿತವನ್ನು ಬಲಿಕೊಟ್ಟಿದೆ. ಈಗಾಗಲೇ ಕೇಂದ್ರ ಸರ್ಕಾರ ಜನಗಣತಿಯ ಜೊತೆಗೆ ಜಾತಿಗಣತಿಯನ್ನು ಕೂಡ ನಡೆಸುವಂತೆ ಸೂಚಿಸಿದೆ. ಹಾಗಾಗಿ ರಾಜ್ಯದಲ್ಲಿ ಮರು ಜಾತಿಗಣತಿ ‌ನಡೆಸುವ ಅವಶ್ಯಕತೆ ಇಲ್ಲ. ರಾಜ್ಯದ ಜಾತಿಗಣತಿ ವಿಚಾರವನ್ನು ರಾಹುಲ್ ಗಾಂಧಿ, ವೇಣುಗೋಪಾಲ್ ನಿರ್ಧರಿಸಲು ಮುಂದಾಗಿದ್ದು ಸರಿಯಲ್ಲ. ಈ ಮರು ಜಾತಿಗಣತಿ ನಡೆಸುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂತರಾಜು ವರದಿ ಬುಟ್ಟಿಗೆ: ಸಿಎಂಗೆ ಮುಖಭಂಗ- ರಘು ಕೌಟಿಲ್ಯ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘುಕೌಟಿಲ್ಯ, ಕಾಂತರಾಜು ವರದಿಯನ್ನು ಕಾಂಗ್ರೆಸ್ ಹೈಕಮಾಂಡ್ ಕಸದ ಬುಟ್ಟಿಗೆ ಎಸೆದಿರುವುದರಿಂದ ಸಿಎಂ ಸಿದ್ದರಾಮಯ್ಯಗೆ ಮುಖಭಂಗವಾಗಿದೆ. ರಾಜ್ಯ ಸರ್ಕಾರದ ವಿವಾದಿತ ಕಾಂತರಾಜು ಆಯೋಗದ ಜಾತಿಗಣತಿ ವರದಿಯನ್ನು ಕಾಂಗ್ರೆಸ್ ಹೈಕಮಾಂಡ್ ಕೈ ಬಿಡಲು ನಿರ್ಧರಿಸಿದೆ. ಈ ನಿರ್ಧಾರವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಘೋಷಿಸಿದ್ದು ಹಲವು ಗೊಂದಲಗಳನ್ನು ಹುಟ್ಟುಹಾಕಿದೆ. ರಾಜ್ಯ ಸಚಿವ ಸಂಪುಟ ಕೈಗೊಳ್ಳಬೇಕಾದ ನಿರ್ಣಯವನ್ನು ವೇಣುಗೋಪಾಲ್ ಹೇಗೆ ಪ್ರಕಟಿಸಿದರು? ಎಂದು ಪ್ರಶ್ನಿಸಿದರು.

ಬೆಂಗಳೂರು ಕಾಲ್ತುಳಿತ ಪ್ರಕಣದಿಂದ ಕಾಂಗ್ರೆಸ್ ಪಕ್ಷದ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ಹರಾಜಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಉಳಿಸಲು ವಿಷಯಾಂತರ ಮಾಡಲು ಹೈಕಮಾಂಡ್ ಮುಂದಾಗಿದೆ. ಮರು ಜಾತಿಗಣತಿ ಹೆಸರಿನಲ್ಲಿ ಹಿಂದುಳಿದ ಜಾತಿಗಳನ್ನು ಯಾಮಾರಿಸುತ್ತಿದ್ದಾರೆ ಎಂದು ರಘುಕೌಟಿಲ್ಯ ಕಿಡಿಕಾರಿದರು.vtu

Key words: Government, re-caste census, stampede case, MP Yaduveer