ಮೋದಿಗೆ ನನ್ನ ಕಂಡರೆ ಭಯ: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ ಜಯ- ಸಿಎಂ ಸಿದ್ಧರಾಮಯ್ಯ ವಿಶ್ವಾಸ.

ಮೈಸೂರು,ನವೆಂಬರ್,17,2023(www.justkannada.in): ಮೋದಿಗೆ ನನ್ನ ಕಂಡರೆ ಭಯ. ಹೀಗಾಗಿಯೇ ಪಂಚ ರಾಜ್ಯ ಚುನಾವಣೆಯಲ್ಲಿ ನಮ್ಮ ಬಗ್ಗೆ ಮಾತನಾಡುತ್ತಾರೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ ಜಯ ಸಿಗಲಿದೆ ಎಂದು ಸಿಎಂ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಗ್ಯಾರೆಂಟಿಗಳ ಟೀಕಿಸಿದ ಮೋದಿ ಈಗ ಅದೇ ಗ್ಯಾರಂಟಿಗಳನ್ನೇ ಬೇರೆ ಕಡೆ ಘೋಷಣೆ ಮಾಡುತ್ತಿರುವ ಅರ್ಥ ಏನು? ರಾಜ್ಯದಲ್ಲಿ 40% ಸರ್ಕಾರ ಎಂದು ಕರೆಯುತ್ತಿದ್ದುದ್ದು  ಯಾರನ್ನ? ನಮ್ಮನ್ನೇನು ಆ ರೀತಿ ಕರೆಯುತ್ತಿಲ್ಲ. ಈ ಸತ್ಯ ಗೊತ್ತಿದ್ದರು ಸುಮ್ಮನೆ ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಟಾಂಗ್ ನೀಡಿದರು.

ಪಂಚರಾಜ್ಯ ಚುನಾವಣೆ ಇಂದು ಮತದಾನ ನಡೆಯುತ್ತಿದೆ.  ತೆಲಂಗಾಣ, ಮಧ್ಯಪ್ರದೇಶ್, ಛತ್ತೀಸ್‌ಗಡ, ರಾಜ್ಯಸ್ಥಾನ ಎಲ್ಲ ಕಡೆ ಕಾಂಗ್ರೆಸ್ ಗೆಲ್ಲುತ್ತೆ. ಈ ಚುನಾವಣೆಯ ಫಲಿತಾಂಶ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲ್ಲ. ಈಗ ನವೆಂಬರ್‌ ನಲ್ಲಿ ಇದ್ದೇವೆ. ಲೋಕಸಭೆ ಚುನಾವಣೆಗೆ  ಮಾರ್ಚ್ ಕೊನೆಯಲ್ಲಿ ನೋಟಿಫಿಕೇಷನ್ ಆಗಲಿದೆ ಎಂದರು.

ರಾಮಮಂದಿರ ಹೊಸ ವಿಚಾರ ಅಲ್ಲ.  ರಾಮಮಂದಿರಕ್ಕೆ ನಮ್ಮ ವಿರೋಧ ಇಲ್ಲ.  ಸುಪ್ರೀಂಕೋರ್ಟ್‌ನಲ್ಲಿ ತೀರ್ಮಾನ ಆಗಿದೆ.  ಅದರಂತೆ ದೇವಾಲಯ ನಿರ್ಮಾಣ ಆಗುತ್ತಿದೆ. ರಾಮಮಂದಿರದಿಂದ ಮತದಾರರು ಬದಲಾವಣೆ ಆಗುತ್ತಾರೆ ಅನ್ನೋದು ತಪ್ಪು. ದೇಶದ ಜನ ವಿವಿಧತೆಯಲ್ಲಿ ಏಕತೆ ಬಯಸುತ್ತಾರೆ. ಬ್ರಿಟೀಷರು, ಮೊಘಲರ ದಾಳಿಯ ನಂತರವೂ ದೇಶ ಒಂದಾಗಿದೆ. ಬೇರೆ ಬೇರೆ ದೇಶ, ಭಾಷೆ ಇದ್ದರೂ ಒಗ್ಗಟ್ಟು ಇದೆ.  ನಾವು ಒಳಗೊಳ್ಳುವಿಕೆಯಲ್ಲಿ  ನಂಬಿಕೆ ಇಟ್ಟುಕೊಂಡವರು ಎಂದು ಸಿಎಂ ಸಿದ್ದರಾಮಯ್ಯ  ನುಡಿದರು.

ಅಗತ್ಯವಿದ್ದರೆ ಕುಮಾರಸ್ವಾಮಿ ವಿರುದ್ಧವೂ ತನಿಖೆ ನಡೆಸಲು ಹಿಂದೆ ಬೀಳಲ್ಲ.

