ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ನಡುವೆಯೂ ನಡೆದಿರುವ ಮದುವೆ ಸಂಖ್ಯೆ ಕಡಿಮೆ ಇಲ್ಲ!

ಬೆಂಗಳೂರು, ಏಪ್ರಿಲ್ 26, 2021 (www.justkannada.in): 

ವಾರಾಂತ್ಯದ ಕರ್ಫ್ಯೂ ನಡುವೆಯೂ ರಾಜ್ಯದಲ್ಲಿ ನಡೆದಿರುವ ಮದುವೆಗಳ ಸಂಖ್ಯೆಗೇನು ಕಡಿಮೆ ಇಲ್ಲ!

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಾರಾಂತ್ಯದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜೋಡಿಗಳು ಷರತ್ತುಬದ್ಧ ಅನುಮತಿಯೊಂದಿಗೆ ಸಪ್ತಪದಿ ತುಳಿದಿದ್ದಾರೆ. ಲಾಕ್ ಡೌನ್ ದಿನ ಕೇಲವೇ ಸಂಬಂಧಿಕರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ರಜಾ ದಿನವಾದ ಕಾರಣ ರಾಜ್ಯಾದ್ಯಂತ ಭಾರೀ ಸಂಖ್ಯೆಯಲ್ಲಿ ಮದುವೆಗಾಗಿ ಕಲ್ಯಾಣಮಂಟಪ, ದೇಗುಲಗಳ ಛತ್ರಗಳು ಬುಕ್‌ ಆಗಿದ್ದವು. ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಲ್ಲಿದ್ದರೂ ಮಂಗಲ ಕಾರ್ಯಕ್ಕೆ ಅಡ್ಡಿಯಾಗಬಾರದು ಎನ್ನುವ ಕಾರಣಕ್ಕೆ ಮದುವೆ ಕಾರ್ಯಕ್ಕೆ ಷರತ್ತುಬದ್ಧ ಅನುಮತಿ ನೀಡಿತ್ತು.

ದಕ್ಷಿಣ ಕನ್ನಡ ಮತ್ತು ಉಡುಪಿ ಎರಡು ಜಿಲ್ಲೆಗಳಲ್ಲಿ ಒಂದೇ ದಿನ 600ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದಾರೆ.

ಚಿಕ್ಕಮಗಳೂರು 179ಕ್ಕೂ ಹೆಚ್ಚು, ಚಿತ್ರದುರ್ಗ 144, ಉತ್ತರ ಕನ್ನಡ-132, ಧಾರವಾಡ 116, ದಾವಣಗೆರೆಯಲ್ಲಿ 134 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ, ಶಿವಮೊಗ್ಗ 30, ಕೊಡಗು 40ಕ್ಕೂ ಹೆಚ್ಚು, ಬೆಂಗಳೂರು ಗ್ರಾ. 50ಕ್ಕೂ ಹೆಚ್ಚು, ಹಾವೇರಿ 89 ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 59ಕ್ಕೂ ಹೆಚ್ಚು ಜೋಡಿಗಳು ಸತಿಪತಿಗಳಾದರು ಎಂಬ ಮಾಹಿತಿ ಇದೆ.