ದಾವಣಗೆರೆ,ಏಪ್ರಿಲ್,3,2026 (www.justkannada.in) ರಾಜ್ಯದಲ್ಲಿ ಅಡಳಿತ ನಡೆಸಿದ ಇತರೆ ಸಿಎಂಗಳಿಗಿಂತ ಸಿದ್ದರಾಮಯ್ಯ ಸಿಎಂ ಆಗಿ ಮಾಡಿದ ಸಾಲವೇ ಹೆಚ್ಚು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಆರೋಪಿಸಿದರು.
ಇಂದು ಮಾತನಾಡಿದ ಎಂಎಲ್ ಸಿ ಸಿ.ಟಿ ರವಿ, ಕಳೆದ 22 ವರ್ಷ ಆಡಳಿತ ನಡೆಸಿದ ಮುಖ್ಯಮಂತ್ರಿಗಳಿಗಿಂತ 8 ವರ್ಷ ಅಧಿಕಾರ ನಡೆಸಿದ ಸಿದ್ದರಾಮಯ್ಯ ಅವರು ಮಾಡಿದ ಸಾಲವೇ ಹೆಚ್ಚು. ಮುಖ್ಯಮಂತ್ರಿ ಅವಧಿಯಲ್ಲಿ ಅವರು ₹ 4.30 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ರಾಜ್ಯದ ಒಟ್ಟು ಸಾಲ ₹ 8.32 ಲಕ್ಷ ಕೋಟಿ ಇದೆ ಎಂದು ವಾಗ್ದಾಳಿ ನಡೆಸಿದರು.
ಸಚಿವರ ಆಪ್ತ ಬಳಗ ಡ್ರಗ್ಸ್ ದಂಧೆಯಲ್ಲಿ ತೊಡಗಿದೆ. ಭ್ರಷ್ಟಾಚಾರ ತಾಂಡವಾಡುತ್ತಿದೆ. ಜಿಲ್ಲಾ ಮಂತ್ರಿ ಸಂಸದರು ಜನ ಸಾಮಾನ್ಯರ ಕೈಗೆ ಸಿಗುತ್ತಿಲ್ಲ. ರಾಜ್ಯದಲ್ಲಿ ನಂದಿನಿ ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಸಲಾಗಿದೆ. ಇಂಧನದ ಮೇಲೆ ಹೆಚ್ಚು ಸೆಸ್ ವಿಧಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುವಂತೆ ಮಾಡಲಾಗಿದೆ. ರಾಜ್ಯದಲ್ಲಿರುವುದು ಹಗಲು ದರೋಡೆ ಸರ್ಕಾರ’ ಎಂದು ಹರಿಹಾಯ್ದರು.
Key words: Siddaramaiah, debt, MLC, C.T. Ravi







