ಬೆಂಗಳೂರು,ಆಗಸ್ಟ್,12,2026 (www.justkannada.in): ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಜೈಲಿನ ವಿವಿಧೆಡೆ ಖೈದಿಗಳ ಬಳಿಯಿಂದ 10ಕ್ಕೂ ಹೆಚ್ಚು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ದಾಳಿಯ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್ ನಲ್ಲಿಯೂ ಮೊಬೈಲ್ಫೋನ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಜೈಲಿನೊಳಗೆ ಪ್ರಜ್ವಲ್ ರೇವಣ್ಣ ಅವರು ಆ್ಯಂಡ್ರಾಯ್ಡ್ ಮೊಬೈಲ್ ಬಳಸುತ್ತಿದ್ದರೇ ಎಂಬ ಅನುಮಾನ ಸಿಸಿಬಿ ಪೊಲೀಸರಲ್ಲಿ ಮೂಡಿದೆ.
ಕಾರಾಗೃಹದ ವಿವಿಧ ಬ್ಯಾರಕ್ ಗಳು ಹಾಗೂ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಮೊಬೈಲ್ಫೋನ್ ಗಳ ಜೊತೆಗೆ ಖೈದಿಗಳ ಬಳಿ ಇದ್ದ ಐಷಾರಾಮಿ ಮತ್ತು ನಿಷೇಧಿತ ವಸ್ತುಗಳನ್ನು ಸಹ ವಶಕ್ಕೆ ಪಡೆದಿದ್ದಾರೆ.
ಜೈಲಿನ ಭದ್ರತಾ ವ್ಯವಸ್ಥೆಯನ್ನು ಮೀರಿ ಮೊಬೈಲ್ ಗಳು ಹೇಗೆ ಒಳಗೆ ಬಂದವು? ಅವುಗಳನ್ನು ಯಾರು ಬಳಸುತ್ತಿದ್ದರು? ಜೈಲು ಸಿಬ್ಬಂದಿಯ ಸಹಕಾರ ಅಥವಾ ನಿರ್ಲಕ್ಷ್ಯ ಇದೆಯೇ? ಎಂಬ ಹಲವು ಆಯಾಮಗಳಲ್ಲಿ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಶೇಷವಾಗಿ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್ ನಲ್ಲೇ ಮೊಬೈಲ್ ಪತ್ತೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ತಂದಿದೆ. ಪತ್ತೆಯಾದ ಮೊಬೈಲ್ ಗಳ ಕಾಲ್ ರೆಕಾರ್ಡ್, ಡೇಟಾ ಹಾಗೂ ಬಳಕೆಯ ಕುರಿತ ಮಾಹಿತಿಯನ್ನು ಪರಿಶೀಲಿಸುವ ಸಾಧ್ಯತೆಯಿದೆ.
ಸದ್ಯ ಸಿಸಿಬಿ ಪೊಲೀಸರು ಮೊಬೈಲ್ ಗಳ ಮೂಲ, ಬಳಕೆದಾರರು ಹಾಗೂ ಜೈಲಿನೊಳಗೆ ಅವುಗಳ ಬಳಕೆಯ ಹಿಂದಿರುವ ಜಾಲದ ಕುರಿತು ತನಿಖೆ ಮುಂದುವರಿಸಿದ್ದಾರೆ. ದಾಳಿಯ ವೇಳೆ ಪತ್ತೆಯಾದ ವಸ್ತುಗಳ ಆಧಾರದ ಮೇಲೆ ಮುಂದಿನ ಹಂತದ ತನಿಖೆ ನಡೆಯುತ್ತಿದೆ.
Key words: CCB, raids, Parappana Agrahara, Jail, Mobile found, Prajwal Revanna, barracks






