ಬೆಂಗಳೂರು,ಜೂನ್,28,2025 (www.justkannada.in): ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಸ್ನಾತಕೋತ್ತರ ಸಂಸ್ಥೆ ಮತ್ತು 300 ಹಾಸಿಗೆಗಳ ಸಾಮರ್ಥ್ಯದ “Poly Trauma” ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು ಈ ಮೂಲಕ ಸಂಸದ ಸಿ.ಎನ್ ಮಂಜುನಾಥ್ ಅವರ ಮನವಿಗೆ ಸ್ಪಂದನೆ ನೀಡಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿರುವ ಸಂಸದ ಸಿ.ಎನ್ ಮಂಜುನಾಥ್, ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಸ್ನಾತಕೋತ್ತರ ಸಂಸ್ಥೆ ಮತ್ತು 300 ಹಾಸಿಗೆಗಳ ಸಾಮರ್ಥ್ಯದ “Poly Trauma” ಸ್ಥಾಪನೆಯ ಪ್ರಸ್ತಾವನೆಗೆ ಕೇಂದ್ರ ಸರ್ಕಾರದ ಅನುಮೋದನೆ ನೀಡಿರುವುದು ವೈಯುಕ್ತಿಕವಾಗಿ ಅತ್ಯಂತ ಸಂತಸ ತರಿಸಿದೆ. ಈ ಮೂಲಕ ಅನೇಕ ವರ್ಷಗಳ ಕನ್ನಡಿಗರ ಬೇಡಿಕೆ ಈಡೇರಿದಂತಾಗಿದೆ ಕಳೆದ ಒಂದು ವರ್ಷದಿಂದ ಈ ಬಗ್ಗೆ ನಿರಂತರವಾಗಿ ಕೇಂದ್ರ ಹಣಕಾಸು ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಪತ್ರದ ಮೂಲಕ ಮತ್ತು ವೈಯುಕ್ತಿಕವಾಗಿ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ.
ಪ್ರಸ್ತುತ ನಮ್ಮ ದೇಶದಲ್ಲಿ ಶೇ 15 ರಷ್ಟು ಸಾವುಗಳು ರಸ್ತೆ ಅಪಘಾತದಿಂದ ಸಂಭವಿಸುತ್ತಿವೆ ಮತ್ತು ಶೇ 30 ರಷ್ಟು ರಸ್ತೆ ಅಪಘಾತಗಳಲ್ಲಿ ಗಾಯಾಳುಗಳು ಬಹುಗಾಯಗಳಿಗೆ (Multiple Injuries) ಒಳಗಾಗುತ್ತಾರೆ. ಈ ಹಿನ್ನಲೆ ಗಾಯಗೊಂಡವರಿಗೆ ಆದಷ್ಟು ತ್ವರಿತವಾಗಿ (Golden Hour) ಒಂದೇ ಸೂರಿನಡಿ ಚಿಕಿತ್ಸೆ ಒದಗಿಸುವ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕದ ಜನತೆಗೆ ವಿಶೇಷವಾಗಿ ಬೆಂಗಳೂರಿಗರಿಗೆ “Polytrauma Centre” ಸ್ಥಾಪನೆ ಅತ್ಯಂತ ಸಹಕಾರಿಯಾಗಲಿದೆ ಹಾಗೂ ನಿಮ್ಹಾನ್ಸ್ ನ ಹಾಸಿಗೆ ಕೊರತೆಯುನ್ನು ನೀಗಿಸಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಗುಣಮುಖರಾಗುತ್ತಾರೆ. ಜಗದೀಶ್ ಶೆಟ್ಟರ್ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ಈ Polytrauma ಕೇಂದ್ರದ ಸ್ಥಾಪನೆಗಾಗಿ ಬೇಕಾಗಿರುವ ಜಮೀನನ್ನು ಬೆಂಗಳೂರು ಉತ್ತರದ ಕ್ಯಾಲಸನಹಳ್ಳಿ ಗ್ರಾಮದಲ್ಲಿ ಮಂಜೂರು ಮಾಡಿದ್ದಾರೆ.
ನವದೆಹಲಿಯ AIIMS ನಲ್ಲಿರುವ ಜಯಪ್ರಕಾಶ್ ನಾರಾಯಣ್ “Polytrauma Centre” ನಂತರದಲ್ಲಿ ದೇಶದಲ್ಲಿಯೇ ಎರಡನೇ “Polytrauma Centre” ಇದಾಗಲಿದೆ. ಇದರ ಜೊತೆಗೆ ಸ್ನಾತಕೋತ್ತರ ಪದವಿ ಘಟಕವನ್ನು ಸ್ಥಾಪಿಸುವುದರಿಂದ ಅಪಘಾತ ಚಿಕಿತ್ಸಾ ವಿಭಾಗದಲ್ಲಿ ತಜ್ಞರಿಗೆ ನುರಿತ ತರಬೇತಿ ನೀಡುವ ಮೂಲಕ ಅವರ ಸೇವೆಯನ್ನು ದೇಶಾದ್ಯಂತ ಬಳಸಿಕೊಳ್ಳಬಹುದಾಗಿದೆ ಎಂದು ಸಿ.ಎನ್ ಮಂಜುನಾಥ್ ತಿಳಿಸಿದ್ದಾರೆ.
ನಮ್ಮೆಲ್ಲರ ಮನವಿಗೆ ಸ್ಪಂದಿಸಿ ಬೆಂಗಳೂರಿನಲ್ಲಿ ನಿಮ್ಹಾನ್ಸ್ Polytrauma MCH ಸ್ನಾತಕೋತ್ತರ ಪದವಿ ಮತ್ತು 300 ಹಾಸಿಗೆ ಸಾಮರ್ಥ್ಯದ “Polytrauma Centre” ಸ್ಥಾಪನೆಯ ಪ್ರಸ್ತಾವನೆಗೆ ಅನುಮೋದನೆ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ ನಡ್ಡಾ ಅವರಿಗೆ ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಕರ್ನಾಟಕದ ಜನತೆಯ ಪರವಾಗಿ ನನ್ನ ಹೃತ್ಪೂರ್ವಕ ವಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
Key words: ‘Polytrauma Centre, Central Government, MP CN Manjunath