ನೂತನ ಜನಗಣತಿಯ ಆಧಾರದಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸಿ: ಎಂ‌ಎಲ್‌ ಸಿ ಕೆ.ಶಿವಕುಮಾರ್

ಮೈಸೂರು,ಏಪ್ರಿಲ್, 18,2026 (www.justkannada.in): ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಹಾಗೂ ಕ್ಷೇತ್ರ ಮರುವಿಂಗಡಣೆ ಕುರಿತ ಸಂವಿಧಾನ ತಿದ್ದುಪಡಿ ಮಸೂದೆಗೆ ಸೋಲಾಗಿರುವುದು ದೇಶದ ಸಾರ್ವಭೌಮದ ಹಿತದೃಷ್ಟಿಯಿಂದ ಒಳ್ಳೆಯದು. ನೂತನ ಜನಗಣತಿಯ ಆಧಾರದಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅವರು ಒತ್ತಾಯಿಸಿದರು.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಶಿವಕುಮಾರ್ ಅವರು, ಮಹಿಳೆಯರಿಗೆ ರಾಜಕೀಯವಾಗಿ ಮೀಸಲಾತಿ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಮಹಿಳೆಯರ ಸಮರ್ಥವಾದ ನಾಯಕತ್ವಕ್ಕೆ ಮೀಸಲಾತಿ ಅಗತ್ಯವಿದೆ. ಆದರೆ ಕೇಂದ್ರ ಸರ್ಕಾರವು ಸರ್ವಪಕ್ಷ ಸಭೆ ಕರೆಯದೆ ನೇರವಾಗಿ ವಿಶೇಷ ಅಧಿವೇಶನ ನಡೆಸಿ ಮಸೂದೆ ಮಂಡಿಸಿದೆ. ಈ ರೀತಿಯ ತರಾತುರಿಯಲ್ಲಿ ಮಹಿಳಾ ಮೀಸಲಾತಿ ಜಾರಿ ಮಾಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.

ಈ ಮಸೂದೆ ಪ್ರಕಾರ 2011 ರ ಜನಗಣತಿಯ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಿ, ಮಹಿಳಾ ಮೀಸಲಾತಿ ಕಾನೂನು ಜಾರಿ ಮಾಡುವುದಾಗಿದೆ‌. ಕ್ಷೇತ್ರ ಮರುವಿಂಗಡಣೆಯ ಹಿಂದೆ ಬಹುದೊಡ್ಡ ಹುನ್ನಾರ ಅಡಗಿದೆ. ಈಗಾಗಲೇ ಅಸ್ಸಾಂ ಹಾಗೂ ಜಮ್ಮು ಕಾಶ್ಮೀರದಲ್ಲಿ ನಡೆದಂತಹ ಕ್ಷೇತ್ರ ಮರುವಿಂಗಡಣೆ ಬೇಡವಾಗಿದೆ. ತಮಿಳುನಾಡು ಮತ್ತು ಪಶ್ಚಿಮಬಂಗಾಳ ರಾಜ್ಯಗಳ ಚುನಾವಣೆಯ ಹೊಸ್ತಿಲಲ್ಲಿ ಕೇಂದ್ರ ಸರ್ಕಾರವು ಈ ರಾಜಕೀಯ ಮಾಡುತ್ತಿದೆ ಎಂದು ಹೇಳಿದರು.

ಸರ್ವಪಕ್ಷಗಳ ಸಲಹೆ ಪಡೆದುಕೊಂಡು ನೂತನ ಜಾತಿ ಜನಗಣತಿ ಆಧಾರದಂತೆ ಮಹಿಳಾ ಮೀಸಲಾತಿಯ ಪ್ರತ್ಯೇಕ ಮಸೂದೆಯನ್ನು ಮಂಡಿಸಿ ಮಹಿಳೆಯರಿಗೆ ಶಾಸನಬದ್ಧವಾದ ಅಧಿಕಾರವನ್ನು ನೀಡಬೇಕು. ಅದರಲ್ಲಿಯೂ ಮುಖ್ಯವಾಗಿ ಎಸ್.ಸಿ, ಎಸ್‌ ಟಿ, ಒಬಿಸಿ ಮಹಿಳೆಯರಿಗೆ ಈ ಮಹಿಳಾ ಮೀಸಲಾತಿಯಲ್ಲಿ ಒಳಮೀಸಲು ಕಲ್ಪಿಸಬೇಕು. ಇಲ್ಲವಾದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಕುಟುಂಬದವರ ಪಾಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತರಾತುರಿಯಲ್ಲಿ ಜಾರಿ ಮಾಡಲು ಹೊರಟಿದ್ದ ಈ ಮಸೂದೆಗೆ ಸೋಲಾಗಿರುವುದನ್ನು ಸ್ವಾಗತಿಸುತ್ತೇನೆ. ಈ ಸಂಬಂಧ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳ ನಡೆ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಪೂರ್ವಗ್ರಹವಿಲ್ಲದೆ ಈ ಮಸೂದೆ ಜಾರಿ ಮಾಡಿದರೆ ಬೆಂಬಲಿಸಲಾಗುವುದು ಎಂದು ಹೇಳಿದರು.

1993ರ ಮಂಡಲ್ ಕಮಿಷನ್ ಆಧಾರದ ಮೀಸಲಾತಿಯಡಿ ಹಿಂದುಳಿದ ವರ್ಗಗಳಿಗೆ ರಾಜಕೀಯವಾಗಿ ಆಯಕಟ್ಟಿನ ಸ್ಥಾನಗಳಲ್ಲಿ ಸಂಪೂರ್ಣವಾಗಿ ಅವಕಾಶ ದೊರಕಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ದೊರಕಲು ಅಂಬೇಡ್ಕರ್ ಅವರು ನೀಡಿದ ರಾಜಕೀಯ ಮೀಸಲಾತಿ ಕಾರಣವಾಗಿದೆ. ಇಲ್ಲವಾದಲ್ಲಿ ಈ ಸಮುದಾಯಗಳು ತೊಂದರೆಗೆ ಸಿಲುಕುತ್ತಿದ್ದವು ಎಂದು ಹೇಳಿದರು.

Key words: Implement, women’s reservation, new census, MLC, K. Shivakumar