ಇಬ್ಬರು ಮಕ್ಕಳನ್ನ ಹತ್ಯೆಗೈದು ತಾಯಿ ಆತ್ಮಹತ್ಯೆ: ಕಾರಣವೇನು..?

ಮೈಸೂರು,ನವೆಂಬರ್,1,2025 (www.justkannada.in): ತಾಯಿಗಿಂತ ದೇವರಿಲ್ಲ ಅಂತಾರೆ ಆದ್ರೆ ಇಲ್ಲೊಬ್ಬ ತಾಯಿ ತನ್ನ ಎರಡು ಹೆಣ್ಣು ಮಕ್ಕಳ ಕುತ್ತಿಗೆ ಕುಯ್ದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಮುಸ್ಲಿಂ ಬ್ಲಾಕ್ ನಲ್ಲಿ  ನಡೆದಿದೆ.

ಹೌದು ಬೆಟ್ಟದಪುರ ಗ್ರಾಮದ ರಬಿಯಾ ಭಾನು ಮಕ್ಕಳನ್ನು ಕೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಕಳೆದ 3 ವರ್ಷಗಳ ಹಿಂದೆ ರಬಿಯಾ ಭಾನುಗೆ ಸೈಯದ್ ಮುಸಾವೀರ್ ಎಂಬುವರ ಜೊತೆಗೆ ಮದುವೆಯಾಗಿದೆ. ಇಬ್ಬರ ದಾಂಪತ್ಯ ಜೀವನಕ್ಕೆ 2 ವರ್ಷದ ಒಂದು ಹೆಣ್ಣು ಮಗು ಇದ್ದು, ಕಳೆದ 8 ದಿನಗಳ ಹಿಂದೆ ಮತ್ತೊಂದು ಹೆಣ್ಣು ಮಗು ಕೂಡ ಜನಿಸಿತ್ತು.

ಮೊದಲ ಹೆಣ್ಣು ಮಗು ಅನಮ್ ಫಾತಿಯ ವಿಶೇಷ ಚೇತನ ಮಗುವಾಗಿದ್ದ ಕಾರಣ ಕೌಟುಂಬಿಕ ಕಲಹ ಇತ್ತು ಎನ್ನಲಾಗಿದೆ. ಕಳೆದ 8 ದಿನದ ಹಿಂದೆ ಇನ್ನೊಂದು ಮಗು ಕೂಡ ಜನಿಸಿದ್ದು ಅದು ಹೆಣ್ಣು ಹೀಗಾಗಿ ತಾಯಿಯ ರಬಿಯಾ ಭಾನು ಬೇಜಾರಿನಲ್ಲಿದ್ದು ತಂದೆ ಮನೆಯಲ್ಲಿ ಬಾಣಂತನಕ್ಕೆ ಹೋಗಿದ್ದಾಳೆ.

ಇಂದು ಬೆಳಿಗ್ಗೆ ಮೊದಲ ಮಗು ಅಂಗವಿಕಲೆ ಎರಡನೇ ಮಗು ಕೂಡ ಹೆಣ್ಣು ಎಂದು ಮನನೊಂದು ಮಲಗಿದ್ದ ಮಕ್ಕಳ ಕತ್ತು ಕುಯ್ದು ತಾನು ಕೂಡ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಿಂಡಿಗೆ ಕರೆಯಲು ಕುಟುಂಬಸ್ಥರು ರೂಮಿನ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಬೆಟ್ಟದಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ

ಒಟ್ಟಾರೆಯಾಗಿ ಮಕ್ಕಳಿಲ್ಲದ ಎಷ್ಟೋ ಜನರು ಮಕ್ಕಳಾದ್ರೆ ಸಾಕು ಅಂತಿದ್ದರೆ ಮೊದಲ ಮಗು ಅಂಗವಿಕಲೆ ಎರಡನೇ ಮಗು ಹೆಣ್ಣು ಎಂದು ತಾಯಿಯೇ ಕೊಲೆ ಮಾಡಿರುವ ಘಟನೆ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.

Key words: Mysore, Mother, commits suicide, children, reason