ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಿ : ಶಾಸಕ ತನ್ವೀರ್ ಸೇಠ್

ಮೈಸೂರು ಆಗಸ್ಟ್,1,2025 (www.justkannada.in): ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು. ಯುವ ಜನತೆ ಯಾವದೇ ವ್ಯಸನಗಳಿಗೆ ಒಳಗಾಗಬಾರದು ಎಂದು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ತಿಳಿಸಿದರು.

ಇಂದು ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ಮೈಸೂರು ಇವರ ಸಹಯೋಗದಲ್ಲಿ ಡಾ. ಮಹಾಂತೇಶ್ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ  ವ್ಯಸನ ಮುಕ್ತ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ತನ್ವೀರ್ ಸೇಠ್ ಮಾತನಾಡಿದರು.

ನಮ್ಮ ಆರೋಗ್ಯಕ್ಕೆ ಹಾಗೂ ಸಮಾಜದ ಆರೋಗ್ಯಕ್ಕೆ ಹಾನಿಕಾರಕವಾದ ಯಾವುದೇ ವ್ಯಸನವನ್ನು ನಾವು ಅಳವಡಿಸಿಕೊಳ್ಳಬಾರದು. ಸಮಾಜವನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಯುವಜನತೆಯ ಮೇಲೆ ಇದೆ. ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ನಿಮ್ಮ ಕೊಡುಗೆ ಅಪಾರವಾದದ್ದು. ವಿಧ್ಯಾರ್ಥಿ ಸಮೂಹ ಇಂದು ಬಹುಬೇಗ ಮಾದಕ ವಸ್ತುಗಳಿಗೆ ಒಳಗಾಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆ ಅಪರಾಧ ಎಂದು ತಿಳಿಸಿದರು.

ಮೊಬೈಲ್ ಕೂಡ ಒಂದು ವ್ಯಸನವಾಗಿದೆ. ಅವಶ್ಯಕತೆಗೆ ಅನುಗುಣವಾಗಿ ಮೊಬೈಲ್ ಬಳಕೆ ಮಾಡಬೇಕು. ವಿಧ್ಯಾರ್ಥಿ ದೆಸೆಯಲ್ಲಿ ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು. ನನ್ನ ಒಬ್ಬನಿಂದ ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಅಂದುಕೊಳ್ಳಬಾರದು. ಪ್ರತಿಯೊಬ್ಬರು ಉತ್ತಮ ಗುಣಗಳನ್ನು ಅಳವಡಿಸಿಕೊಂಡರೆ ಉತ್ತಮ ಸಮಾಜ ಹಾಗೂ ವಾಸಕ್ಕೆ ಯೋಗ್ಯವಾದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ಇಂತಹ ಕಾರ್ಯಕ್ರಮಗಳು ಯೋಜನೆಗೆ ಸೀಮಿತವಾಗಬಾರದು. ತಾವು ಈ ಕಾರ್ಯಕ್ರಮದ ಉದ್ದೇಶಗಳನ್ನು ಅರ್ಥ ಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಾವುದೇ ಸಮಾಜಕ್ಕೆ ಹಾನಿಕರವಾದ ವಸ್ತುಗಳನ್ನು ತ್ಯಜಿಸಬೇಕು. ಸಮಾಜವನ್ನು ಜೋಡಿಸುವಂತಹ ಕೆಲಸವನ್ನು ಪ್ರತಿಯೊಬ್ಬರು ಮಾಡೋಣ. ಮಹಾಂತೇಶ ಶಿವಯೋಗಿಗಳ ಜೀವನ ಮೌಲ್ಯಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಕುಮಾರಸ್ವಾಮಿ ಅವರು ಮಾತನಾಡಿ ಕಾಯಿಲೆ ಇಲ್ಲದವರೆಲ್ಲ ಆರೋಗ್ಯವಂತರಲ್ಲ. ಆರೋಗ್ಯವಂತ ಎಂದರೆ ಮಾನಸಿಕ ದೈಹಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವದು.  ಯಾರು ಮಾದಕ ವಸ್ತುಗಳ ಸೇವನೆಗೆ ಒಳಗಾಗಬಾರದು. ಈ ಬಗ್ಗೆ ಆಶಾ ಕಾರ್ಯಕರ್ತೆಯರು ಅರಿವು ಮೂಡಿಸುತ್ತಾ ಇದ್ದಾರೆ. ವಿಧ್ಯಾರ್ಥಿಗಳು ಮೊಬೈಲ್ ನ್ನು ಹೆಚ್ಚು ಬಳಕೆ ಮಾಡಬಾರದು. ಹೆಚ್ಚು ಮೊಬೈಲ್ ಬಳಕೆ ನಮ್ಮ ಮೆದುಳಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜು ಅವರು ಮಾತನಾಡಿ  ಪೂಜ್ಯ ಡಾ  ಮಹಾಂತೇಶ ಶಿವಯೋಗಿ ಸ್ವಾಮಿಜಿಯವರು ಭಕ್ತರ ಬಳಿ ಜೋಳಿಗೆಯನ್ನು ಹಿಡಿದು ತಮ್ಮ ದುಶ್ಚಟಗಳನ್ನು ನನ್ನ ಜೋಳಿಗೆಯಲ್ಲಿ ಹಾಕಿ, ಈ ಮೂಲಕ ತಮ್ಮ ದುಶ್ಚಟಗಳನ್ನು ತ್ಯಜಿಸಿ ಎಂದು ಅರಿವು ಮೂಡಿಸಿದರು ಆದ್ದರಿಂದ ಇವರ ಜನ್ಮ ದಿನವನ್ನು ವ್ಯಸನ ಮುಕ್ತ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತಿದೆ. ಇವರು ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ತಮ್ಮ ಜೀವನವನ್ನು ಮುಡುಪಾಗಿ ಇಟ್ಟಿದ್ದರು ಎಂದು ತಿಳಿಸಿದರು.