ಹಳೇ ಸರ್ಕಾರದ ಹಗರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಗತ್ಯವಿದ್ದರೆ ಕುಮಾರಸ್ವಾಮಿ ವಿರುದ್ಧವೂ ತನಿಖೆ ನಡೆಸಲು ಹಿಂದೆ ಬೀಳಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಬಿಟ್ ಕಾಯಿನ್, ಕೋವಿಡ್, ಮೆಡಿಕಲ್ ಕಾಲೇಜು ಮಂಜೂರಾತಿ, ಶೇ.40 ಕಮಿಷನ್ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ನಾಲ್ಕು ಸಮಿತಿಗಳನ್ನು ರಚಿಸಿ ತನಿಖೆಗೆ ವಹಿಸಿದ್ದೇವೆ. ಕಮಿಟಿಗಳು ಇನ್ನೂ ವರದಿ ಕೊಟ್ಟಿಲ್ಲ.  ಕುಮಾರಸ್ವಾಮಿ ಸುಳ್ಳು ಸುಳ್ಳೇ ಆರೋಪ ಮಾಡುತ್ತಾರೆ.  ಅದನ್ನೆಲ್ಲ ತನಿಖೆ ಮಾಡೋಕೆ ಆಗುತ್ತ ? ಆರೋಪ ಮಾಡಿದವರು ಪುರಾವೆ, ದಾಖಲೆಗಳಿದ್ದರೆ ಕೊಡಬೇಕು.  ದಾಖಲೆ ಕೊಟ್ಟರೆ ತನಿಖೆ ಮಾಡುತ್ತೇವೆ ಎಂದರು.

ಮಾಜಿ ಸಚಿವ ವಿ.ಸೋಮಣ್ಣ ಪಕ್ಷಕ್ಕೆ ಬಂದರು ಸ್ವಾಗತ.

ಜೆಡಿಎಸ್ ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಕರೆತರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ,  ಮಾಜಿ ಸಚಿವ ವಿ.ಸೋಮಣ್ಣ ಪಕ್ಷಕ್ಕೆ ಬಂದರು ಸ್ವಾಗತ. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನ ಒಪ್ಪಿ ಯಾರೇ ಬಂದರೂ ಸ್ವಾಗತಿಸುತ್ತೇನೆ. ಜಿ.ಟಿ ದೇವೇಗೌಡ ಹಾಗೂ‌ ಸೋಮಣ್ಣ ಪಕ್ಷಕ್ಕೆ ಆಹ್ವಾನಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ಭಾರತ ಈ ಬಾರಿ ವಿಶ್ವಕಪ್‌ ಗೆದ್ದೇ ಗೆಲ್ಲುತ್ತೆ.

ಏಕದಿನ ವಿಶ್ವಕಪ್ ಫೈನಲ್ ಗೆ ಭಾರತ ಲಗ್ಗೆ ಇಟ್ಟಿರುವ ಕುರಿತು ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಭಾರತ ಈ ಬಾರಿ ವಿಶ್ವಕಪ್‌ ಗೆದ್ದೇ ಗೆಲ್ತಾರೆ. ಭಾರತ – ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸುವ ವಿಶ್ವಾಸ ಇದೆ. ನಾನು ಬೆಂಗಳೂರಿನಲ್ಲಿ ಒಂದು ಪಂದ್ಯ ನೋಡಿದ್ದೆ. ನ.19 ರಂದು ನಡೆಯಲಿರುವ ಪಂದ್ಯವನ್ನ ವೀಕ್ಷಣೆ ಮಾಡ್ತೀನಿ. ಭಾರತ ತಂಡದ ಎಲ್ಲಾ ಆಟಗಾರರು ಚೆನ್ನಾಗಿ ಆಟವಾಡ್ತಿದ್ದಾರೆ. ಇದೇ ರೀತಿ ಎಲ್ಲರೂ ಒಗ್ಗೂಡಿ ಹೋರಾಡಿದರೆ ಗೆಲ್ತಾರೆ. ನಮ್ಮ ತಂಡ ಈ ಬಾರಿ ಗೆಲ್ಲುವ ನಂಬಿಕೆ ಇದೆ. ಟೀಂ ಆಗಿ ಆಟವಾಡಿದರೆ ಗೆಲುವು ಸಾಧ್ಯ. ಎಲ್ಲರೂ ಒಗ್ಗೂಡಿ ಉತ್ತಮವಾಗಿ ಆಟವಾಡಲಿ. ನಾನು ರಾತ್ರಿ 9.30 ರ ಮೇಲೆ ಮನೆಗೆ ಹೋಗುವುದು. ಸಮಯ ಸಿಕ್ಕಾಗ ನಾನು ಮನೆಯಲ್ಲಿ ಕ್ರಿಕೆಟ್ ನೋಡ್ತೀನಿ‌ ಎಂದು ತಿಳಿಸಿದರು.

Key words: Modi – afraid – me- CM- Siddaramaiah