ಮೈಸೂರು, ನವೆಂಬರ್,3,2025 (www.justkannada.in): ಕಾವೇರಿ ಮತ್ತು ಕಪಿಲಾ ನದಿಯ ಪ್ರವಾಹದಿಂದ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣ ಸೇರಿದಂತೆ ಚಾಮರಾಜನಗರ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಉಂಟಾಗುತ್ತಿರುವ ಹಾನಿಯನ್ನು ತಡೆಯಲು ನದಿಗಳ ದಂಡೆಯ ಉದ್ದಕ್ಕೂ ತಡೆಗೋಡೆಗಳನ್ನು ನಿರ್ಮಿಸಲು 500 ಕೋಟಿ ರೂ. ವಿಶೇಷ ಆರ್ಥಿಕ ನೆರವು ಅಥವಾ ಅನುದಾನ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಡಾ.ಕೆ.ಶಿವಕುಮಾರ್ ಅವರು ಕೇಂದ್ರ ಸರ್ಕಾರದ 16ನೇ ಹಣಕಾಸು ಆಯೋಗಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಹಣಕಾಸು ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿರುವ ಶಿವಕುಮಾರ್ ಅವರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಅಡಿಯಲ್ಲಿ ಅನುದಾನ ಕಲ್ಪಿಸಿಬೇಕೆಂದು ಕೋರಿದ್ದಾರೆ. ನಂಜನಗೂಡು, ತಿ.ನರಸೀಪುರ, ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಪ್ರವಾಹದಿಂದ ನದಿ ದಂಡೆಯ ಬದಿಯಲ್ಲಿರುವ ಗ್ರಾಮಗಳಿಗೆ ನೀರು ನುಗ್ಗುತ್ತಿದ್ದು, ಇದರಿಂದಾಗಿ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಗಮನ ಸೆಳೆದಿದ್ದಾರೆ.
ಪ್ರತೀ ಮುಂಗಾರಿನ ಸಂದರ್ಭದಲ್ಲಿ ಮಳೆ ಹೆಚ್ಚಾದರೆ ಕಬಿನಿ ಮತ್ತು ಕಾವೇರಿ ಜಲಾಶಯದಿಂದ ಹೆಚ್ಚಿನ ನೀರನ್ನು ಹೊರಬಿಡಲಾಗುತ್ತದೆ. ಆ ವೇಳೆ ನದಿಯಲ್ಲಿ ಪ್ರವಾಹ ಉಂಟಾಗಿ ಬಡ, ಕೃಷಿ ಕಾರ್ಮಿಕರು ಸೇರಿದಂತೆ ನಾಗರಿಕರು ಸಂಕಷ್ಟಕ್ಕೆ ಸಿಲುಕುತ್ತಾರೆ.
ಪ್ರವಾಹದ ಸಂದರ್ಭದಲ್ಲಿ ಅವರನ್ನು ಪದೇ ಪದೇ ಬೇರೆಡೆ ಸ್ಥಳಾಂತರಿಸಿ, ತಾತ್ಕಾಲಿಕವಾಗಿ ನಿರ್ಮಿಸಿದ ಶಿಬಿರಗಳಲ್ಲಿ ಒಂದೆರಡು ತಿಂಗಳ ಕಾಲ ಅವರಿಗೆ ವಸತಿ ಕಲ್ಪಿಸಲಾಗುತ್ತಿದೆ. ಹೀಗೆ ಗ್ರಾಮಸ್ಥರ ಸ್ಥಳಾಂತರದಿಂದ ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗಿದೆ. ಕೊಳ್ಳೇಗಾಲ ತಾಲೂಕಿನ ಮುಳ್ಳೂರು, ಹಳೇ ಅನ್ನಹಳ್ಳಿ, ಹರಳೆ, ಸರಗೂರು, ಧನಗೆರೆ, ಸತ್ತೇಗಾಲ, ಎಡಮುರಿ ಗ್ರಾಮದಲ್ಲಿ ನೆರೆಯಿಂದ ಜನರಿಗೆ ತೊಂದರೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ನಂಜನಗೂಡು ಹಾಗೂ ತಿ.ನರಸೀಪುರದಲ್ಲಿ 2. 5 ಕಿ.ಮೀ ನಿಂದ 3.5 ಕಿ.ಮೀವರೆಗೆ, ಕೊಳ್ಳೇಗಾಲ ತಾಲೂಕಿನಲ್ಲಿ 6 ಕಿ.ಮೀ ಉದ್ದಕ್ಕೂ ನದಿಯ ಎರಡೂ ದಂಡೆಗಳಲ್ಲಿ ತಡೆಗೋಡೆ ನಿರ್ಮಿಸಬೇಕಿದೆ. ದಶಕಗಳಿಂದಲೂ ಈ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುತ್ತಿದ್ದು, ಜನರು ಹೈರಾಣಾಗಿದ್ದಾರೆ. ಈ ತಡೆಗೋಡೆ ನಿರ್ಮಾಣವು ಪ್ರವಾಹದಿಂದ ತೊಂದರೆಗೆ ಸಿಲುಕುವ ಜನರಿಗೆ ಶಾಶ್ವತವಾದ ಪರಿಹಾರ ಕಲ್ಪಿಸಿದಂತಾಗುತ್ತದೆ. ಅಲ್ಲದೆ ಮಣ್ಣಿನ ಸವಕಳಿಯನ್ನು ತಡೆಗಟ್ಟಬಹುದು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Key words: Mysore, 500 crores, construction, MLC, K. Shivakumar , Central Government