18 ರಿಂದ 49 ರವರೆಗಿನ ವರ್ಷಗಳಲ್ಲಿ ಯಾವುದೇ ಚಟ ವ್ಯಸನಗಳಿಗೆ ಒಳಗಾಗದೆ ಇದ್ದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. 100 ಜನರಲ್ಲಿ 24 ಜನರಿಗೆ ಹೈ ಬಿಪಿ ಕಂಡುಬರುತ್ತಿದೆ. ಸಕ್ಕರೆ ಕಾಯಿಲೆ ಹೆಚ್ಚು ಕಂಡುಬರುತ್ತಿದ್ದು ಇದು ಸೈಲೆಂಟ್ ಕಿಲ್ಲರ್ ಆಗಿರುತ್ತದೆ. ಇವುಗಳನ್ನು ಹತೋಟಿಯಲ್ಲಿ ಇಡಲು ಹಿತ ಮಿತವಾದ ಸಮತೋಲನ ಆಹಾರವನ್ನು ಸೇವನೆ ಮಾಡಬೇಕು ಎಂದು ತಿಳಿಸಿದರು.

ಮನೋ ವೈದ್ಯ ತಜ್ಞರಾದ  ಡಾ. ಮಂಜುಶ್ರೀ ಅವರು ವಿಶೇಷ ಉಪನ್ಯಾಸ ನೀಡಿ ಮಾದಕ ವಸ್ತುಗಳು ಎಂದರೆ ನಮ್ಮ ಮೆದುಳು ಹಾಗೂ ನರಮಂಡಲದ ಮೇಲೆ ದುಷ್ಪರಿಣಾಮ ಬೀರುವ ವಸ್ತುಗಳನ್ನು ಮಾದಕ ವಸ್ತುಗಳು ಅಥವಾ ಮಾದಕ ದ್ರವ್ಯಗಳು ಎಂದು ಕರೆಯಲಾಗುತ್ತದೆ. ತಂಬಾಕು ಉತ್ಪನ್ನಗಳು, ಆಲ್ಕೊಹಾಲ್ ಗಳು ಗಾಂಜಾ, ಹೆರಾಯಿನ್, ಕೊಕೇನ್, ಎಂಡಿಎಂಎ ಮುಂತಾದವು ಮಾದಕ ವಸ್ತುಗಳು ಆಗಿವೆ. ಕಾಲೇಜು ದಿನಗಳಲ್ಲಿ ಕುತೂಹಲಕ್ಕೆ, ಸ್ನೇಹಿತರ ಪ್ರಚೋದನೆಯಿಂದ ಮಾದಕ ವಸ್ತುಗಳ ಬಳಕೆ ಪ್ರಾರಂಭವಾಗುತ್ತದೆ. ನಂತರ ಇದು ನಿಯಮಿತ ಬಳಕೆ ಪ್ರಾರಂಭವಾಗುತ್ತದೆ. ನಂತರ ಇದರ ದುರುಪಯೋಗ ಪ್ರಾರಂಭವಾಗಿ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ನಂತರ ಇದಕ್ಕೆ ದಾಸರಾಗಿ ವ್ಯಸನಕ್ಕೆ ಒಳಗಾಗುತ್ತಾರೆ. ಈ ಹಂತದಲ್ಲಿ ಇದರಿಂದ ಹೊರಕ್ಕೆ ಬರುವುದು ಕಷ್ಟವಾಗುತ್ತದೆ ಎಂದು ತಿಳಿಸಿದರು.

ನಮ್ಮ ದೇಶದಲ್ಲಿ ಹೆಚ್ಚಾಗಿ ಬಳಕೆ ಮಾಡುವ ಮಾದಕ ವಸ್ತುಗಳು ಎಂದರೆ ಮಧ್ಯ ಹಾಗೂ ತಂಬಾಕು ಉತ್ಪನ್ನಗಳು. ಇವುಗಳ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ತಂಬಾಕು ಉತ್ಪನ್ನಗಳಿಗೆ ಒಳಗಾದವರು ಬಿಡುವುದು ಹೆಚ್ಚು ಕಷ್ಟವಾಗುತ್ತದೆ. ತಂಬಾಕು ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ತಿಳಿಸಿದರು.

ಗಾಂಜಾ ಬಳಕೆ ಹೆಚ್ಚಿನ ಮತ್ತು ಬರಿಸುತ್ತದೆ. ಇದು ಪ್ರತಿಯೊಬ್ಬರ ಮೇಲೆ ಅನುಮಾನ ಮೂಡಿಸುತ್ತದೆ. ಮಾದಕ ವಸ್ತುಗಳ ದುಷ್ಪರಿಣಾಮಗಳು ಆರಂಭದಲ್ಲಿ ಕಾಣಿಸುವುದಿಲ್ಲ. ನಿರಂತರವಾಗಿ ಬಳಕೆ ಮಾಡುತ್ತಾ ಹೋದಂತೆ ದುಷ್ಪರಿಣಾಮಗಳು ಗೋಚರಿಸುತ್ತವೆ. ಅಪೀಮನ್ನು ಗಿಡದಿಂದ ಬೆಳದು ಮಾರಾಟ ಮಾಡುತ್ತಾರೆ. ಇದನ್ನು ಮೂಗಿನ ಮೂಲಕ, ಇಂಜೆಕ್ಷನ್ ಮೂಲಕ,  ನಾಲಿಗೆಯ ಕೆಳಗೆ ಇಟ್ಟುಕೊಂಡು ಪಡೆಯುತ್ತಾರೆ.  ಇದನ್ನು ಹೆಚ್ಚು ತೆಗೆದುಕೊಂಡರೆ ಓವರ್ ಡೋಸ್ ಆಗಿ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳಿವೆ. ಇದರ ಬಳಕೆಯಿಂದ ಹೃದಯಾಘಾತಗಳು ಹೆಚ್ಚಾಗಿ ಆಗುತ್ತವೆ. ಹೆರಾಯಿನ್ ಅನ್ನು ನೀರಿನಲ್ಲಿ ಹಾಕಿ ಇಂಜೆಕ್ಟ್ ಮಾಡಿಕೊಳ್ಳುತ್ತಾರೆ. ಇದರ ಬಳಕೆಯಿಂದ ಹೃದಯಾಘಾತಗಳು ಆಗುತ್ತವೆ ಎಂದು ಮಾಹಿತಿ ನೀಡಿದರು.

ಮಾದಕ ವ್ಯಸನಕ್ಕೆ ಒಳಗಾಗಿರುವವರನ್ನು ಮೊದಲು ಗುರುತಿಸಬೇಕು. ಇವರಿಗೆ ಕೌನ್ಸಿಲಿಂಗ್ ನಡೆಸಲಾಗುತ್ತದೆ.  ಇವರಿಗೆ ಆರೋಗ್ಯ ಇಲಾಖೆಯ ವತಿಯಿಂದ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆ ಪಡೆಯಲು ಭಯ ಬೇಡ. ಚಿಕಿತ್ಸೆ ಪಡೆಯುವವರ ಮಾಹಿತಿಯನ್ನು ಬಹಿರಂಗ ಪಡಿಸುವುದಿಲ್ಲ. ಹಲವಾರು ಎನ್ ಜಿಓಗಳ ಮೂಲಕ ಸಹ ಚಿಕಿತ್ಸೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಮಲೈ ಮಾದೇಶ್  ಅವರು ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ ಹರೀಶ್ ಅವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.vtu

Key words: Everyone , join , build ,addiction-free, society, MLA, Tanveer sait